ಚಿತ್ರ, ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಬೈಂದೂರು ಸಮೀಪದ ಹೇನಬೇರಿನಿಂದ ಶಿರೂರು-ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ಹೋಗುವ ಸರಕಾರಿ (ಕೆ.ಎಸ್.ಆರ್.ಟಿ.ಸಿ.) ಬಸ್ಸನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಸೋಮವಾರ ಉದ್ಘಾಟಿಸಿದರು.
ಎಲ್ಲಾ ಬೇಡಿಕೆ ಈಡೇರಿಕೆ..?
ಕಳೆದ ವರ್ಷ ಹೇನಬೇರಿನ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಅವರ ಕೊಲೆಯಾದಾಗ ಸ್ಥಳಕ್ಕೆ ಭೇಟಿನೀಡಿದ ಸಂಸದ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ಜನನಾಯಕರು ಹೇನಬೇರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಭರವಸೆಯಿತ್ತಿದ್ದರು. ಅದನ್ನು ಅನುಸರಿಸಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರಿಂದ ಈ ಮೊದಲು ಡಾಂಬರು ರಸ್ತೆ, ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದ್ದು ಈ ಭಾಗದಲ್ಲಿನ ಕುಡಿಯುವ ನೀರಿನ ಕೊರತೆ ನಿವಾರಿಸಲು ಕ್ರಮಕೈಗೊಂಡಿದ್ದರು. ಈಗಾಗಲೇ ಕೊಲೆಯಾದ ಅಕ್ಷತಾ ಕುಟುಂಬಕ್ಕೆ ಸರಕಾರದಿಂದಲೂ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಇಲ್ಲಿನ ಜನರ ಬಹುಬೇಡಿಕೆಯಾಗಿದ್ದ ಬಸ್ಸು ಸಂಚಾರ ವ್ಯವಸ್ಥೆಗೆ ಇದೀಗ ಕಾಲಕೂಡಿಬಂದಿದ್ದು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಇಲ್ಲಿಗೆ ವಿಸ್ತರಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗಿದ್ದು ಈ ಮೂಲಕ ಈ ಹಿಂದೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಬಸ್ ಸಂಚಾರದ ವೇಳಾಪಟ್ಟಿ..
ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಕುಂದಾಪುರ ಡೀಪೊ ಮ್ಯಾನೇಜರ್ ಎಸ್. ತಾರಾನಾಥ್ ಮಾತನಾಡಿ, ಕುಂದಾಪುರ ಶಿರೂರು ನಡುವೆ ಚಲಿಸುವ ಈ ಬಸ್ ಬೆಳಿಗ್ಗೆ 7.55ಕ್ಕೆ ಹೇನಬೇರಿಗೆ ಬರಲಿದೆ. ಅಲ್ಲಿಂದ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಲುಪಿ 8.20ಕ್ಕೆ ಅಲ್ಲಿಂದ ಕುಂದಾಪುರಕ್ಕೆ ನಿರ್ಗಮಿಸಲಿದೆ. ಸಂಜೆ ಕುಂದಾಪುರದಿಂದ ಬೈಂದೂರು ಮಾರ್ಗವಾಗಿ 4.30ಕ್ಕೆ ಕಾಲೇಜಿಗೆ ತಲುಪಿ 4.35ಕ್ಕೆ ಅಲ್ಲಿಂದ ಹೇನಬೇರಿಗೆ ನಿರ್ಗಮಿಸಲಿದೆ. ಈ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಜನರೆಲ್ಲರೂ ಈ ಬಸ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಜಗದೀಶ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯ ವೆಂಕಟರಮಣ, ಸ್ಥಳೀಯ ಮುಖಂಡರಾದ ರಾಮಕೃಷ್ಣ, ಮಾಣಿಕ್ಯ, ತಿಮ್ಮಪ್ಪ, ಗಿರೀಶ ಬೈಂದೂರು, ನಾಗರಾಜ ಗಾಣಿಗ, ಎನ್. ನರಸಿಂಹ ದೇವಾಡಿಗ, ಸಾರಿಗೆ ಸಂಸ್ಥೆಯ ಸಂಚಾರ ನಿರೀಕ್ಷಕ ದೇವಿದಾಸ ಬೋರ್ಕರ್, ಸಂಚಾರ ಆರಂಭಿಸಿದ ಬಸ್ನ ಚಾಲಕ ದತ್ತಾತ್ರೆಯ, ನಿರ್ವಾಹಕ ವೆಂಕಟರಮಣ ಪಟಗಾರ್ ಉಪಸ್ಥಿತರಿದ್ದರು.
Comments are closed.