ಕಾಸರಗೋಡು, ಜೂ.14: ಕಾಞಂಗಾಡ್-ಕಾಸರಗೋಡು ರಸ್ತೆಯ ಪಳ್ಳಿಕೆರೆ ಪಂಚಾಯತ್ ಕಚೇರಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ 6:45ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಉದುಮ ಚೇಟುಕುಂಡುವಿನ ಹಮೀದ್ ಎಂಬವರ ಪತ್ನಿ ಸಕೀನಾ(39), ಸಕೀನಾರ ಮಕ್ಕಳಾದ ಸಜೀರ್(18), ಸಾನೀರ್(16), ಸಕೀನಾರ ಸಹೋದರನ ಪತ್ನಿ ಕೈರುನ್ನಿಸಾ(24) ಕೈರುನ್ನಿಸಾರ ಪುತ್ರಿ ಫಾತಿಮಾ(2) ಹಾಗೂ ಇರ್ಫಾನ್ ಎಂಬವರ ಪತ್ನಿ ರಂಸೀನಾ(25) ಎಂದು ಗುರುತಿಸಲಾಗಿದೆ. ಸಕೀನಾರ ಪುತ್ರ ಅಜ್ಮಲ್(4) ಹಾಗೂ ಇರ್ಫಾನ್ರ 8 ತಿಂಗಳ ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಮೀದ್ರ ಕುಟುಂಬವು ಕಾಸರಗೋಡಿನಲ್ಲಿರುವ ಸಂಬಂಧಿಕರ ಮನೆಗೆ ರಮಝಾನ್ನ ಇಫ್ತಾರ್ ನಿರ್ವಹಿಸಲೆಂದು ಚೇಟುಕುಂಡುವಿನಿಂದ ಕಾರಿನಲ್ಲಿ ತೆರಳುತ್ತಿತ್ತು. ಕಾಮಗಾರಿ ನಡೆಯುತ್ತಿರುವ ಕಾಞಂಗಾಡ್-ಕಾಸರಗೋಡು ರಸ್ತೆಗೆ ಕಾರು ಪ್ರವೇಶಿಸುತ್ತಿದ್ದಂತೆಯೇ ಚಾಲಕನ ನಿಯಂತ್ರಣದ ತಪ್ಪಿ ರಸ್ತೆ ಬದಿಯ ಆಲದ ಮರವೊಂದಕ್ಕೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಬಳಿಕ ಕಾರು ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಉಳಿದ ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಕಾರು ಚಲಾಯಿಸುತ್ತಿದ್ದ ಸಜೀರ್ ಮತ್ತು ಕೈರುನ್ನಿಸಾ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇರ್ಫಾನ್ರ ಎಂಟು ತಿಂಗಳ ಗಂಡು ಮಗು ಅಪಘಾತದ ಸಂದರ್ಭ ಕಾರಿನಿಂದ ಹೊರಕ್ಕೆಸೆಯಲ್ಪಟ್ಟಿತ್ತು. ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ಅಪಘಾತದಿಂದ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ್ದವರನ್ನು ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ತಲುಪಿಸಲಾಯಿತು. ಒಂದೇ ಕುಟುಂಬದ ಆರು ಮಂದಿಯ ದಾರುಣ ಮರಣವು ಚೇಟುಕುಂಡು ಪರಿಸರವನ್ನು ಶೋಕತಪ್ತವನ್ನಾಗಿಸಿದೆ. ಘಟನೆಯ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಇ.ದೇವದಾಸನ್, ಶಾಸಕ ಕೆ.ಕುಂಞಿರಾಮನ್ ಮೊದಲಾದವರು ಭೇಟಿ ನೀಡಿದ್ದಾರೆ.
Comments are closed.