
ಮೂಡುಬಿದಿರೆ, ಜೂ.23: ಕುಂದಾಪುರ ಸಮೀಪದ ತ್ರಾಸಿಯಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿ ಫೇಸ್ಬುಕ್ನಲ್ಲಿ ಅವಹೇಳನಕಾರಿ ಕಮೆಂಟ್ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಲಾಗಿದೆ ಎಂದು ಮೂಡುಬಿದಿರೆಯ ಯುವ ಕ್ರೈಸ್ತ ಮುಖಂಡ ಅಶ್ವಿನಿ ಜೊಸ್ಸಿ ಪಿರೇರಾ ಅವರು ತಿಳಿಸಿದ್ದಾರೆ.
ಗುರುವಾರಮೂಡುಬಿದಿರೆಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಸಮೀಪದ ತ್ರಾಸಿಯಲ್ಲಿ ಜೂ.21ರಂದು ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಕ್ರೈಸ್ತ ಸಮುದಾಯದವರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಾಕಾರ ರೀತಿಯಲ್ಲಿ ಕಮೆಂಟ್ ಮಾಡಿರುವ ಕೃತ್ಯವನ್ನು ಖಂಡಿಸಿರುವ ಅವರು ಅಮಾನವೀಯ ರೀತಿಯಲ್ಲಿ ಕಮೆಂಟ್ ಮಾಡಿರುವ ವ್ಯಕ್ತಿಯನ್ನು ಪೊಲೀಸ್ ಇಲಾಖೆಯು ಪತ್ತೆ ಹಚ್ಚಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಶಂಕರ್ ಪ್ರಸಾದ್ ಎಂಬಾತ ಫೇಸ್ಬುಕ್ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ತ್ರಾಸಿಯಲ್ಲಿ ನಡೆದ ಅಪಘಾತದಲ್ಲಿ 8 ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆ. ಕೋಮು ಸೌಹಾರ್ಧಕ್ಕೆ ಹೆಸರಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೋವಿನಿಂದ ಕಂಬನಿ ಮಿಡಿಯುತ್ತಿದ್ದಾರೆ. ಇಂತಹ ದುಖದ ಸಂದರ್ಭದಲ್ಲಿ ಶಂಕರ್ ಪ್ರಸಾದ್ ಎನ್ನುವ ವ್ಯಕ್ತಿ ವಿಕೃತ ದೃಷ್ಠಿ ಹಾಗೂ ಮನೋಬಾವದಿಂದ ಫೇಸ್ಬುಕ್ನಲ್ಲಿ ಪೋಯಿನ ಮಾತ ಪೊರ್ಬುಲ್ ಅತ್ತೇ.. ಬುಡ್ಲೆ..ನಂಕ್ ದಾನೆ (ಸತ್ತವರೆಲ್ಲಾ ಕ್ರೈಸ್ತರಲ್ಲವೇ, ಬಿಡಿ…ನಮಗೇನು..?) ಎಂದು ಕಮೆಂಟ್ ಹಾಕಿ ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಇಂತಹ ಕಮೆಂಟ್ಗಳನ್ನು ಹಾಕುವುದರಿಂದ ಅಶಾಂತಿ ಉಂಟಾಗಿ ಕೂಮು ಸಾಮರಸ್ಯ ಹಾಳಾಗುವ ಸಾಧ್ಯತೆಯಿದೆ ಎಂದು ಅಶ್ವಿನಿ ಜೊಸ್ಸಿ ಪಿರೇರಾ ಬೇಸರ ವ್ಯಕ್ತಪಡಿಸಿದರು.
ಇಂತಹ ಕಮೆಂಟ್ ಹಾಕುವವರು ಮಕ್ಕಳನ್ನು ಕಳೆದುಕೊಂಡಿರುವ ಹೆತ್ತವರ ನೋವನ್ನು ಅರಿತುಕೊಳ್ಳಬೇಕು ಹಾಗೂ ಈ ಘಟನೆಯ ತೀವ್ರತೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು ಶಂಕರ್ ಪ್ರಸಾದ್ನಂತಹ ಮನೋಸ್ಥಿತಿ ಉಳ್ಳವರು ಮಾನವ ಜನಾಂಗಕ್ಕೆ ಕಳಂಕ. ಇಂತಹ ವ್ಯಕ್ತಿಯನ್ನು ಪೊಲೀಸ್ ಇಲಾಖೆಯು 7 ದಿನಗಳೊಳಗೆ ಬಂಧಿಸಬೇಕು ಮತ್ತು ಶಂಕರ್ ಪ್ರಸಾದ್ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಇಲ್ಲದಿದ್ದರೆ ದ.ಕ, ಉಡುಪಿ ಜಿಲ್ಲೆಯಾದ್ಯಾಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಸಬೆಟ್ಟು ಗ್ರಾ.ಪಂ. ಅಧ್ಯಕ್ಷ ಮನೋಜ್ ಆಲ್ವಾರಿಸ್, ಮಾಜಿ ಅಧ್ಯಕ್ಷ ಜೆರಾಲ್ಡ್ ಮೆಂಡೀಸ್ ಉಪಸ್ಥಿತರಿದ್ದರು.
Comments are closed.