ಮಂಗಳೂರು: ನೆರೆ ಮನೆಯವರು ತಮ್ಮ ತೋಟಕ್ಕೆ ಅನದಿಕೃತವಾಗಿ ಮಣ್ಣು ಹಾಕಿ ತಡೆಗೋಡೆ ನಿರ್ಮಿಸಿದ ಪರಿಣಾಮವಾಗಿ ತಮ್ಮ ಜೀವನೋಪಾಯಕ್ಕಾಗಿ ಐದು ಎಕ್ರೆ ಭೂಮಿಯಲ್ಲಿ ನಿರ್ಮಾಣ ಮಾಡಿರುವ ತೋಟ ಹಾಗೂ ಗದ್ದೆಗಳು ನಾಶಗೊಳ್ಳುವ ಭೀತಿಯಲ್ಲಿದ್ದೇವೆ ಎಂದು ಕೆಂಜಾರು ಗ್ರಾಮದ ಪಾದೆಮನೆಯ ಕೃಷಿಕ ಭೋಜ ವಿ. ಸಾಲಿಯಾನ್ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಬಜ್ಪೆ-ಮಂಗಳೂರು ಮುಖ್ಯ ರಸ್ತೆ, ಕರಂಬಾರು-ಕೆಂಜಾರು ಗ್ರಾಮದ ಮಾರ್ಗ ಬದಿಯಿಂದ ಹಿಡಿದು ಸುಮಾರು ಹತ್ತು ಎಕರೆ ಪ್ರದೇಶದ ನೀರು ಗದ್ದೆಗಳ ಮೂಲಕ ಹರಿದು ಗುಲಾಬಿ ಶೆಟ್ಟಿ, ಗೋಪಿ ಶೆಟ್ಟಿಯವರ ಗದ್ದೆಯಲ್ಲಿ ಹರಿದು ಚರಂಡಿಗಳ ಮೂಲಕ ಹಾದುಹೋಗುತ್ತಿತ್ತು.
ಆದರೆ, ಇದೀಗ ಗುಲಾಬಿ ಶೆಟ್ಟಿಯವರ ಮೊಮ್ಮಗ ವಿನೋದ್ ಶೆಟ್ಟಿ ತಮ್ಮ ಗದ್ದೆ ನೀರು, ತೆಂಗಿನ ತೋಟ, ಅಡಿಕೆಯ ತೋಟಕ್ಕೆ ನೀರು ಹರಿಯುವುದನ್ನು ತಡೆಯುವಂತೆ ಮಣ್ಣು ತುಂಬಿಸಿದ್ದರಿಂದ ಎಲ್ಲಾ ಕಡೆಯ ನೀರು ತಗ್ಗು ಪ್ರದೇಶದಲ್ಲಿರುವ ನಮ್ಮ ಗದ್ದೆಯಲ್ಲಿ ತುಂಬುತ್ತಿದೆ. ಇದರಿಂದ ನಮ್ಮ ಐದು ಎಕರೆ ಭೂಮಿಯಲ್ಲಿರುವ 700ಕ್ಕೂ ಮೇಲ್ಪಟ್ಟು ಅಡಿಕೆ ಮರ, 150ಕ್ಕೂ ಹೆಚ್ಚಿನ ತೆಂಗಿನ ಮರಗಳು ನೀರು ಪಾಲಾಗಿವೆ. ಇದು ಹೀಗೆಯೇ ಮುಂದುವರಿದರೆ ಬೇರು ಸಮೇತ ಕೊಳೆತು ಹೋಗುವ ಭೀತಿ ಉಂಟಾಗಿದೆ. ಪಕ್ಕದ ಮನೆಯವರ ಎಡವಟ್ಟಿನಿಂದಾಗಿ ನಮ್ಮ ಕೃಷಿ ಕುಟುಂಬ ತೊಂದರೆಗೀಡಾಗಿದೆ ಎಂದು ದೂರಿದ್ದಾರೆ.
ಎಂಟು ವರ್ಷಗಳ ಹಿಂದೆ ನೆಟ್ಟ ಗಿಡಗಳಿಗೆ ನಾವು ಈಗಾಗಲೇ 10ರಿಂದ 15 ಲಕ್ಷ ರೂ. ಖರ್ಚು ಮಾಡಿದ್ದೇವೆ. ಕಳೆದ ಎರಡು ವರ್ಷಗಳಿಂದ ಮರಗಳು ಫಲ ನೀಡುತ್ತಿವೆ. ಇದೀಗ ವಿನೋದ್ ಶೆಟ್ಟಿ ಮನೆಯವರ ಆವಾಂತರದಿಂದ ನಮ್ಮ ಕುಟುಂಬ ವರ್ಷಕ್ಕೆ ಐದು ಲಕ್ಷ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿನೋದ್ ಶೆಟ್ಟಿ ಕುಟುಂಬದ ವಿರುದ್ಧ ಮಳವೂರು ಗ್ರಾಮ ಪಂಚಾಯತ್ಗೆ ದೂರು ನೀಡಲಾಗಿತ್ತು. ಅಲ್ಲಿನ ಸಾಮಾಜಿಕ ನ್ಯಾಯ ಸಮಿತಿ ಬಂದು ಪರಿವೀಕ್ಷಿಸಿದಾಗ ಅನಧಿಕೃತವಾಗಿ ಮಣ್ಣುತುಂಬಿ, ಆವರಣ ಗೋಡೆ ನಿರ್ಮಿಸಿದ್ದರು. ಅಲ್ಲದೆ ಮನೆ ಕೂಡಾ ಅನಧಿಕೃತವಾಗಿ ನಿರ್ಮಿಸಿರುವುದು ಗಮನಕ್ಕೆ ಬಂದಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ವಿನೋದ್ ಶೆಟ್ಟಿ ಅವರಿಗೆ ನೋಟಿಸ್ ಜಾರಿ ಮಾಡಿ ಮೂರು ದಿನಗಳೊಳಗೆ ಉತ್ತರಿಸುವಂತೆ ಆದೇಶಿಸಲಾಗಿತ್ತು.
ಕಂದಾಯ ನಿರೀಕ್ಷಕರೂ ಜೂನ್ನಲ್ಲಿ ಸ್ಥಳ ಪರಿಶೀಲಿಸಿದ್ದಾರೆ. ಆದರೂ ಯಾವುದೇ ಕ್ರಮ ಇಲ್ಲಿಯವರೆಗೆ ಜರಗಿಸಿಲ್ಲ. ಅಧಿಕಾರಿಗಳ ಸಮೇತ ಗ್ರಾಮದ ಪ್ರಮುಖರನ್ನು ನಮ್ಮ ಕುಟುಂಬ ಭೇಟಿಯಾಗಿ ನಮ್ಮ ಕಷ್ಟ ತೋಡಿಕೊಂಡಿದ್ದೇವೆ. ಆದರೆ ಇದರಿಂದ ನಮಗೆ ಯಾವ ಪ್ರಯೋಜನವೂ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದೇವೆ. ಇದರಿಂದಲೂ ನಮ್ಮ ಸಮಸೈ ಪರಿಹಾರ ಕಾಣದೇ ಹೋದರೆ ನಮ್ಮ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳವಂತಹ ಪರಿಸ್ಥಿತಿಬರ ಬಹುದು ಎಂದು ಭೋಜ ವಿ. ಸಾಲಿಯಾನ್ ಮುನ್ನೇಚರಿಕೆ ನೀಡಿದ್ದಾರೆ.
Comments are closed.