
ಕುಂದಾಪುರ: ಕಳೆದು ಆರು ವರ್ಷದ ಹಿಂದೆ ಮಹಿಳೆ ಕೊಲೆ ಮಾಡಿ ರಸ್ತೆ ಬದಿ ಎಸೆದಿದ್ದ ಆರೋಪಿಗೆ ಕುಂದಾಪುರ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.
ಹೆಮ್ಮಾಡಿ ಸತೀಶ ಪೂಜಾರಿ ಗಲ್ಲುಶಿಕ್ಷೆಗೆ ಒಳಗಾದ ವ್ಯಕ್ತಿ. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಯ ರಾಜಶೇಖರ್ ವಿ. ಪಾಟೀಲ್ ಗಲ್ಲುಶಿಕ್ಷೆ ತೀರ್ಪು ನೀಡಿದ್ದಾರೆ.





ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಾಕ್ಷಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರದಲ್ಲಿಯೇ ಪ್ರಥಮವಾಗಿ ಐತಿಹಾಸಿಕ ತೀರ್ಪು ನೀಡಿದ್ದು ಪಬ್ಲಿಕ್ ಪ್ರಾಸಿಕ್ಯೂಟರ್ ಯು. ಶ್ರೀನಿವಾಸ ಹೆಗಡೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಏನಿದು ಘಟನೆ..?
ಕುಂದಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಸಲಹುವ ಕೆಲಸ ನಿರ್ವಹಿಸುತ್ತಿದ್ದ ಅಕ್ಕಯ್ಯ ಯಾನೆ ಜಯ ಹಾಗೂ ಆರೋಪಿ ಸತೀಶ್ ಪೂಜಾರಿ ನಡುವೆ ಅದೇಗೋ ಸಂಪರ್ಕ ಸ್ರಷ್ಟಿಯಾಗಿತ್ತು. ಜೊತೆಗೆ ಸತೀಶ್ ಪೂಜಾರಿ ಸಂಬಂಧಿಯೋರ್ವನ ಜೊತೆಗೆ ಮೃತ ಮಹಿಳೆ ಸಂಬಂಧ ಇಟ್ಟುಕೊಂಡಿದ್ದಳೆನ್ನಲಾಗಿತ್ತು. ಆತನೊಂದಿಗೆ ಮದುವೆ ಮಾಡಿಕೊಡಲು ಸತೀಶ್ ಪೂಜಾರಿ ಬಳಿ ಅಕ್ಕಯ್ಯ ಪೀಡಿಸುತ್ತಿದ್ದಳು. ಆದರೆ ಅದು ಅಸಾಧ್ಯವಾದ ಹಿನ್ನೆಲೆ ಅಕ್ಕಯ್ಯ ಸತೀಶನನ್ನೇ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಳು. ಮದುವೆಯಾಗದಿದ್ದಲ್ಲಿ ಈ ವಿಚಾರವನ್ನು ಸಂಬಂಧಿಕರ ಬಳಿ ತಾನೇ ಹೇಳುವುದಾಗಿ ಬೆದರಿಕೆಯೊಡ್ಡಿದ್ದಾಳೆ.
ಅಕ್ಕಯ್ಯಳ ಬೆದರಿಕೆ- ಆಯಿತು ಕೊಲೆ…
ಅಕ್ಕಯ್ಯ ಮಾಡುತ್ತಿದ್ದ ನಿರಂತರ ಬೆದರಿಕೆ ತಾಳಲಾರದೇ ಸತೀಶ್ ಪೂಜಾರಿ ಮಾರುತಿ ಓಮ್ನಿ ಬಾಡಿಗೆಗೆ ಪಡೆದು ಮಧ್ಯಾಹ್ನ ಆಕೆಯನ್ನು ಕೊಳುರು ಕ್ರಾಸ್ನಿಂದ ಕುಳ್ಳೀರಿಸಿಕೊಂಡು ಮರವಂತೆ ಕಡೆಗೆ ತೆರಳಿದ್ದ, ಓಮ್ನಿಯಲ್ಲಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯ ಕುತ್ತಿಗೆಯಲ್ಲಿದ್ದ ಶಾಲನ್ನೇ ಬಿಗಿಯಾಗಿ ಸುತ್ತಿ ಕೊಲೆಗೈದ್ದ. ಅಲ್ಲಿಂದ ಅದೇ ವಾಹನದ ಹಿಂಬಂದಿಯಲ್ಲಿಯೇ ಆಕೆಯ ಶವವನ್ನು ಹಾಕಿಕೊಂಡು ಮತ್ತೆ ಹೆಮ್ಮಾಡಿ ಹಿಂತಿರುಗಿದ್ದ ಸತೀಶ್ ಫ್ಯಾನ್ಸಿ ಅಂಗಡಿಯ ಎದುರು ವಾಹನವನ್ನು ನಿಲ್ಲಿಸಿ ಏನೂ ನಡೆದಿಲ್ಲ ಎನ್ನುವಂತೆ ವ್ಯವಹಾರ ನಡೆಸಿ ಸಂಜೆಯಾಗುತ್ತದ್ದಂತೆಯೇ ವಾಹನದಲ್ಲಿ ನೂಜಾಡಿಗೆ ತೆರಳುವ ಕೊಳೂರು ಕ್ರಾಸ್ ಬಳಿ ತೆರಳಿದ್ದ. ರಸ್ತೆಬದಿಯಲ್ಲಿಯೇ ಆಕೆಯ ಶವವನ್ನು ಎಸೆದು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.
ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಪರಾಧಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾಗ ಮೊದಲು ಕಳವಾಗಿದ್ದ ಆಕೆ ಚಿನ್ನ ಪತ್ತೆಯಾಗಿದ್ದು, ಅದೂ ಅಲ್ಲದೇ ಆಕೆಯನ್ನು ಓಮ್ನಿಯಲ್ಲಿ ಕರೆದುಕೊಂಡು ಹೋಗುತ್ತಿದ್ದುದನ್ನು ಪ್ರತ್ಯಕ್ಷವಾಗಿ ಓರ್ವರು ಕಂಡಿದ್ದರು. ಅದರ ಆಧಾರ ಮೇಲೆಯೇ ವೃತ್ತ ನಿರೀಕ್ಷಕ ಮದನ್ ಗಾಂವ್ಕರ್ ಕೋರ್ಟಿಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.