ಬೆಂಗಳೂರು: ಆರು ಪ್ರಶ್ನೆ ಪತ್ರಿಕೆಗಳನ್ನು ಸಿದ್ದ ಮಾಡಿದ್ದೇವು. ಇವತ್ತು ಬೆಳಗ್ಗೆ ಯಾವ ಪ್ರಶ್ನೆ ಪತ್ರಿಕೆ ನೀಡಬೇಕು ಎನ್ನುವುದನ್ನು ತೀರ್ಮಾನಿಸಿದೆವು. ಹೀಗಾಗಿ ಪ್ರಶ್ನೆ ಪತ್ರಿಕೆ ರಾತ್ರಿ ಲೀಕ್ ಆಗಿದ್ದರೂ ತೊಂದರೆ ಇರಲಿಲ್ಲ. ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಖಂಡಿತಾ ಇದೆ. ಹೀಗಾಗಿ ಬದಲಾವಣೆ ತರುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ರಸಾಯನಶಾಸ್ತ್ರ ಮರುಪರೀಕ್ಷೆ ಮಂಗಳವಾರ ಯಾವುದೇ ಆತಂಕವಿಲ್ಲದೇ, ವಿವಾದಗಳಿಲ್ಲದೇ ಸುಸೂತ್ರವಾಗಿ ನಡೆದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿವರು ಮಾತನಾಡಿದರು.
ವಿಟಿಯು ಪರೀಕ್ಷೆಗೂ ಆನ್ಲೈನ್ ಪದ್ಧತಿಯನ್ನು ತರುವ ಬಗ್ಗೆ ಯೋಚನೆ ಇದೆ. ಇದರ ಆಗುಹೋಗುಗಳ ಬಗ್ಗೆ ರ್ಚಚಿಸಲಾಗುವುದು. ನಂತರ ಪರೀಕ್ಷಾ ಕ್ರಮದಲ್ಲಿ ಸುಧಾರಣೆ ತರಲಾಗುವುದು ಎಂದಿರುವ ಸಚಿವರು, ರಸಾಯನಶಾಸ್ತ್ರ ಮರು ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಮಿತಿ ಮಾಡಿದ್ದೆವು. ಇನ್ನು ಮುಂದೆ ಪ್ರಶ್ನೆಪತ್ರಿಕೆಯನ್ನು ಆನ್ಲೈನ್ನಲ್ಲಿ ಕಳುಹಿಸುವ ಚಿಂತನೆ ಇದೆ. ಮುಷ್ಕರ ನಿರತ ಉಪನ್ಯಾಸಕರ ವಿರುದ್ಧ ನಾಳೆಯಿಂದ ಸರ್ಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.
ಗೌರವ ಸಂಭಾವನೆ ನಿರ್ಧಾರ ಅಚಲ
50ಕೋಟಿ ರೂ. ಗೌರವ ಸಂಭಾವನೆ ಕೊಡುವ ನಿರ್ಧಾರ ಅಚಲ. ಇದರಿಂದ ಉಪನ್ಯಾಸಕರಿಗೆ 500ರೂ. ಹೆಚ್ಚುವರಿ ಸಿಗುತ್ತದೆ. ಇವತ್ತು ಮಧ್ಯಾಹ್ನ ಮತ್ತೊಮ್ಮೆ ಮಾತುಕತೆ ನಡೆಸುತ್ತೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದೇವೆ. ಅಲ್ಲಿನ ಉಪನ್ಯಾಸಕರ ಸೇವೆ ಬಳಸಿಕೊಂಡು 12ದಿನದಲ್ಲಿ ಮೌಲ್ಯಮಾಪನ ಕಾರ್ಯ ಮುಗಿಸುತ್ತೇವೆ. ನಾಳೆ ಸಂಜೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.