
ಮಂಗಳೂರು, ಜು.30: ನಗರದ ಹೊರವಲಯದ ಶಾಲೆಯೊಂದಕ್ಕೆ ದಾಳಿ ನಡೆಸಿರುವ ಶ್ರೀರಾಮ ಸೇನೆಯ ಕಾರ್ಯಕರ್ತರು ಶಾಲೆಯಲ್ಲಿ ಒತ್ತಾಯಪೂರ್ವಕ ವಾಗಿ ಉರ್ದು ಮತ್ತು ಅರೆಬಿಕ್ ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ,ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಹೊರವಲಯದ ನೀರುಮಾರ್ಗ ಸಮೀಪದ ಪಡು, ಬೊಂಡಂತಿಲ ಎಂಬಲ್ಲಿರುವ ಸಂತ ಥೋಮಸರ ಅನುದಾನಿತ ಹಿ.ಪ್ರಾ. ಖಾಸಗಿ ಶಾಲೆಯಲ್ಲಿ ಒತ್ತಾಯಪೂರ್ವಕವಾಗಿ ಉರ್ದು ಮತ್ತು ಅರೆಬಿಕ್ ಭಾಷೆಗಳನ್ನು ಕಲಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಸೈಂಟ್ ಥೋಮಸರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತೀ ಶನಿವಾರ ಅರೆಬಿಕ್ ಭಾಷೆ ಮತ್ತು ಇತರ ಭಾಷಾ ಭಾಷಾ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀರಾಮಸೇನೆಯ ಸುಮಾರು 50ರಿಂದ 60 ಕಾರ್ಯಕರ್ತರು ಇಂದು ಶಾಲೆಗೆ ನುಗ್ಗಿ ಮಕ್ಕಳಿಗೆ ಅರೆಬಿಕ್ ಭಾಷೆಗಳನ್ನು ಕಲಿಸದಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಖ್ಯೋಪಾಧ್ಯಾಯರ ಬಳಿಯೂ ಅರೆಬಿಕ್ ಭಾಷಾ ಶಿಕ್ಷಣ ನೀಡದಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತರಗತಿ ನಡೆಯುತ್ತಿದ್ದ ವೇಳೆ ತರಗತಿಯ ಚಿತ್ರೀಕರಣ ಮಾಡಿ, ಪುಸ್ತಕಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಕಳೆದ 2 ವರ್ಷಗಳಿಂದ ಶಾಲೆಯಲ್ಲಿ 6 ಮತ್ತು 7 ತರಗತಿ ವಿದ್ಯಾರ್ಥಿಗಳಿಗೆ ಫ್ರೆಂಚ್, ಜರ್ಮನಿ, ಅರೆಬಿಕ್ ಮತ್ತು ಕರಾಟೆ ತರಗತಿಗಳನ್ನು ನಡೆಸುತ್ತಿದ್ದೇವೆ. ಇದಕ್ಕೆ ಆಸಕ್ತ ವಿದ್ಯಾರ್ಥಿಗಳು ಮಾತ್ರ ಸೇರಬಹುದಾಗಿದೆ. ಇದಕ್ಕಾಗಿ ನಾವು ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಸೂಲಿ ಮಾಡಿಲ್ಲ. ಯಾರನ್ನೂ ಒತ್ತಾಯಪೂರ್ವಕವಾಗಿ ಈ ತರಗತಿಗಳಿಗೆ ಸೇರಿಸಿಲ್ಲ, 59 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಈ ತರಗತಿಗಳಿಗೆ ಸೇರಿದ್ದಾರೆ. ಈವರೆಗೆ ನಾವು ಉರ್ದು ಭಾಷಾ ತರಗತಿಗಳನ್ನು ನಡೆಸಿಲ್ಲ. ಇಂದು ದಾಳಿ ಮಾಡಿರುವ ಕಾರ್ಯಕರ್ತರು ಉರ್ದು ಮತ್ತು ಅರೆಬಿಕ್ ಕಲಿಸದಂತೆ ಒತ್ತಡ ಹೇರಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಅವರು ಈ ಬಗ್ಗೆ ಪ್ರತಿಕ್ರಿಯಿ ನೀಡಿದ್ದಾರೆ.
ಈ ದಾಳಿ ಬಗ್ಗೆ ಮ್ಯಾನೇಜ್ಮೆಂಟ್ ವತಿಯಿಂದ ಪೊಲೀಸರಿಗೆ ದೂರು ನೀಡಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಸದ್ಯಕ್ಕೆ ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಯಾವೂದೇ ದೂರು ನೀಡುವುದಿಲ್ಲ. ಅವರು ದಾಳಿ ವೇಳೆ ಯಾವೂದೇ ಸೊತ್ತುಗಳನ್ನು ನಾಶಪಡಿಸಿಲ್ಲ. ಜತೆಗೆ ಯಾರ ಮೇಲೂ ಯಾವೂದೇ ರೀತಿಯ ದಬ್ಬಾಳಿಕೆ ನಡೆಸಿಲ್ಲ. ಬರೀ ಉರ್ದು ಮತ್ತು ಅರೆಬಿಕ್ ಕಲಿಸದಂತೆ ಒತ್ತಡ ಹೇರಿದ್ದಾರೆ ಅಷ್ಟೇ.. ಈ ಹಿನ್ನೆಲೆಯಲ್ಲಿ ಎಸ್ಆರಎಸ್ ವಿರುದ್ಧ ಪೊಲೀಸರಿಗೆ ದೂರು ನೀಡುವುದಿಲ್ಲ. ಆದರೆ ಈ ದಾಳಿ ಬಗ್ಗೆ ಪೊಲೀಸರು ವಿಚಾರಿಸಿದರೆ ಮಾತ್ರ ಅವರಿಗೆ ಇಲ್ಲಿ ನಡೆದ ವಿಷಯದ ಬಗ್ಗೆ ವಿವರಿಸುತ್ತೇವೆ ಎಂದು ಹೇಳಿದರು.
Comments are closed.