ಮಂಗಳೂರು :ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಯಾದ ದಿನ ಮೂಡುಬಿದಿರೆಯಲ್ಲಿ ನಡೆದ ಗಲಾಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 150ಕ್ಕು ಮಿಕ್ಕಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಆರೋಪಿಗಳೆಂದು ಗುರುತಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕಳೆದ ಅಕ್ಟೋಬರ್ 9ರಂದು ಮೂಡಬಿದ್ರೆಯಲ್ಲಿ ಹೂವಿನ ವ್ಯಾಪಾರಿ ಬಜರಂಗದಳದ ಸ್ಥಳೀಯ ಮುಖಂಡ ಪ್ರಶಾಂತ್ ಪೂಜಾರಿಯನ್ನು ದುಷ್ಕರ್ಮಿಗಳ ತಂಡವೊಂದು ಕೊಲೆ ಮಾಡಿ ಪರಾರಿಯಾಗಿತ್ತು. ಕೊಲೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಈ ಸಂದರ್ಭ ಕೆಲವು ಹಿಂದೂ ಸಂಘಟನೆಯ ಕಾರ್ಯಕರ್ತರು ಮೂಡುಬಿದಿರೆಯಲ್ಲಿ ಪ್ರತಿಭಟನೆಗಿಳಿದಿದ್ದು, ಈ ವೇಳೆ ನಡೆದ ಘರ್ಷಣೆ ಸಂದರ್ಭ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಪ್ರಕರಣ ಇನ್ನಷ್ಟು ತೀವ್ರ ಸ್ವರೂಪಕ್ಕೆ ತಿರುಗಿತ್ತು.
ಅಂದು ಸಂಜೆ ಪ್ರಶಾಂತ್ ಪೂಜಾರಿಯ ಶವ ಮೂಡಬಿದ್ರೆ ಪೇಟೆಗೆ ಬಂದಾಗ ಮತ್ತೆ ಉಂಟಾದ ಗಲಾಭೆ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದರು. ಈ ಸಂದರ್ಭ ನಡೆದ ದೊಂಬಿ, ಹಲ್ಲೆ, ಅಂಗಡಿ ಲೂಟಿ, ಪೊಲೀಸರ ಮೇಲೆ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿದಂತೆ ಆರು ಪ್ರತ್ಯೇಕ ಘಟನೆಗಳಲ್ಲಿ ಸುಮಾರು 150ಕ್ಕು ಮಿಕ್ಕಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಆರೋಪಿಗಳೆಂದು ಗುರುತಿಸಿ ಎಫ್ಐ ಆರ್ ದಾಖಲಿಸಿದ್ದಾರೆ.
ಈ ಗಲಾಭೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳು, ಪೊಲೀಸರು ಸಂಗ್ರಹಿಸಿದ ಮಾಹಿತಿ, ಹಾಗೂ ತೊಂದರೆಗೊಳಗಾದವರು ನೀಡಿದ ದೂರಿನಂತೆ ಪೊಲೀಸರು ಸುಮಾರು 150 ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಮೂಡುಬಿದಿರೆಯ ಆಸುಪಾಸಿನವರು ಮಾತ್ರವಲ್ಲದೆ ಕೃತ್ಯದಲ್ಲಿ ಭಾಗಿಯಾದ ಬಂಟ್ವಾಳ, ಕಾರ್ಕಳ,ಈದು, ಬೈಲೂರು ಮತ್ತಿತರ ಕೆಲ ಊರುಗಳ ಯುವಕರನ್ನು ಆರೋಪಿಗಳೆಂದು ಗುರುತಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
Comments are closed.