ಮಂಗಳೂರು, ಮೇ .27 : ಪ್ರಿಯತಮನನ್ನು ತನ್ನ ಮೋಡಿ ಮಾತುಗಳಿಂದ ಸಂಪೂರ್ಣ ನಂಬಿಸಿದ ಯುವತಿಯೋರ್ವಳು ಆತನಿಂದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ, ನಗದು ಹಣ ಪಡೆದು ಇದೀಗ ಆತನಿಗೆ ಕೈಕೊಟ್ಟಿದ್ದಲ್ಲದೆ ಆತನ ವಿರುದ್ಧವೇ ಮಾನಭಂಗ, ಹಲ್ಲೆ ದೂರು ಕೊಟ್ಟು ಜೈಲಿಗೆ ಕಳುಹಿಸಲು ನೋಡಿದ ಪ್ರಸಂಗ ಇದು .ಪ್ರೀತಿ ಕುರುಡು ಅಂತಾರೆ. ಪ್ರೇಮಿಗಳು ಪರಸ್ಪರ ಪ್ರೀತಿಸುವಾಗ ಯಾವುದೂ ಕಣ್ಣಿಗೆ ಕಾಣುವುದಿಲ್ಲ, ಆದರೆ ಕಣ್ಣುಬಿಟ್ಟು ಹೊರಜಗತ್ತು ನೋಡಿದಾಗ ಲೇಟ್ ಆಗಿರುತ್ತೆ ಅನ್ನೋದು ಈ ಪ್ರೇಮಕಥೆಯ ಒನ್ಲೈನ್ ಸ್ಟೋರಿ.
ಘಟನೆಯ ವಿವರ:
ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾಗಿರುವ, ಫರಂಗಿಪೇಟೆ ಸಮೀಪದ ತುಪ್ಪೆಕಲ್ಲು ನಿವಾಸಿ ಸಂತೋಷ್ ಪೂಜಾರಿ ಹಾಗೂ ಅಡ್ಯಾರ್ ಪದವು ನಿವಾಸಿ ವಿದ್ಯಾ ಶೆಟ್ಟಿ(ಹೆಸರು ಬದಲಿಸಲಾಗಿದೆ) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೇಮಿಸುತ್ತಿದ್ದರು. ವಿದ್ಯಾ ಅಡ್ಯಾರ್ ಪಂಚಾಯತ್ಗೆ ಕಾರ್ಯನಿಮಿತ್ತ ಬಂದಿದ್ದ ವೇಳೆ ಸಂತೋಷ್ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದು ಆ ಬಳಿಕ ನಿರಂತರ ಮೆಸೇಜ್, ಕರೆ ಮಾಡುತ್ತಾ ಸಂಪರ್ಕದಲ್ಲಿದ್ದರು. ನಂತರ ಬ್ಯಾಂಕ್ ಲೋನ್ ಇದೆ, ಆರ್ಥಿಕವಾಗಿ ಹಿಂದುಳಿದಿದ್ದೇನೆ ಎಂಬುದಾಗಿ ನಂಬಿಸಿ ಸಂತೋಷ್ ಅವರಿಂದ 2 ಲಕ್ಷ ರೂ. ಹಣ ಪಡೆದಿದ್ದರು. ಇಷ್ಟೇ ಅಲ್ಲದೆ ಸಂತೋಷ್ರನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.
ಸಂತೋಷ್ ಆಕೆಯ ಇಚ್ಛೆಗೆ ಅನುಗುಣವಾಗಿ ಆಕೆಗೆ ತಿಂಗಳಿಗೆ ರೂ. 10 ಸಾವಿರ ಕೊಡುತ್ತಾ ಬಂದುದಲ್ಲದೆ, ಆಕೆಯ ಮನೆಗೆ ನೀರಿನ ಟ್ಯಾಂಕ್, ಮರದ ಸ್ಟ್ಯಾಂಡ್, ಟೇಬಲ್ ಇತ್ಯಾದಿ ನಿರ್ಮಿಸಲು 50 ಸಾವಿರ ರೂ.ಗಳನ್ನೂ ನೀಡಿದ್ದರು. ಆಕೆಯ ಜೊತೆ ನಗರದ ವಿವಿಧ ಮಾಲ್ಗಳಿಗೆ ಆಗಾಗ ತಿರುಗಾಡುತ್ತಿದ್ದಲ್ಲದೆ ಆಕೆಗೆ ಬೆಲೆಬಾಳುವ ಉಡುಗೊರೆಗಳನ್ನೂ ನೀಡಿದ್ದರು. ನಗರದ ಪ್ರಸನ್ನ ಜ್ಯುವೆಲ್ಲರಿಯಿಂದ ಕಿವಿಯ ಓಲೆ, ಬಂಗಾರದ ಮುತ್ತಿನ ಸರ ಹಾಗೂ ಫರಂಗಿಪೇಟೆಯ ಜ್ಯುವೆಲ್ಲರಿಯೊಂದರಿಂದ 1ಲಕ್ಷ ರೂ. ಬೆಲೆಬಾಳುವ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರೆನ್ನಲಾಗಿದೆ. ಆಕೆಯ ಜೊತೆ ನಗರದ ವಿವಿಧ ಲಾಡ್ಜ್ಗಳಲ್ಲಿ ಆಗಾಗ ತಂಗುತ್ತಿದ್ದ ಸಂತೋಷ್ ಆಕೆಯನ್ನೇ ಮದುವೆಯಾಗುವ ಕನಸನ್ನು ಕಟ್ಟಿಕೊಂಡಿದ್ದರೆ, ಆಕೆ ಮಾತ್ರ ಬೇರೊಬ್ಬನೊಂದಿಗೆ ಚಕ್ಕಂದ ಶುರುವಿಟ್ಟುಕೊಂಡಿದ್ದಳು ಎಂದು ಆರೋಪಿಸಲಾಗಿದೆ. ಮದುವೆಯಾಗದಿದ್ದರೂ ಮನೆಮಂದಿಗೆ ಆಕೆಯನ್ನು ಪರಿಚಯಿಸಿದ್ದ ಸಂತೋಷ್, ಆಕೆಯನ್ನು ಹೆಂಡತಿಯೆಂದೇ ಭಾವಿಸಿದ್ದರು.
ಆದರೆ ಪ್ರಿಯತಮ ಸಂತೋಷ್ನಿಂದ ಇದೆಲ್ಲವನ್ನೂ ಸ್ವೀಕರಿಸಿದ ಬಳಿಕ ವಿದ್ಯಾ ಶೆಟ್ಟಿಯ ನಡವಳಿಕೆ ಬದಲಾಗಿದ್ದು, ಈ ಬಗ್ಗೆ ಆಕೆಯ ನೆರೆಮನೆಯವರಲ್ಲಿ ವಿಚಾರಿಸಿದಾಗ ಆಕೆ ಈ ಹಿಂದೆಯೂ ಇಬ್ಬರು ಯುವಕರನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸುವ ನಾಟಕವಾಡಿ ಅವರಿಂದ ಎಲ್ಲವನ್ನೂ ಪಡೆದು ಬಳಿಕ ಅವರಿಗೆ ಕೈಕೊಟ್ಟ ವಿಚಾರ ಬೆಳಕಿಗೆ ಬಂದಿತ್ತು. ಆಕೆಯನ್ನು ಪ್ರೀತಿಸುತ್ತಿದ್ದ ನೆರೆಮನೆಯ ಯುವಕನೋರ್ವ ಆಕೆ ಕೊನೆಗೆ ಕೈಕೊಟ್ಟಾಗ ಆತ್ಮಹತ್ಯೆಗೆ ಮುಂದಾಗಿದ್ದು, ಆಸ್ಪತ್ರೆ ಸೇರಿದ ಆತ ಇದೀಗ ಪಾರ್ಶ್ವವಾಯು ಪೀಡಿತನಗಿರುವ ಸಂಗತಿಯೂ ಬೆಳಕಿಗೆ ಬಂದಿತ್ತು. ಇದನ್ನು ಸಂತೋಷ್ ಅವರು ವಿದ್ಯಾ ಅವರಲ್ಲಿ ವಿಚಾರಿಸಿದಾಗ ‘ನನಗೆ ಮದುವೆಯಾಗಲು ದುಬೈಯ ಹುಡುಗ ಸಿಕ್ಕಿದ್ದಾನೆ, ಇನ್ನು ನನ್ನ ತಂಟೆಗೆ ಬಂದರೆ ರೇಪ್ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ’ ಎಂಬುದಾಗಿ ಬೆದರಿಸಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.
ಕಳೆದ ಮೇ 9ರಂದು ಸಂತೋಷ್ ಅವರ ಬಿಜೈಯಲ್ಲಿನ ಕಚೇರಿಗೆ ಬಂದಿದ್ದ ವಿದ್ಯಾ ‘ನನಗೆ 2ಲಕ್ಷ ರೂ. ಕೊಡಬೇಕು, ಇಲ್ಲದಿದ್ದರೆ ರೇಪ್ ಕೇಸ್ ಹಾಕುತ್ತೇನೆ’ ಎಂಬುದಾಗಿ ಬೆದರಿಕೆ ಒಡ್ಡಿದ್ದಲ್ಲದೆ ಕೈಯಲ್ಲಿದ್ದ ಬೆಲೆಬಾಳುವ ಟ್ಯಾಬ್ ಮೊಬೈಲ್ ನೆಲಕ್ಕೆ ಬಡಿದು ಹಾನಿಯೆಸಗಿದ್ದು ಮಾತ್ರವಲ್ಲದೆ ಕಚೇರಿಯ ಗ್ಲಾಸ್ ಒಡೆದು ರಂಪಾಟ ಮಾಡಿ ತೆರಳಿದ್ದಳು. ಬಳಿಕ ಸಂತೋಷ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಸಂತೋಷ್ ಅವರನ್ನು ವಶಕ್ಕೆ ಪಡೆದು ಆರೋಪದಲ್ಲಿ ಹುರುಳಿಲ್ಲ ಎನ್ನುವುದನ್ನು ಮನಗಂಡಿದ್ದು, ಸಂತೋಷ್ ಒಂದೇ ದಿನದಲ್ಲಿ ಜಾಮೀನು ಪಡೆದುಕೊಂಡಿದ್ದರು.
ಸಂತೋಷ್ ನಡೆದಿರುವ ಘಟನಾವಳಿ, ಪ್ರೇಯಸಿ ವಿದ್ಯಾ ಜೊತೆಗಿನ ಸಂಬಂಧಕ್ಕೆ ಸಾಕ್ಷಿಯಾದ ಭಾವಚಿತ್ರ, ವಿಡಿಯೋ ಕಾಪಿ ಸಹಿತ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ‘ಪ್ರೀತಿ’ ಹೆಸರಲ್ಲಿ ವಂಚಿಸಿದ ವಿದ್ಯಾ ಶೆಟ್ಟಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿದ್ಯಾ ಶೆಟ್ಟಿ ವಿರುದ್ಧ ಸೆಕ್ಷನ್ 384, 420, 427, 884, 506 ರನ್ವಯ ವಂಚನೆ, ಬೆದರಿಕೆ, ಸುಲಿಗೆ ಪ್ರಕರಣ ದಾಖಲಾಗಿದೆ.
Comments are closed.