ಬೆಂಗಳೂರು: ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅನುಪಮಾ ಶೆಣೈ ಮನವೊಲಿಸುವಂತೆ ಡಿಜಿಪಿ ಓಂ ಪ್ರಕಾಶ್ ಅವರಿಗೆ ತಿಳಿಸಿದ್ದೇನೆ, ಆ ಹೆಣ್ಣು ಮಗಳು ಇನ್ನೂ ಡಿವೈಎಸ್ ಪಿ ಆಗಿಯೇ ಇದ್ದಾರೆ. ಸರ್ಕಾರಿ ಕೆಲಸದಲ್ಲಿರುವವರು ಸರ್ಕಾರಕ್ಕೆ ವಿಧೇಯರಾಗಿರಬೇಕು. ಸರ್ಕಾರದ ವಿರುದ್ಧ ಸಮರ ಸಾರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ. ಫೇಸ್ ಬುಕ್ ನಲ್ಲಿ ಬೃಹನ್ನಳೆಯರು ಎಂಬ ಪದವನ್ನು ಬಳಸಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶೆಣೈ ಹುಡುಕಾಟಕ್ಕೆ ಪೊಲೀಸರ ತಂಡ ರಚನೆ
ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಯಾರ ಸಂಪರ್ಕಕ್ಕೂ ಸಿಗದಿರುವ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರಿಗಾಗಿ ಹುಡುಕಾಟ ಆರಂಭವಾಗಿದೆ.
ಅನುಪಮಾ ಅವರನ್ನು ಸಂಪರ್ಕಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವೊಲಿಸಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಬಳ್ಳಾರಿ ಎಸ್ಪಿ ಆರ್. ಚೇತನ್ ಅವರಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡವನ್ನು ರಚಿಸಲಾಗಿದೆ. ಸದ್ಯ ಈ ತಂಡ ಉಡುಪಿಗೆ ತೆರಳಿದ್ದು ಸಂಬಂಧಿಕರ ಮೂಲಕ ಡಿವೈಎಸ್ಪಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದೆ.
4 ದಿನಗಳ ಹಿಂದೆ ವೈಯಕ್ತಿಕ ಕಾರಣ ನೀಡಿ ನಾಲ್ಕು ಸಾಲುಗಳ ರಾಜೀನಾಮೆ ಪತ್ರ ಬರೆದಿಟ್ಟು ಕಚೇರಿಯಿಂದ ನಿರ್ಗಮಿಸಿರುವ ಡಿವೈಎಸ್ಪಿ ಅನುಪಮಾ ಶೆಣೈ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಿರಿಯ ಅಧಿಕಾರಿಗಳು ಫೋನ್ ಮೂಲಕ ಅನುಪಮಾ ಶೆಣೈ ಸಂಪರ್ಕಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.
Comments are closed.