ಬಂಟ್ವಾಳ, ಜೂ.30: ‘ದೇಶವನ್ನು ಭ್ರಷ್ಟಾಚಾರಮುಕ್ತವನ್ನಾಗಿಸಲು ವಿದ್ಯಾರ್ಥಿಗಳು ಇಂದಿನಿಂದಲೇ ಬದ್ಧರಾಗಿ, ವಿದ್ಯಾರ್ಥಿ ಜೀವನದಲ್ಲೇ ಭ್ರಷ್ಟಾಚಾರ ಮಟ್ಟ ಹಾಕಿ’ ಎಂದು ಬಳ್ಳಾರಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನಿನ್ನೆ ದಿಢೀರ್ ಭೇಟಿ ನೀಡಿದ ಅವರು, ಕೇಂದ್ರದ ಶಿಕ್ಷಣ ಪದ್ಧತಿ, ಕಾರ್ಯವೈಖರಿ ಹಾಗೂ ವಿದ್ಯಾರ್ಥಿಗಳ ಶಿಸ್ತು ನನ್ನನ್ನು ಪ್ರಭಾವಿತಳಾಗಿ ಮಾಡಿದೆ. ಪ್ರತಿಯೊಂದು ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿ ಶ್ರೀರಾಮ ವಿದ್ಯಾಲಯ ಬೆಳೆಯುತ್ತಿದೆ ಎಂದು ಭಾವುಕರಾಗಿ ನುಡಿದರು.
ಜಾಗತಿಕ ಮಟ್ಟದಲ್ಲಿ ಭಾರತ ಬಲಿಷ್ಠವಾಗಿ ಬೆಳೆಯಬೇಕಾದರೆ, ಇಲ್ಲಿನ ಮಾನವ ಸಂಪನ್ಮೂಲ ದೇಶೀಯ ಸಂಸ್ಕೃತಿಯೊಂದಿಗೆ ಬೆರೆತು ಸದ್ಬಳಕೆಯಾಗಬೇಕು. ವಿದ್ಯಾಕೇಂದ್ರಗಳು ದೇಶೀಯ ಪದ್ಧತಿಯನ್ನು ಅನುಸರಿಸಬೇಕಿದೆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರವನ್ನು ಮಟ್ಟಹಾಕುವ ರಣತಂತ್ರವನ್ನು ಕಲಿಸಿಕೊಡಬೇಕು. ಆಗ ಮಾತ್ರ ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಸಾಧ್ಯ ಎಂದರು.
ಶಿಶುಮಂದಿರ, ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಕೆಲವು ಹೊತ್ತು ಮಾತನಾಡಿದರು. ವಿದ್ಯಾಕೇಂದ್ರದ ಅಭಿವೃದ್ಧಿ ವಿಚಾರದಲ್ಲೂ ಸಂಚಾಲಕರೊಂದಿಗೆ ಚರ್ಚಿಸಿ, ಶ್ಲಾಘನೆ ವ್ಯಕ್ತಪಡಿಸಿದರು.
ವಿದ್ಯಾಕೇಂದ್ರದ ಸಂಚಾಲಕ ಡಾ.ಪ್ರಭಾಕರ್ ಭಟ್, ಕಮಲಾ ಪ್ರಭಾಕರ್ ಭಟ್ ಮೊದಲಾದವರು ಈ ಸಂದರ್ಭ ಉಪಸ್ಥರಿದ್ದರು.
Comments are closed.