ಮಂಗಳೂರು, ಜೂ.2: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜೂ. 4ರಂದು ಕರೆ ನೀಡಲಾಗಿರುವ ರಾಜ್ಯ ವ್ಯಾಪಿ ಮುಷ್ಕರದಲ್ಲಿ ದ.ಕ ಜಿಲ್ಲೆಯ ಎರಡು ಪೊಲೀಸ್ ಠಾಣೆಗಳ ಸಿಬಂದಿ ತಾವು ಭಾಗವಹಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೇ ಇದುವರೆಗೆ ಯಾವುದೇ ಸಿಬಂದಿ ಜೂ. 4ರಂದು ರಜೆ ಹಾಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೋರಸೆ ಅವರು ಮಾಹಿತಿ ನೀಡಿದ್ದಾರೆ.
ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ದಲ್ಲಿ ಪೊಲೀಸರ ವೇತನ, ಭತ್ತೆಗಳು ಅಷ್ಟೇನು ಕಮ್ಮಿಯಿಲ್ಲ. ಆಗಬೇಕಿರುವ ಸುಧಾರಣೆ ಮತ್ತು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಸರಕಾರದ ಜತೆ ಮಾತುಕತೆ ನಡೆಸುತ್ತಿದ್ದಾರೆ. ತನ್ನ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುತ್ತೇನೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸಲಾರರು ಎಂಬ ವಿಶ್ವಾಸ ನನಗಿದೆ ಎಂದು ಬೊರಸೆ ಹೇಳಿದ್ದಾರೆ.
ಜಿಲ್ಲಾ ವ್ಯಾಪ್ತಿಯ 15 ಠಾಣೆಗಳಲ್ಲಿ ಎಷ್ಟು ಮಂದಿ ರಜೆ ಅರ್ಜಿ ಸಲ್ಲಿಸಿದ್ದಾರೆಂದು ನಿಖರ ಮಾಹಿತಿ ಇಲ್ಲ. ಈ ಬಗ್ಗೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲೂ ಹೆಲ್ಮೆಟ್ ಕಡ್ಡಾಯ : ಎಸ್ಪಿ
ಜಿಲ್ಲೆಯ ಗ್ರಾಮಾಂತರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಜೂ.4ರ ಬಳಿಕ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು. ಹೆಲ್ಮೆಟ್ ರಹಿತ ಪ್ರಯಾಣದಿಂದಲೇ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆಯುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಈಗಾಗಲೇ ದಿನವೊಂದಕ್ಕೆ 3-4 ಸಾವು ಪ್ರಕರಣಗಳು ಸಂಭವಿಸುತ್ತಿವೆ. ಮಳೆಗಾಲದಲ್ಲಿ ಈ ಪ್ರಕರಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದ್ದು, ಹೆಲ್ಮೆಟ್ ಬಳಕೆ ಕಡ್ಡಾಯ ಗೊಳಿಸಬೇಕಾದ ಅಗತ್ಯವಿದೆ ಎಂದು ಎಸ್ಪಿ ಭೂಷಣ್ ಗುಲಾಬ್ರಾವ್ ಬೋರಸೆ ತಿಳಿಸಿದ್ದಾರೆ.
ಮುಷ್ಕರದಲ್ಲಿ ಭಾಗವಹಿಸ ಬೇಕೇ… ಬೇಡವೇ..?
File Pics
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜೂ. 4ರಂದು ಕರೆ ನೀಡಲಾಗಿರುವ ರಾಜ್ಯ ವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬ ಜಿಜ್ಞಾಸೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಸಿಬಂದಿ ಇದ್ದಾರೆ.ತಮ್ಮ ನಿರ್ಧಾರವನ್ನು ಖಡಾ ಖಂಡಿತವಾಗಿ ಹೇಳುವ ಸ್ಥಿತಿಯಲ್ಲಿ ಯಾವ ಪೊಲೀಸ್ ಸಿಬಂದಿಯೂ ಇಲ್ಲ.
ಕೆಲವು ಮಂದಿ ಇಂದು ( ಜೂ. 2ರಂದು) ನಡೆಯಲಿರುವ ರಾಜ್ಯ ಸರಕಾರಿ ನೌಕರರ ಮುಷ್ಕರದ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇನ್ನೂ ಕೆಲವರು ಕಾದು ನೋಡಿ ಎಂದು ಹೇಳಿದ್ದಾರೆ.
Comments are closed.