ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಕಮಿಷನ್ ಮೊದಲಾದ ವ್ಯವಸ್ಥೆಯಿಂದಾಗಿ ಸರಕಾರದ ಹಣ ಎಷ್ಟು ಪೋಲಾಗುತ್ತಾದೆ ಎನ್ನುವುದಕ್ಕೆ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಎಂಬಲ್ಲಿನ ಅಂಗನವಾಡಿಯಲ್ಲಿ ನಿರ್ಮಾಣವಾದ ಬಾವಿ ಸಾಕ್ಷಿ. ಅಂಗನವಾಡಿ ಮಕ್ಕಳ ಅನುಕೂಲಕ್ಕೆ ನಿರ್ಮಿಸಿದ ಇಲ್ಲಿನ ಬಾವಿ ಈಗ ಯಾವ ಸ್ಥಿತಿಯಲ್ಲಿದೆ ಎನ್ನುವುದಕ್ಕೆ ಈ ವರದಿ ಓದಿದ್ರೇ ಗೊತ್ತಾಗುತ್ತೆ.
ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕುಂದಬಾರಂದಾಡಿ ಅಂಗನವಾಡಿ ಕೇಂದ್ರದ ಅನುಕೂಲಕ್ಕಾಗಿ 2013-14ನೇ ಸಾಲಿನಲ್ಲಿ ಅಂಗನವಾಡಿ ಬಾವಿ ರಚನೆ ಸ್ಕೀಮಿನಡಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿಯ ಅನತಿ ದೂರದಲ್ಲಿ ಕುಡಿಯುವ ನೀರಿನ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಬಾವಿ ನಿರ್ಮಿಸಿದ್ದು ಆಯಿತು.. ಬಾವಿಯಲ್ಲಿ ಯತೇಚ್ಚ ನೀರು ಬಂದಿದ್ದು ಆಯ್ತು…ಆದರೇ ಆ ನೀರನ್ನು ಕುಡಿಯಲು ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ಬಾವಿ ನಿರ್ಮಿಸಿದ ಬಳಿಕ ಕಾಮಗಾರಿ ನಡೆಸಿದವರು ಬಾವಿಯಲ್ಲಿನ ಕಲುಷಿತ ನೀರನ್ನು ಸಂಪೂರ್ಣ ಖಾಲಿ ಮಾಡಿ ನೀರು ಶುದ್ಧವಾಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೇ ಬಾವಿ ನಿರ್ಮಾಣದ ದಿನದಿಂದ ಇಂದಿನವರೆಗೂ ಬಾವಿ ನೀರಿನ ಶುದ್ಧೀಕರಣ ಕೆಲಸ ನಡೆಯದ ಪರಿಣಾಮ ಅಂಗನವಾಡಿ ಬಾವಿ ಇದ್ದರೂ ಕೂಡ ಕುಡಿಯಲು ಹಾಗೂ ಇತರೇ ಕೆಲಸಕ್ಕೆ ಸಮೀಪದ ಶಾಲೆಯ ಬಾವಿಯ ನೀರನ್ನು ಅಂಗನವಾಡಿಯವರು ಉಪಯೋಗಿಸುವಂತಾಗಿದೆ.
ಇನ್ನು ಬಾವಿ ಕಾಮಗಾರಿ ನಡೆದು ಎರಡೇ ವರ್ಷದಲ್ಲಿ ಬಾವಿಯ ಸುತ್ತಲಿನ ಆವರಣ ಸಂಪೂರ್ಣ ಕುಸಿದಿದೆ. ಬಾವಿಯ ಸುತ್ತಲೂ ನೀರು ಸೇದಲೆಂದು ನಿರ್ಮಿಸಿದ ಆವರಣ ಕುಸಿದು ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ಆವರಣ ನಿರ್ಮಿಸುವಾಗ ಸಮರ್ಪಕ ರೀತಿಯಲ್ಲಿ ಮಣ್ಣು ತುಂಬಿಸಿದೇ ಬಾವಿ ತೋಡಿದ ಶೇಡಿ ಮಣ್ಣನ್ನೇ ಆವರಣದ ಹೊಂಡಕ್ಕೆ ತುಂಬಿಸಿ ಕಳಪೆ ಮಟ್ಟದಲ್ಲಿ ಸಿಮೆಂಟ್ ಗಾರೆ ಮಾಡಿದ ಪರಿಣಾಮ ಆವರಣ ಕುಸಿದು ಸುತ್ತಲೂ ಎರಡು ಅಡಿಗೂ ಆಳದ ಕಂದಕ ಸೃಷ್ಟಿಯಾಗಿದೆ. ಆವರಣಕ್ಕೆ ಮಣ್ಣು ತುಂಬಿಸಿ ಕಾಂಕ್ರಿಟ್ ಹಾಕಿದ ಬಳಿಕ ಗಾರೆ ಮಾಡಿದ್ದರೇ ಈ ಅವಸ್ಥೆ ಆಗುತ್ತಿರಲಿಲ್ಲ ಅಂತಾರೇ ಸ್ಥಳಿಯರು.
ಎರಡು ವರ್ಷಗಳ ಹಿಂದೆ ಜಿಲ್ಲಾಪಂಚಾಯತ್ ಅನುದಾನದಲ್ಲಿ ಬಾವಿ ನಿರ್ಮಾಣವಾಗಿದ್ದು ಈ ಬಗ್ಗೆ ಪಂಚಾಯತಿ ಗಮನಕ್ಕೆ ತಂದಿರಲೇ ಇಲ್ಲ ಎನ್ನುತ್ತಾರೆ ಅಂದಿನ ಸದಸ್ಯರೂ ಹಾಗೂ ಹಾಲಿ ಸದಸ್ಯರೂ ಆಗಿರುವ ಪಾರ್ವತಿ. ಬಾವಿಯ ಸಂಪೂರ್ಣ ರಿಪೇರಿ ಆಗಬೇಕು. ನೀರನ್ನು ಶುದ್ಧೀಕರಿಸಿ ಉಪಯೋಗಕ್ಕೆ ಅನುಕೂಲವಾಗುವಂತೆ ಶೀಘ್ರ ಮಾಡಿಕೊಡಬೇಕೆಂದು ಪಂಚಾಯತ್ ನಿರ್ಣಯವನ್ನು ಮಾಡೀದೆ ಅಂತಾರೆ ಇವರು.
ಇನ್ನು ಹದಿನೈದಕ್ಕೂ ಅಧಿಕ ಮಕ್ಕಳಿರುವ ಕುಂದಬಾರಂದಾಡಿ ಅಂಗನವಾಡಿಯ ಬಾವಿಯ ಅವ್ಯವಸ್ಥೆ ಬಗ್ಗೆ ಇಂಜಿನಿಯರ್ ಸೇರಿದಂತೆ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮಪಂಚಾಯತಿಗೂ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವೂ ಅಗಿಲ್ಲ. ಎರಡು ವರ್ಷದಲ್ಲಿ ಬಾವಿ ಕುಸಿಯುವುದು ಮಾಮೂಲಿ ವಿವಾರ. ಅದರಲ್ಲಿ ಆಶ್ಚರ್ಯ ಪಡುವ ಸಂಗತಿಯಿಲ್ಲ. ಇದು ಯಾರಿಂದಲೂ ನಡೆದ ತಪ್ಪು ಅಲ್ಲ ಎಂದು ಸಮಾಜಾಯಿಷಿ ಕೊಡುತ್ತಾ ಬೇಜವಬ್ದಾರಿಯಾಗಿ ಇಂಜಿನಿಯರ್ ಮಾತನಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅನಾಹುತಕ್ಕೂ ಮೊದಲು ಎಚ್ಚೆತ್ತುಕೊಂಡು ಶೀಘ್ರ ಬಾವಿ ರಿಪೇರಿ ಮಾಡಿಕೊಡದಲ್ಲಿ ದಲಿತಸಂಘರ್ಷ ಸಮಿತಿ ಹೋರಾಟ ಮಾಡುತ್ತದೆ ಎನ್ನುತ್ತಾರೆ ಸ್ಥಳಿಯ ಗ್ರಾಮಶಾಖೆ ಸಂಚಾಲಕ ವೆಂಕಟೇಶ್.
ಒಟ್ಟಿನಲ್ಲಿ ಮಕ್ಕಳ ಅನುಕೂಲಕ್ಕಾಗಿ ಮಾಡಿದ ಬಾವಿ ಉಪಯೋಗಕ್ಕಿಲ್ಲದಾಗಿದ್ದು ಒಂದೆಡೆಯಾದರೇ ಸುತ್ತಲಿನ ಆವರಣ ಕುಸಿದು ಬಾಯ್ತೆರೆದು ನಿಂತಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಸಂಬಂದಪಟ್ಟವರು ಶೀಘ್ರವೇ ಇದಕ್ಕೊಂದು ಪರಿಹಾರ ಕಲ್ಪಿಸುವ ಅನಿವಾರ್ಯತೆ ಇದೆ.
Comments are closed.