ಹೊರ ರಾಜ್ಯದವರಿಗೆ ಮಣೆ ಹಾಕುತ್ತಿರುವ ಬಗ್ಗೆ ಆಕ್ರೋಶ
ಉಡುಪಿ: ಸತತ ನಾಲ್ಕನೇ ಬಾರಿಗೆ ಕರ್ನಾಟಕ ವಿಧಾನ ಸಭೆಯಿಂದ ರಾಜ್ಯ ಸಭೆಗೆ ಹೊರ ರಾಜ್ಯದವರಾದ ವೆಂಕಯ್ಯ ನಾಯ್ಡು ಅವರನ್ನು ಕಳುಹಿಸಲು ಬಿಜೆಪಿ ನಿರ್ಧರಿಸಿದ್ದು ಈ ಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ವೆಂಕಯ್ಯ ನಾಯ್ಡು ಅವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡುವ ವಿಚಾರದಲ್ಲಿ ಈಗಾಗಲೇ ಭಾರೀ ವಿರೋಧಗಳು ಕನ್ನಡ ಪರ ಸಂಘಟನೆಗಳು, ಚಿಂತಕರಿಂದ ವ್ಯಕ್ತವಾಗುತ್ತಿದ್ದು ಇದೀಗ ಪ್ರತಿಭಟನೆಯ ಸ್ವರೂಪ ಪಡೆಯುತ್ತಿದೆ. ವಿವಿಧ ಸಂಘಟನೆಗಳು ಈ ವಿಚಾರದಲ್ಲಿ ಬೀದಿಗೆ ಇಳಿಯುತ್ತಿದೆ. ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಗಾಂಧೀ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ವೆಂಕಯ್ಯ ನಾಯ್ಡು ಅವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ಬಾರಿ ಆಯ್ಕೆಯಾಗಿ ವೆಂಕಯ್ಯ ನಾಯ್ಡು ಕನ್ನಡಿಗರ ಪರವಾಗಿ ಮಾಡಿದ್ದಾದರೂ ಏನು? ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಈ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾರವೇ ಕಾರ್ಯಕರ್ತರು ಆರೋಪಿಸಿದರು.
Comments are closed.