ಮಂಗಳೂರು, ಜೂನ್.6 : ಆರ್ ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಹಿತ ಇನ್ನುಳಿದವರ ಬಂಧನಕ್ಕೆ ಆಗ್ರಹಿಸಿ ಇಂದು ನಗರದಲ್ಲಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನ ಮೆರವಣಿಗೆಯನ್ನು ಅರ್ಧದಲ್ಲೇ ತಡೆದ ಪೊಲೀಸರು ಪ್ರತಿಭಟನಾ ನಿರತ ವಿನಾಯಕ ಬಾಳಿಗ ಸಹೋದರಿಯರು ಸೇರಿದಂತೆ 60 ಮಂದಿಯನ್ನು ಬಂಧಿಸಿದ್ದಾರೆ.
ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ನಡೆದು ಎರಡು ತಿಂಗಳು ದಾಟಿದೆ. ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈ ಸಹಿತ ಇನ್ನುಳಿದವರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸ್ ಇಲಾಖೆ ದಯನೀಯ ವೈಫಲ್ಯ ಕಂಡಿದೆ ಎಂದು ಆರೋಪಿಸಿರುವ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್ ಪ್ರಮುಖ ನರೇಶ್ ಶೆಣೈ ಸಹಿತ ಇನ್ನುಳಿದವರ ಬಂಧನಕ್ಕೆ ಒತ್ತಾಯಿಸಿ ಸೋಮವಾರ ಬೆಳಿಗ್ಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಅರೊಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಪೊಲೀಸರ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿಕೊಂಡು ಬಲ್ಮಠ (ಕಲೆಕ್ಟರ್ ಗೇಟ್) ಬಳಿಯಿಂದ ಶಾಸಕರ ನಿವಾಸದ ಕಡೆ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಪ್ರತಿಭಟನಾಕಾರರು ಕದ್ರಿ ಶಿವಬಾಗ್ ತಲುಪುತಿದ್ದಂತೆ ಪ್ರತಿಭಟನಾ ಮೆರವಣಿಗೆಯಲ್ಲಿದ್ದ ಪ್ರೊ. ನರೇಂದ್ರ ನಾಯಕ್, ಮುನೀರ್ ಕಾಟೀಪಳ್ಳ ಹಾಗೂ ಬಾಳಿಗಾ ಸಹೋದರಿಯರು ಸೇರಿದಂತೆ 60 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂದರ್ಭ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಮುನೀರ್ ಕಾಟಿಪಳ್ಳ ಮಾತನಾಡಿ, ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ನಡೆದು ಎರಡು ತಿಂಗಳು ದಾಟಿದೆ. ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈ ಸಹಿತ ಇನ್ನುಳಿದವರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸ್ ಇಲಾಖೆ ದಯನೀಯ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು.
ನಮೋ ಬ್ರಿಗೇಡ್ ಪ್ರಮುಖನಾದ ಪ್ರಭಾವಿ ನಾಯಕ ನರೇಶ್ ಶೆಣೈ ಬಂಧನದಿಂದ ತಪ್ಪಿಸಿಕೊಂಡು ನಿರೀಕ್ಷಣಾ ಜಾಮೀನಿಗೆ ಸತತ ಪ್ರಯತ್ನ ನಡೆಸುತ್ತಿದ್ದಾನೆ. ಪೊಲೀಸ್ ಇಲಾಖೆ ನರೇಶ್ ಶೆಣೈ ಬಂಧಿಸಲು ವಿಫಲವಾಗುತ್ತಿರುವುದನ್ನು ನೋಡುವಾಗ, ರಾಜ್ಯ ಸರಕಾರವೇ ನರೇಶ್ ಶೆಣೈ ನಿರೀಕ್ಷಣಾ ಜಾಮೀನಿಗೆ ಸಹಾಯ ಮಾಡುತ್ತಿರುವ ಗುಮಾನಿ ಸಾರ್ವಜನಿಕರನ್ನು ಬಲವಾಗಿ ಕಾಡುತ್ತಿದೆ ಎಂದು ಮುನೀರ್ ದೂರಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ, ದಲಿತ ಸಂಘರ್ಷ ಸಮಿತಿ, ಎಸ್ಎಫ್ಐ, ಎಐವೈಎಫ್, ವಿಚಾರವಾದಿ ವೇದಿಕೆ ಮುಂತಾದ ಜನಪರ ಸಂಘಟನೆಗಳ ಪಧಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
Comments are closed.