ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ಶಾರ್ಜಾ, ನ.21: ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನದ ದ್ಯೋತಕವಾಗಿ ನಡೆದ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಮನಸೂರೆಗೊಳಿಸಿದ ವಿವಿಧ ರೀತಿಯ ನೃತ್ಯ ರೂಪಕ, ಸಂಗೀತ ರಸಮಂಜರಿ, ಹಾಸ್ಯಮಯ ಪ್ರಹಸನ, ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ ಪ್ರಧಾನ, ವಿವಿಧ ಸಾಧಕರಿಗೆ ‘ವಿಸ್ವ ಕನ್ನಡ ಸಮ್ಮೇಳನ’ ಹಾಗೂ ‘ಕರ್ನಾಟಕ ಹಿರಿಮೆ’ ಪ್ರಶಸ್ತಿ ಪ್ರಧಾನ….ಇದು ಶಾರ್ಜಾದ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಸಭಾಂಗಣದಲ್ಲಿ ನಡೆದ ಎರಡನೆ ದಿನದ 12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಹಾಗೂ 60ನೆ ಕರ್ನಾಟಕ ರಾಜ್ಯೋತ್ಸವ ಮತ್ತು ಶಾರ್ಜಾ ಕರ್ನಾಟಕ ಸಂಘದ 13ನೆ ವಾರ್ಷಿಕೋತ್ಸವದ ಹೈಲೈಟ್ಸ್….
ಶಾರ್ಜಾ ಕರ್ನಾಟಕ ಸಂಘ ಹಾಗೂ ಹೃದಯ ವಾಹಿನಿ ಕರ್ನಾಟಕ ಇವರ ಆಶ್ರಯದಲ್ಲಿ ನಡೆದ 12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಗುರುವಾರ ದುಬೈಯಲ್ಲಿಯೂ ಹಾಗೂ ಶುಕ್ರವಾರ ಶಾರ್ಜಾದ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಸಭಾಂಗಣದ ಮಾಸ್ತಿ ವೆಂಕಟೇಶ್ ಐಯ್ಯಂಗಾರ್ ವೇದಿಕೆಯಲ್ಲಿ ಬಹಳ ಅದ್ದೂರಿ ಹಾಗೂ ವಿಶಿಷ್ಟತೆಯಿಂದ ವೈಭವಪೂರಿತವಾಗಿ ಸಮಾಪನಗೊಂಡಿತು.
ಕರ್ನಾಟ ಸೇರಿದಂತೆ ಗಲ್ಫ್ನ ವಿವಿಧ ಕಡೆಗಳಿಂದ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಭಾಗವಹಿಸಿ, ಭಾಷೆಯ ಬಗ್ಗೆಗಿನ ಅಭಿಮಾನ, ಸಂಸ್ಕೃತಿಯನ್ನು ಕೊಂಡಾಡಿದರು.
ಹಿರಿಯ ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಎನ್ಎಂಸಿ ಗ್ರೂಪ್ನ ಆಡಳಿತ ನಿರ್ದೇಶಕ, ಹೆಸರಾಂತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಉದ್ಯಮಿ ಝಫ್ರುಲ್ಲ ಖಾನ್, ಮಂಗಳೂರಿನ ಶಾಸಕ ಮೊಯ್ದಿನ್ ಬಾವಾ, ಮಲಯ ಶಾಂತಮುನಿ ಸ್ವಾಮೀಜಿ, ಧರ್ಮಗುರು ಮ್ಯಾಕ್ಸಿಂ ಪಿಂಟೋ, ಕನ್ನಡ ಸಿನೆಮಾ ನಟ ಸಾಧುಕೋಕಿಲಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಚಿಲಿವಿಲಿಯ ಸತೀಶ್ ವೆಂಕಟರಮಣ, ಹೃದಯ ವಾಹಿನಿಯ ಮಂಜುನಾಥ್ ಸಾಗರ್, ಮಾರ್ಕ್ ಡೆನ್ನಿಸ್,ವೈ.ಕೆ.ರಹೀಂ ಸೇರಿದಂತೆ ಗಣ್ಯರ ದಂಡೇ ಭಾಗವಹಿಸಿತ್ತು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮವಂತೂ ಅರ್ಥಪೂರ್ಣವಾಗಿತ್ತು. ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಪದರ್ಶನಗೊಂಡ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಸಂಗೀತ ರಸಮಂಜರಿ, ಜೊತೆಗೆ ಯು.ಎ.ಇ. ವಿವಿಧ ಭಾಗಗಳ ಪ್ರತಿಭೆಗಳ ಕಲೆಗಳು ಅನಾವರಣಗೊಂಡವು.
ಕನ್ನಡ ಧ್ವಜಾರೋಹನದ ಮೂಲಕ ಸಮ್ಮೇಳನಕ್ಕೆ ಚಾಲನೆ
ಶಾರ್ಜಾದ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಸಭಾಂಗಣದಲ್ಲಿ ನಡೆದ ಎರಡನೆ ದಿನದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಸಮ್ಮೇಳನದ ಅಧ್ಯಕ್ಷ, ಕನ್ನಡದ ಹಿರಿಯ ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ಅವರು ಕನ್ನಡ ಧ್ವಜಾರೋಹನ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ವಿವಿಧ ಗೋಷ್ಠಿಗಳು
ಪ್ರೊ.ಎಂ.ಬಿ.ಕುದರಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಪ್ರಭಾ ಸುವರ್ಣ ಮುಂಬೈ, ಪ್ರಕಾಶ್ ರಾವ್ ಪಯ್ಯರ್, ಗೋಪಿನಾಥ್ ರಾವ್, ಈರಣ್ಣ ಮೂಲಿಮನಿ, ಮನೋಹರ್ ಮೇಲ್ಮನೆ ಹಾಗೂ ಎಂ. ಇ. ಮೂಳೂರು ತಮ್ಮ ಕವಿತೆಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ, ದುಬೈಯ ಹಿರಿಯಣ್ಣರೆಂದೇ ಕರೆಸಿಕೊಳ್ಳುವ ಸರ್ವೋತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ‘ಅನಿವಾಸಿ ಕನ್ನಡಿಗರು ಮತ್ತು ಮಾಧ್ಯಮ ಗೋಷ್ಠಿ’ಯಲ್ಲಿ ರಾಜ್ ಕುಮಾರ್, ಬಿ. ವಿ. ನಾಗರಾಜ್, ಡಾ. ಸಿ. ಕೆ. ಅಂಚನ್, ಹಾಗೂ ವೀರೆಂದ್ರ ಬಾಬು ಭಾಗವಹಿಸಿದ್ದರು. ಈ ಗೋಷ್ಠಿಯಂತೂ ಬಹಳ ಅರ್ಥಪೂರ್ಣವಾಗಿತ್ತು. ಮಹದೇವ ಸತ್ತಿಗೇರಿ, ಹಾಗೂ ಅಜಯ ಸುರಪುರರಿಂದ ಹಾಸ್ಯ ಗೋಷ್ಠಿ ನಡೆಯಿತು.
ಪ್ರವೀಣ್ ಶೆಟ್ಟಿಯವರಿಗೆ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಪ್ರದಾನ
ದುಬೈಯಲ್ಲಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದಿರುವ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯವೆಸಗುತ್ತಿರುವ ಫೋರ್ಚುನ್ ಗ್ರೂಪ್ ಆಫ್ ಹಂಟೇಲ್ಸ್ನ ಮಾಲಕ ಕುಂದಾಪುರ ವಕ್ವಾಡಿಯ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಶಾರ್ಜಾ ಕರ್ನಾಟಕ ಸಂಘ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರವೀಣ್ ಶೆಟ್ಟಿಯವರು ತಮ್ಮ ಧರ್ಮಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ ಅವರು, ಈ ಪ್ರಶಸ್ತಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕನ್ನಡ ಭಾಷೆಯ ಬಗ್ಗೆ ಅತ್ಯಂತ ಒಲವು ಹೊಂದಿರುವ ತಾನು ಉದ್ಯಮದ ಜೊತೆ ಸಾಮಾಜಿಕವಾಗಿ ಕೆಲಸ ಮಾಡುತ್ತಿರುವುದು ಇನ್ನಷ್ಟು ಖುಷಿಕೊಡುತ್ತಿದೆ ಎಂದರು.
‘ವಿಶ್ವ ಮಾನ್ಯ ಪ್ರಶಸ್ತಿ’ ಪ್ರದಾನ
ಎನ್.ಎ.ಮಗದುಮ್ ಚಿಕ್ಕೊಡಿ(ಶಿಕ್ಷಣ ಕ್ಷೇತ್ರ), ಮೆಟ್ರೊ ಮಹಮ್ಮದ್ ಬೆಂಗಳೂರು (ಸಮಾಜ ಸೇವೆ), ಎ ಎಫ್. ಕುದ್ರೋಳಿ ಬೆಂಗಳೂರು(ಶಿಕ್ಷಣ ಕ್ಷೇತ್ರ), ಗಣೇಶ್ ರೈ, ಶಾರ್ಜಾ(ಕನ್ನಡ ಸೇವೆ), ಮಾರುತಿ ಶೆಗುಣ್ಸೆ, ರಾಯ್ ಬಾಗ್(ಸಮಾಜ ಸೇವೆ), ರಾಜೇಶ್ ವರ್ಣೆಕರ್, ದಾವಣಗೆರೆ( ಸೂಕ್ಷ್ಮಬರವಣಿಗೆ), ಎಂ. ನವೀನ್ ಪ್ರಸಾದ್, ಬೆಂಗಳೂರು (ಕ್ರಿಯಾ ಯೋಗ ಶಿಕ್ಷಣ), ಡಿ. ಕೆ. ರಮೇಶ್ , ಕೋಲಾರ (ವೈದ್ಯಕೀಯ ಕ್ಷೇತ್ರ) ಇವರ ಕಾರ್ಯ ಸಾಧನೆಯನ್ನು ಗುರುತಿಸಿ ‘ವಿಶ್ವ ಮಾನ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
‘ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ’ ಪ್ರದಾನ
ಡಾ. ಐಕಳಬಾವ ದೇವಿಪ್ರಸಾದ ಶೆಟ್ಟಿ ಉಡುಪಿ(ಗ್ರಾಮೀಣ ಅಭಿವೃದ್ಧಿ), ದಾವುದ್ ಅಬ್ಬುಬಕ್ಕರ್(ಉಡುಪಿ ತಾಂತ್ರಿಕ ಸೇವೆ), ಅಣ್ಣೆ ಗೌಡ, ಬೆಂಗಳೂರು (ಸಮಾಜ ಸೇವೆ), ಡಾ ವಿ. ನಾಗರಾಜ್ ನಾಯಕ್(ತಾಂತ್ರಿಕ ಕ್ಷೇತ್ರ), ವಿಜಯ ಲಕ್ಷ್ಮೀ ಜಿತೆಂದ್ರ ಬೆಂಗಳೂರು(ಭರತನಾಟ್ಯ). ಇವರಿಗೆ ‘ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ’ಯನ್ನು ಗಣ್ಯರು ಪ್ರದಾನ ಮಾಡಿದರು.
‘ಕರ್ನಾಟಕ ಹಿರಿಮೆ ಪ್ರಶಸ್ತಿ’ ಪ್ರದಾನ
ಮಾರ್ಕ್ ಡೆನಿಸ್ ಡಿಸೋಜಾ, ಪ್ರಭಾಕರ ಅಂಬಲ ತೆರೆ, ನೋವೆಲ್ ಡಿ ಅಲ್ಮೇಡಾ, ಸತೀಶ್ ಪೂಜಾರಿ, ಶಾಂತಾರಾಂ ಆಚಾರ್ರಿಗೆ ‘ಕರ್ನಾಟಕ ಹಿರಿಮೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಶಾರ್ಜಾ ಕರ್ನಾಟಕ ಸಂಘದ ಬಸಂತ್ ಬೇಕಲ್ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ವೈವಿಧ್ಯಗಳ ಅನಾವರಣ
ಕರ್ನಾಟಕದ ಹಾಗೂ ಯುಎಇಯ ವಿವಿಧ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮೇಳನಕ್ಕೆ ಇನ್ನಷ್ಟು ಮೆರುಗು ನೀಡಿತು.
ಟಿ.ವಿ.9 ವಾಹಿನಿ ತಂಡದ ಕಲಾವಿದರಿಂದ ಹಳ್ಳಿ ಕಟ್ಟೆ ಹಾಸ್ಯ ಪ್ರಹಸನ, ವಿವಿಧ ಕಲಾತಂಡದವರಿಂದ ನಡೆದ ನೃತ್ಯ ರೂಪಕ, ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಗಾಯಕ ಹರೀಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್, ಗೋ.ನಾ.ಸ್ವಾಮಿ ಅವರ ರಸಮಂಜರಿ, ಸಾಧುಕೋಕಿಲರ ಮಿಮಿಕ್ರಿ, ಹಾಡು ಸೇರಿದಂತೆ ಹತ್ತಲವು ಜಾನಪದ ಕಲಾಪ್ರಾಕರಗಳು ಪ್ರದರ್ಶನಗೊಂಡಿದ್ದು, ನೆರೆದವರನ್ನು ಮಂತ್ರಮುಗ್ಧಗೊಳಿಸಿತು.
ಇದಕ್ಕೂ ಮುನ್ನ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಈ ವೇಳೆ ಕನ್ನಡದ ತೇರನ್ನು ಎಳೆದು ಚೆಂಡೆ-ವಾದ್ಯಗಳ ನಾದದೊಂದಿಗೆ ವೇದಿಕೆಗೆ ಅವರನ್ನು ಗಣ್ಯರು ಕರೆತಂದರು. ಕಾರ್ಯಕ್ರಮವನ್ನು ಗೋ.ನಾ.ಸ್ವಾಮಿ, ಪ್ರಿಯಾ, ರೋಹಿಣಿ ಅನಂತ್ ಹಾಗೂ ಗಣೇಶ್ ರೈ ನಿರೂಪಿಸಿದರು.