ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಆತನ ಊರು ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಕುಗ್ರಾಮವಾದ ಕೆಳಪೇಟೆ. ನಿತ್ಯ 28 ಕಿ.ಮೀ ಕಾಲೇಜಿಗೆ ಬರಲು ಹೋಗಲು 28 ಕಿ.ಮೀ. ಬಸ್ಸು ಪ್ರಯಾಣ ಮಾಡಿ ಬರುವ ವಿದ್ಯಾರ್ಥಿಯ ಕಠಿಣ ಪರಿಶ್ರಮ ಫಲಿಸಿದೆ. ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಚತುರ್ಥ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿ ಸಾಧನೆಗೈದಿದ್ದಾನೆ.
ಕುಂದಾಪುರದ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಜಿ. ರಾವ್ 600 ಅಂಕಗಳಲ್ಲಿ 593 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ. ಪಿಯುಸಿಯಲ್ಲಿ ಪಿ.ಸಿ.ಎಂ.ಎಸ್. ಓದಿದ ಈತನ ತಂದೆ ಟಿ. ಗುರುಮೂರ್ತಿ ರಾವ್ ನ್ಯಾಯವಾದಿಯಾಗಿದ್ದಾರೆ. ತಾಯಿ ಗೀತಾ ಗೃಹಿಣಿ. ಇನ್ನು ಸಹೋದರಿ ಉತ್ತಮ ವಿದ್ಯಾಭ್ಯಾಸ ಪಡೆದಿದ್ದು ಮಾತ್ರವಲ್ಲದೇ ಈತ ಓದಿದ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾಗಿ ಮುಂದಿನ ದಿನಗಳಲ್ಲು ಸೇವೆ ಸಲ್ಲಿಸಲಿದ್ದಾರೆ.
ನಿತ್ಯ ಕಾಲೆಜಿಗೆ ಬರಲು ಹೋಗಲು ಒಂದೊಂದು ಗಂಟೆ ಪ್ರಯಣಿಸುವ ಅಕ್ಷಯ್ ಓದಿನಲ್ಲಿ ತುಂಬಾ ಚುರುಕು. ಅಂದಿನ ಪಾಠ ಪ್ರವಚನಗಳನ್ನು ಅಂದಿನ ದಿನವೇ ಮುಗಿಸಿ, ಪಠ್ಯವನ್ನು ಓದುವ ಪರಿಪಾಠವನ್ನು ಹೊಂದಿದ್ದ ಈತ ಟ್ಯೂಶನ್ ಹೋಗಿಲ್ಲ.
‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಅಕ್ಷಯ್, ‘ತಾನೂ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಬಂದಿರುವುದು ಖುಷಿ ತಂದಿದೆ. ತಂದೆ ತಾಯಿ ಹಾಗೂ ಕುಟುಂಬಿಕರು ಮತ್ತು ಕಾಲೇಜಿನ ಪರಿಸರ, ಇಲ್ಲಿನ ಉಪನ್ಯಾಸಕರ, ಸಹಪಾಠಿಗಳ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಸಾಧನೆ ಮಾಡಲು ಸಧ್ಯವಾಯಿತು. ಮುಂದಿನ ದಿನಗಳಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ ಇಂಜಿನಿಯರಿಂಗ್ ಓದುವೆ’ ಎಂದಿದ್ದಾನೆ.
ಅಕ್ಷಯ್ ಸಾಧನೆ ಬಗ್ಗೆ ಕಾಲೇಜಿನ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗೆ ಸಿಹಿ ತಿನ್ನಿಸುವ ಮೂಲಕ ಶುಭಾಷಯ ಕೋರಿದರು.
Comments are closed.