ಮಂಗಳೂರು,ಜೂ.11: ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ಮಂಗಳೂರಿನ ಪುರಭವನದ ಎದುರು ಇಂದು ವಿನೂತನ ರೀತಿಯ ಪ್ರತಿಭಟನೆ ನಡೆಯಿತು.
ಜಿಲ್ಲೆಗೆ ಮಾರಕವಾಗಿ ಪರಿನಮಿಸಲಿರುವ ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುವುದು ಮಾತ್ರವಲ್ಲದೇ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ದ ಎಂದು ಹೊರಟಿರುವ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಮತ್ತು ಡಾ. ಎಂ ವೀರಪ್ಪ ಮೊಯ್ಲಿಯವರಿಗೆ ಮಂಗಳೂರಿಗೆ ಆಗಮಿಸುತ್ತಿರುವ ಸಂದರ್ಭ ಕರಿಪತಾಕೆ ಪ್ರದರ್ಶನ ಮಾಡಲು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ತೀರ್ಮಾನಿಸಿತ್ತು.
ಆದರಂತೆ ಇಂದು ನಗರದ ಪುರಭವನದಲ್ಲಿ ಸ್ಥಳೀಯ ಚಾನೆಲೊಂದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಕೇಂದ್ರದ ಮಾಜಿ ಸಚಿವ ಹಾಗೂ ಪ್ರಸಕ್ತ ಸಂಸದ ವೀರಪ್ಪಮೊಯ್ಲಿಯವರು ಭಾಗವಹಿಸಲ್ಲಿದ್ದ ಹಿನ್ನೆಲೆಯಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಶ್ರಯದಲ್ಲಿ ಪುರಭವನದ ಎದುರು ಪ್ರತಿಭಟನೆ ಹಮ್ಮಿಕೊಂಡಿತ್ತು.
ಆದರೆ ಇಂದಿನ ಕಾರ್ಯಕ್ರಮಕ್ಕೆ ಈ ಇಬ್ಬರು ಅನುಪಸ್ಥಿತರಾಗಿದ್ದರು, ಆದರೂ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಸದಸ್ಯರು ಕರಿ ಪತಾಕೆ ಪ್ರದರ್ಶನದೊಂದಿಗೆ ಪುರಭವನದ ಮುಂಭಾಗ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪುರಭವನದ ಎದುರಿನ ಮಿನಿ ವಿಧಾನಸೌಧದಿಂದ ಕರಿ ಪತಾಕೆಯೊಂದಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸಚಿವ ಡಿವಿ ಹಾಗೂ ಸಂಸದ ಮೊಯ್ಲಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎತ್ತಿನಹೊಳೆ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಪುರಭವನದ ಗೇಟಿನೊಳಗೆ ಪ್ರವೇಶಿಸಲು ಯತ್ನಿಸಿದಾಗ ಅಲ್ಲಿದ್ದ ಪೊಲೀಸರು ತಡೆಯಲೆತ್ನಿಸಿದರು. ಆದರೆ ಸುಮಾರು 50ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಗೇಟಿನೊಳಗೆ ಪ್ರವೇಶಿಸಿ ಪುರಭವನದ ಎದುರು ಕೆಲಹೊತ್ತು ಕರಿ ಪತಾಕೆ ಹಿಡಿದು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ‘‘ಸ್ಥಳೀಯ ಚಾನೆಲ್ನ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದು ನಮ್ಮ ಉದ್ದೇಶವಲ್ಲ. ಆದರೆ, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮಾಜಿ ಸಚಿವರಾದ ವೀರಪ್ಪ ಮೊಯ್ಲಿಯವರು ಭಾಗವಹಿಸುತ್ತಾರೆಂಬ ಮಾಹಿತಿಯ ಮೇರೆಗೆ ಅವರಿಗೆ ಕರಿ ಪತಾಕೆ ಹಿಡಿಯಲು ಬಂದಿದ್ದೆವು. ಆದರೆ ನಮ್ಮ ಪ್ರತಿಭಟನೆಯ ಬಗ್ಗೆ ಮೊದಲೇ ಅರಿವಿದ್ದ ಅವರಿಬ್ಬರೂ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಮೊಯ್ಲಿ ಹಾಗೂ ಡಿವಿಗೆ ನಗರದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ’’ ಎಂದರು.
‘‘ನಗರದ ಎಲ್ಲಾ ಸಂಘ, ಸಂಸ್ಥೆಗಳವರೂ ಅವರಿಬ್ಬರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು’’ ಎಂದು ಮನವಿ ಮಾಡಿದ ವಿಜಯ ಕುಮಾರ್ ಶೆಟ್ಟಿ, ಇನ್ನೂ ತಡವಾಗಿಲ್ಲ. ಇವರಿಬ್ಬರೂ ಸರಕಾರದ ಮನವೊಲಿಸಿ ಯೋಜನೆಯನ್ನು ಹಿಂಪಡೆಯಬಹುದು. ಯೋಜನೆಯನ್ನು ಕೈಬಿಡುವವರೆಗೂ ಅವರನ್ನು ನಗರಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗದು ಎಂದು ಹೇಳಿದರು.
ಪಶ್ಚಿಮ ಘಟ್ಟ ಸಂರಕ್ಷಣಾ ಹೋರಾಟ ಸಮಿತಿಯ ಕೆ.ಎನ್. ಸೋಮಶೇಖರ್, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಪಧಾದಿಕಾರಿಗಳಾದ ಸತ್ಯಜೀತ್ ಸುರತ್ಕಲ್, ಜಿತೇಂದ್ರ ಕೊಟ್ಟಾರಿ, ಎಂ.ಜಿ.ಹೆಗ್ಡೆ, ಯೋಗೀಶ್ ಶೆಟ್ಟಿ ಜೆಪ್ಪು, ದಿನಕರ್ ಶೆಟ್ಟಿ,,ಆನಂದ್ ಶೆಟ್ಟಿ ಅಡ್ಯಾರ್, ಗಂಗಾಧರ ಹೊಸಬೆಟ್ಟು, ಸಂಪತ್, ಬಿ.ಎ.ರಹೀಂ, ಪ್ರಶಾಂತ್, ನವಾಝ್ ಉಳ್ಳಾಲ್, ಯಶವಂತ್ ಮೆಂಡನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Comments are closed.