ದುಬೈ: ಯಕ್ಷ ಮಿತ್ರರು ದುಬೈ ಯು.ಎ.ಇ. ಇವರ ಆಶ್ರಯದಲ್ಲಿ ಜೂನ್ 3ರಂದು ದುಬೈಯಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ದುಬೈಯ ಗಿಸಸ್ ನ ಫೋರ್ಚುನ್ ಫ್ಲಾಝ ಹೋಟೆಲ್ ನಲ್ಲಿ ಜರಗಿದ ಸರಳ ಸಮಾರಂಭದಲ್ಲಿ ನಡೆಯಿತು.
ದುಬೈಯ ಶೇಖ್ ರಾಶಿದ್ ಆಡಿಟೋರಿಯಂ ನ ಸಭಾಂಗಣದಲ್ಲಿ ಜೂನ್ 3ರಂದು ಸಂಜೆ 6 ಗಂಟೆಗೆ ಪ್ರದರ್ಶನ ಗೊಳ್ಳಲಿರುವ “ವಿರೋಚನ-ತರಣಿ ಸೇನ” ಪ್ರಸಂಗದ ಆಮಂತ್ರಣ ಪತ್ರಿಕೆಯನ್ನು ಯಕ್ಷ ಮಿತ್ರರು ತಂಡದ ಹಿರಿಯ ಸದಸ್ಯರಾದ ವಿಠಲ ಶೆಟ್ಟಿ, ರೂವಾರಿಗಾಳಾದ ದಿನೇಶ್ ಶೆಟ್ಟಿ ಕೊಟ್ಟಂಜ,ಚಿದಾನಂದ ಪೂಜಾರಿ,ತಂಡದ ಗುರುಗಳಾದ ಶೇಖರ್ ಶೆಟ್ಟಿಗಾರ್,ತಂಡದ ಹಿಮ್ಮೇಳವಾದಕರಾದ ಲಕ್ಷ್ಮೀನಾರಾಯಣ ಶರ್ಮರವರು ಬಿಡುಗಡೆಗೊಳಿಸಿದರು.
ಪ್ರದರ್ಶನದ ಪ್ರವೇಶ ಪತ್ರವನ್ನು ಯಕ್ಷ ಮಿತ್ರರು ತಂಡದ ಬಾಲ ಕಲಾವಿದರು ಬಿಡುಗಡೆಗೊಳಿಸಿದರು. ಯಕ್ಷಗಾನದ ಟ್ರೈಲರನ್ನು ತಂಡದ ಹಾಸ್ಯ ಕಲಾವಿದ ಗಿರೀಶ್ ನಾರಾಯಣ್ ಮತ್ತು ಸುಮಂತ ಗಿರೀಶ್ ಚಾಲನೆ ನೀಡಿದರು.
ಈ ವರ್ಷದ ಪ್ರಸಂಗ ಉತ್ತಮ ಕಥಾ ವಸ್ತುವನ್ನೊಳಗೊಂಡ “ವಿರೋಚನ”, “ತರಣಿ ಸೇನ” ಪ್ರಸಂಗದಲ್ಲಿ ಹಿಮ್ಮೇಳವಾದಕರಾದ ಊರಿಂದ ಬರುವ ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿ ಕಟ್ಟೆ ಚೆಂಡೆ ವಾದಕರಾಗಿ ಗುರು ಪ್ರಸಾದ್ ಬೊಳಿಂಜಡ್ಕ, ಸ್ತ್ರೀ ವೇಷಧಾರಿಯಾಗಿ ಶಶಿಕಾಂತ್ ಶೆಟ್ಟಿ ಕಾರ್ಕಳ ವೇಷ ಭೂಷಣ ಮತ್ತು ವರ್ಣಾಲಂಕಾರಕ್ಕಾಗಿ ಲಕ್ಷ್ಮಣ ಮರಕಡ, ಗಂಗಾಧರ ಶೆಟ್ಟಿಗಾರ್ ರವರು ಆಗಮಿಸಲಿದ್ದಾರೆ. ಹಾಗೂ ಯು.ಎ.ಇ ಯಲ್ಲಿರುವ 12ಕ್ಕೂ ಅಧಿಕ ಮಂದಿ ಬಾಲ ಕಲಾವಿದರು, 5ಕ್ಕೂ ಮಿಕ್ಕಿ ಮಹಿಳಾ ಕಲಾವಿದರು ಯಕ್ಷಗಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ತಂಡದ ಸಂಚಾಲಕರಾದ ದಿನೇಶ್ ಶೆಟ್ಟಿಯವರು ಮಾತನಾಡುತ್ತಾ ಜೂನ್ 3ರಂದು ದುಬೈಯ ಶೇಖ್ ರಾಸಿದ್ ಅಡಿಟೋರಿಯಂ ನಲ್ಲಿ ಸಾಯಂಕಾಲ 6ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು 4ಗಂಟೆಗೆ ಗೇಟ್ ತೆರೆಯಲಾಗುವುದು.ಹಾಗೂ ಟಿಕೆಟ್ ಗಾಗಿ ವಿಕ್ರಂ ಕಟೀಲ್ ರವರನ್ನು (0506953041,0507083537, 0507981323) ಸಂಪರ್ಕಿಸ ಬೇಕೆಂದು ಕರೆ ನೀಡಿದರು.
ಟಿಕೆಟ್ ನ ಪ್ರಥಮ ಖರೀದಿಯನ್ನು ಉದ್ಯಮಿಗಳಾದ ಜಯರಾಮ್ ಪಕಳ ಹಾಗೂ ರವಿ ಕೋಟ್ಯಾನ್ ರವರಿಗೆ ನೀಡಿ ಟಿಕೆಟ್ ಖರೀದಿಗೆ ಚಾಲನೆ ನೀಡಲಾಯಿತು.
ಕಲಾವಿದರಾದ ಗಿರೀಶ್ ನಾರಾಯಣ್,ಕೃಷ್ಣ ಭಟ್ಟ್, ಪತ್ರಕರ್ತರಾದ ಕಿರಣ ತಂಡದ ಹಿಮ್ಮೇಳ ವಾದಕರಾದ ಲಕ್ಷ್ಮೀನಾರಾಯಣ ಶರ್ಮಾ,ಅಶ್ವಥ್ ಸವ್ವಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ದಿನೇಶ್ ಕೊಟ್ಟ್ಂಜ ಸ್ವಾಗತಿಸಿ ರಾಜೇಶ್ ಕುತ್ತಾರ್ ನಿರೂಪಿಸಿ ಧನ್ಯವಾದವಿತ್ತರು.