ಕರಾವಳಿ

ಗಂಗೊಳ್ಳಿ: ಕಾಡುಹಾದಿಯಲ್ಲಿ ಯುವತಿಯ ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನ; ಆರೋಪಿ ಸೆರೆ

Pinterest LinkedIn Tumblr

* ಯೋಗೀಶ್ ಕುಂಭಾಸಿ

ಕುಂದಾಪುರ: ಯುವತಿಯೋರ್ವಳು ತನ್ನ ಮನೆಯಿಂದ ಕಾಡುಹಾದಿಯಲ್ಲಿ ನಡೆದು ಬಸ್ಸು ನಿಲ್ದಾಣಕ್ಕೆ ತೆರಳುತ್ತಿದ್ದ ಸಂದರ್ಭ ಪೊದೆಯಲ್ಲಿ ಅವಿತು ಕುಳಿತಿದ್ದ ಕಾಮುಕನೋರ್ವ ಆಕೆಯನ್ನು ಅಡ್ಡಗಟ್ಟಿ ಆಕೆಯನ್ನು ವಿವಸ್ತ್ರಗೊಳಿಸಲು ಯತ್ನಿಸಿ ಲೈಂಗಿಕ ಪೀಡನೆಗೆ ಮುಂದಾದ ಆತಂಕಕಾರಿ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಣ್ಗೇರಿ ಎಂಬಲ್ಲಿ ನಡೆದಿದೆ.

ಜೂ.29 ಬುಧವಾರ ಘಟನೆ ನಡೆದಿದ್ದು ಆಕೆ ಪೋಷಕರಿಗೆ ತಿಳಿಸಿ ಗುರುವಾರದಂದು ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದಾಳೆ. ಆಕೆಯ ದೂರಿನನ್ವಯ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಗಂಗೊಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಂಗೊಳ್ಳಿ ಬಾವಿಕಟ್ಟೆ ನಿವಾಸಿ ಸೂರಜ್(19) ಎಂಬಾತನೇ ಯುವತಿಗೆ ಕಿರುಕುಳ ನೀಡಿ ಸದ್ಯ ಪೊಲೀಸರಿಂದ ಬಂಧಿಸಲ್ಪಟ್ಟವನು.

Jpeg

(ಬಂಧಿತ ಆರೋಪಿ ಸೂರಜ್)

ಕಾಡುಹಾದಿಯ ನಡುವೆ…
ಗಂಗೊಳ್ಳಿಯ ಗುಜ್ಜಾಡಿ ಗ್ರಾಮದ 19 ವರ್ಷ ಪ್ರಾಯದ ಯುವತಿಯೋರ್ವಳು (ಗೌಪ್ಯತೆ ದ್ರಷ್ಟಿಯಿಂದ ಹೆಸರು ಹಾಕಿಲ್ಲ) ದ್ವಿತೀಯ ಪಿಯುಸಿ ವಿದ್ಯಾಭ್ಯಾಸದ ಬಳಿಕ ಕುಂದಾಪುರದ ಆಸುಪಾಸಿನಲ್ಲಿ ಕೆಲಸಕ್ಕಾಗಿ ತೆರಳುತ್ತಿದ್ದಳು. ನಿತ್ಯದಂತೆ ಬುಧವಾರವೂ ಆಕೆ ಕೆಲಸಕ್ಕಾಗಿ ತನ್ನ ಮನೆಯಿಂದ ಕಾಡುಹಾದಿಯ ಮೂಲಕ ಗುಜ್ಜಾಡಿ ಬಸ್ಸು ನಿಲ್ದಾಣಕ್ಕೆ ಕೊಡೆ ಹಿಡಿದು ಸಾಗುತ್ತಿದ್ದ ವೇಳೆ ಕಾಡುಹಾದಿಯ ಪಕ್ಕದ ಪೊದೆಯಲ್ಲಿ ಅವಿತು ಕುಳಿತಿದ್ದ ಸೂರಜ್ ಆಕೆಯನ್ನು ಹಿಂಬದಿಯಿಂದ ಬಂದು ಬಲವಾಗಿ ಹಿಡಿದಿದ್ದು ಆಕೆಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸುತ್ತಾನೆ ಅಲ್ಲದೇ ಆಕೆ ಗಟ್ಟಿಯಾಗಿ ಕೂಗಿಕೊಂಡಾಗ ಆಕೆಯ ಮೇಲೆ ಕೈಯಿಂದ ಹಲ್ಲೆ ನಡೆಸುತ್ತಾನೆ.

ಸಹೋದರಿಯಿಂದ ರಕ್ಷಣೆ…
ಯುವತಿಯ ಚೀರಾಟ ಕೇಳಿ ಹಿಂದಿನಿಂದ ಬರುತ್ತಿದ್ದ ಆಕೆ ಸೋದರಿ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ಕಾಮುಕ ಸೂರಜನಿಂದ ಆಕೆಯನ್ನು ರಕ್ಷಿಸಿದ್ದಾಳೆ. ಬಳಿಕ ಆಕೆಯನ್ನು ಮನೆಗೆ ಕರೆದೊಯ್ದಿದ್ದಾಳೆ. ಇಬ್ಬರು ಮನೆಯಲ್ಲಿ ವಿಚಾರವನ್ನು ಮುಚ್ಚಿಟ್ಟಿದ್ದು ಯುವತಿ ನಿನ್ನೆಯಿಂದಲೂ ಮಂಕಾಗಿದ್ದ ಕಾರಣ ಮನೆಯವರು ವಿಚಾರಿಸಿದಾಗ ಇಂದು (ಗುರುವಾರ) ನಡೆದ ವಿಚಾರವನ್ನು ಮನೆಯವರಲ್ಲಿ ಹೇಳಿಕೊಂಡಿದ್ದಾಳೆ.

ಪೊಲೀಸರಿಗೆ ದೂರು…
ಸಾರ್ವಜನಿಕ ರಸ್ತೆಯಲ್ಲಿ ತನ್ನ ಮೈಮೇಲೆ ಕೈಹಾಕಿ ನಗ್ನಗೊಳಿಸಲು ಯತ್ನಿಸಿ ಹಲ್ಲೆ ನಡೆಸಿದ ಬಗ್ಗೆ ನೊಂದ ಯುವತಿ ತನ್ನ ಪೋಷಕರೊಡನೆ ಗುರುವಾರ ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಆಕೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಗಂಗೊಳ್ಳಿ ಠಾಣಾ ಎಸ್.ಐ. ಸುಬ್ಬಣ್ಣ ತನ್ನ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸೂರಜ್ ಇದೇ ರೀತಿಯಾಗಿ ಮೂರಲ್ಕು ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದನೆನ್ನಲಾಗಿದೆ.

ವಾರದಿಂದಲೂ ಯುವತಿಗೆ ಕಿರುಕುಳ…
ಆರೋಪಿ ಸೂರಜ್ ಕಳೆದ ಒಂದು ವಾರದಿಂದಲೂ ಈ ಯುವತಿ ಹೋಗುವ ಕಾಡುದಾರಿಯಲ್ಲಿ ಹಿಂಬಾಲಿಸಿ ಆಕೆಯೊಂದಿಗೆ ಅಸಭ್ಯವಾಗಿ ಮಾತನಾಡುತ್ತಿದ್ದನಲ್ಲದೇ ಅಶ್ಲೀಲ ಪದಬಳಕೆ ಮಾಡಿ ಕರೆಯುತ್ತಿದ್ದ ಎನ್ನಲಾಗಿದೆ. ಆದರೇ ಮರ್ಯಾದೆಗೆ ಅಂಜಿದ ಆ ಯುವತಿ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ.

ಪೋಲಿಗಳ ಅಟ್ಟಹಾಸಕ್ಕೆ ಕೊನೆಯೆಂದು..?
ವರ್ಷಗಳ ಹಿಂದೆ ಬೈಂದೂರಿನ ಹೇನಬೇರು ಎಂಬಲ್ಲಿ ಅಕ್ಷತಾ ದೇವಾಡಿಗ ನಿರ್ಜನ ಪ್ರದೇಶದಲ್ಲಿ ನಡೆದುಹೋಗುವಾಗ ಕಾಮುಕನ ಕೈಗೆ ಸಿಕ್ಕು ಕೊಲೆಯಾಗಿದ್ದಳು. ಇದದ ಒಂದೆರಡು ತಿಂಗಳ ಬಳಿಕ ಗೋಳಿಯಂಗಡಿಯಲ್ಲಿ ಕೆಲಸದಿಂದ ವಾಪಾಸ್ಸಾಗುತ್ತಿದ್ದ ಸುಚಿತ್ರಾ ನಾಯ್ಕ್ ಎನ್ನುವ ಯುವತಿ ಮಣಿಕಂಠ ಎಂಬ ಕಟುಕನ ಕೈಗೆ ಸಿಕ್ಕು ಕೊಲೆಯಾಗಿದ್ದಳು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಇಂತಹ ಘಟನೆಗಳು ವ್ಯಾಪಕವಾಗಿ ನಡೆಯುತ್ತಿದ್ದು ಇಂತಹ ಪೋಲಿಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಬೇಕಿದೆ. ಪೊಲಿಸರು ಕೂಡ ಇಂತಹ ಪುಡಾರಿಗಳ ಮೇಲೆ ಹದ್ದಿನ ಕಣ್ಣಿಟ್ಟು ಅವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅನಿವಾರ್ಯತೆ ಇದೆ.

ಒಟ್ಟಿನಲ್ಲಿ ಸಂಭವನೀಯ ದೊಡ್ಡದೊಂದು ಅನಾಹುತ ಯುವತಿ ಹಾಗೂ ಆಕೆ ಸಹೋದರಿ ಸಮಯಪ್ರಜ್ನೆಯಿಂದ ತಪ್ಪಿದಂತಾಗಿದೆ. ಆರೋಪಿ ಸದ್ಯ ಜೈಲುಕಂಬಿ ಹಿಂದಿದ್ದಾನೆ.

Comments are closed.