ಉಡುಪಿ: ಪೇಜಾವರ ಶ್ರೀಗಳಿಂದ ಕೃಷ್ಣನಿಗೆ ಆರ್ಘ್ಯ ಪ್ರದಾನ, ವಿಶೇಷಪೂಜೆ, ಮುದ ನೀಡುತ್ತಿವೆ ಮದ್ದು ಮಕ್ಕಳ ಮುದ್ದುಕೃಷ್ಣ ಸ್ಪರ್ದೆ, ರಸ್ತೆ ರಸ್ತೆಯಲ್ಲಿ ಅಬ್ಬರಿಸುತ್ತಿರುವ ಹುಲಿ ವೇಷಾಧಾರಿಗಳು, ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿರುವ ಕೃಷ್ಣ ಮಠ. ಇದು ಪೊಡವಿಗೊಡೆಯ, ಕಡೆಗೋಲು ಕೃಷ್ಣನ ತವರೂರು ಉಡುಪಿಯಲ್ಲಿ ನಡೆಯುತ್ತಿರುವ ಕೃಷ್ಣ ಜನ್ಮಾಷ್ಟಮಿಯ ಝಲಕ್…
ಇಡೀ ಉಡುಪಿಯೇ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿದೆ. ಪರ್ಯಾಯದ ಬಳಿಕ ಉಡುಪಿಯ ಜನತೆಗೆ ದೊಡ್ಡ ಹಬ್ಬ ಎಂದರೆ ಕೃಷ್ಣ ಜನ್ಮಾಷ್ಟಮಿ. ಈ ಭಾರಿ ಮೂರು ದಿನಗಳ ಕಾಲ ಕೃಷ್ಣ ಜನ್ಮಾಷ್ಟಮಿಯ ಹಿನ್ನಲೆಯಲ್ಲಿ ಇಡೀ ಉಡುಪಿಯೇ ಸಂಭ್ರಮದಲ್ಲಿ ಮುಳುಗಿದೆ. ಎರಡು ದಿನಗಳ ಆರ್ಘ್ಯ ಪ್ರದಾನ ನಡೆಯುವ ಹಿನ್ನಲೆಯಲ್ಲಿ ನಿನ್ನೆ ಮಧ್ಯ ರಾತ್ರಿ ಪರ್ಯಾಯ ಮಠಾದೀಶರಾದ ಪೇಜಾವರ ವಿಶ್ವೇಶತೀರ್ಥ ಶ್ರೀ ಪಾದರು ಕೃಷ್ಣನಿಗೆ ಆರ್ಘ್ಯ ಪ್ರದಾನ ಮಾಡಿದರು. ಕಿರಿಯ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರೂ ಕೃಷ್ಣನಿಗೆ ಆರ್ಘ್ಯ ಪ್ರದಾನ ಮಾಡಿದರು. ಕೃಷ್ಣ ಜನ್ಮಾಷ್ಟಮಿಗಾಗಿ ಕಡೆಗೋಲು ಕೃಷ್ಣನ ರೀತಿಯಲ್ಲೇ ಮಣ್ಣಿನ ಮೂರ್ತಿ ರಚಿಸುವುದು ಸಂಪ್ರದಾಯ. ಈ ಮೂರ್ತಿಯ ಎದುರು ಶಂಖದಲ್ಲಿ ಪರ್ಯಾಯ ಶ್ರೀಗಳು ಆರ್ಘ್ಯ ಪ್ರದಾನ ಮಾಡುವುದು ಸಂಪ್ರದಾಯವಾಗಿದ್ದು ಈ ಮೂರ್ತಿಯನ್ನು ಮೊಸರು ಕುಡಿಕೆಯದು ಮೆರವಣಿಗೆ ಮಾಡಿ ಬಳಿಕ ಜಲಸ್ತಂಭನ ಮಾಡಲಾಗುತ್ತದೆ. ಪೇಜಾವರ ಶ್ರೀಗಳು ಇಂದು ಕೂಡಾ ಉಪವಾಸ ವೃತ ಕೈಗೊಳ್ಳಲಿದ್ದು ನಿನ್ನೆಯ ತರನೇ ಇಂದು ಮಧ್ಯ ರಾತ್ರಿ ಕೃಷ್ಣನಿಗೆ ಆರ್ಘ್ಯ ಪ್ರದಾನ ಮಾಡಲಿದ್ದಾರೆ. ಕೃಷ್ಣ ಜನ್ಮಾಷ್ಟಮಿಯ ಸಂದೇಶವನ್ನ ಪೇಜಾವರ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳಿ ನೀಡಿದ್ದಾರೆ.
ಕೃಷ್ಣ ಜನ್ಮಾಷ್ಟಮಿಗೆ ಮೆರುಗು ತರುವುದೇ ಮುದ್ದುಕೃಷ್ಣ ಸ್ಪರ್ದೆ ಹಾಗೂ ಹುಲಿವೇಷಾಧಾರಿಗಳ ಕುಣಿತ. ಬೆಳಗ್ಗೆ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವೇಷ ತೊಟ್ಟ ಹುಲಿವೇಷಾಧಾರಿಗಳು ನಗರ ಪ್ರವೇಶ ಮಾಡುತ್ತಾರೆ. ರಸ್ತೆ ರಸ್ತೆಯಲ್ಲಿ ಕುಣಿದು ಕುಪ್ಪಲಿಸಿ ತಮ್ಮ ಪ್ರದರ್ಶನ ನೀಡುತ್ತಾರೆ. ಹುಲಿವೇಷಾಧಾರಿಗಳ ಕುಣಿತ ಕಾಣಲೇ ಆಸಕ್ತರ ದಂಡೇ ಕೃಷ್ಣ ಮಠಕ್ಕೆ ಬರುತ್ತದೆ. ಅಷ್ಟಮಿಯ ಹುಲಿ ಎಂದೇ ಪ್ರಸಿದ್ದಿ ಪಡೆದಿರುವ ಉಡುಪಿಯ ಹುಲಿವೇಷಾಧಾರಿಗಳ ಕುಣಿತ ಎಲ್ಲರಲ್ಲೂ ಬೆರಗುಗೊಳಿಸುವಂತದ್ದು.
ಇನ್ನು ಕೃಷ್ಣ ಮಠದ ರಾಜಾಂಗಣದಲ್ಲಿ ವಿವಿಧ ವಿಭಾಗದಲ್ಲಿ ಮುದ್ದುಕೃಷ್ಣ ಸ್ಪರ್ದೆ ಸಂಪನ್ನಗೊಂಡಿತು. ಮುದ್ದು ಮಕ್ಕಳ ಮುದ್ದುಕೃಷ್ಣ ವೇಷಗಳು ನೆರೆದವರನ್ನು ಪುಳಕಿತ ಮಾಡಿದ್ದು ಮಾತ್ರವಲ್ಲದೇ ಪೇಜಾವರ ಶ್ರೀಗಳು ಕೂಡಾ ಮುದ್ದು ಮಕ್ಕಳ ನೃತ್ಯವನ್ನು ಕಂಡು ಪುಳಕಿತರಾದರು. ಮಕ್ಕಳಿಗೆ ಪ್ರಸಾದ ನೀಡಿ ಮಕ್ಕಳೊಂದಿಗೆ ಭಾವ ಚಿತ್ರ ತೆಗೆಸಿದರು.
ಕೃಷ್ಣ ಜನ್ಮಾಷ್ಟಮಿಯ ಹಿನ್ನಲೆಯಲ್ಲಿ ಇಡೀ ರಥಬೀದಿ ಪರಿಸರ ಹೂವಿನ ವ್ಯಾಪಾರಿಗಳು, ಹಾಗೂ ವಿವಿಧ ಬಗೆಯ ವಸ್ತುಗಳ ವ್ಯಾಪಾರಿಗಳಿಂದ ತುಂಬಿ ತುಳುಕಿತ್ತಿದ್ದು ಕೃಷ್ಣ ಮಠಕ್ಕೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿದೆ. ನಾಳೆ ವೈಭವದ ಮೊಸರು ಕುಡಿಕೆ ಅಥವಾ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ಲಕ್ಷಾಂತರ ಭಕ್ತರು ಉಡುಪಿಗೆ ಆಗಮಿಸಲಿದ್ದಾರೆ.
Comments are closed.