ದುಬಾಯಿ SME 100 ಪ್ರತಿಷ್ಠಿತ ಪ್ರಶಸ್ತಿ ದುಬಾಯಿ ಚಿಲ್ಲಿವಿಲ್ಲಿ ಸಂಸ್ಥೆಗೆ ದೊರೆತಿದೆ. 2015 ನವೇಂಬರ್ 15ನೇ ತಾರೀಕು ದುಬಾಯಿ ಮ್ಯಾಡಿನೆಟ್ ಜುಮೇರಾ ಸಭಾಂಗಣದಲ್ಲಿ ಚಿಲ್ಲಿ ವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೀಶ್ ವೆಂಕಟರಮಣರವರು ಪ್ರಶಸ್ತಿಯನ್ನು ದುಬಾಯಿಯ ದೊರೆಗಳಾದ ಗೌ| ಶೇಖ್ ಹಮ್ದಾನ್ ಬಿನ್ ಮಹಮ್ಮದ್ ಬಿನ್ ರಾಶೀದ್ ಅಲ್ ಮಕ್ತೂಮ್ – ಕ್ರೌನ್ ಪ್ರಿನ್ಸ್ ಆಫ್ ದುಬಾಯಿ ಹಾಗೂ ಚೇರ್ಮನ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಇವರಿಂದ ಸ್ವೀಕರಿಸಿದರು. ದುಬಾಯಿ ಡಿಪಾರ್ಟ್ಮೆಂಟ್ ಆಫ್ ಎಕಾನಮಿಕ್ ಡೆವಲಪ್ಮೆಂಟ್ ಆಯೋಜಿಸಿದ್ದು ಉಧ್ಯಮ ಪ್ರಶಸ್ತಿ ನೀಡಲಾಗುತಿದೆ. ಕನ್ನಡಿಗ ಉದ್ಯಮಿ ಶ್ರೀ ಸತೀಶ್ ವೆಂಕಟರಮಣ ಪ್ರಸ್ತುತ ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅರಬ್ ದೇಶದಲ್ಲಿ ಯಶಸ್ವಿ ಜನಪ್ರಿಯ ಉದ್ಯಮಿ ಸತೀಶ್ ವೆಂಕಟರಮಣ ಗಾಣಿಗ
ಅರಬ್ ಸಂಯುಕ್ತ ಸಂಸ್ಥಾನ ಮರಳುಗಾಡನ್ನು ಹಸಿರು ಭೂಮಿಯನಾಗಿ ಪರಿವರ್ತಿಸಿದ ಅರಬ್ಬರ ನಾಡು. ಜ್ಞಾನ ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ. ಲೋಕ ವಿಖ್ಯಾತ ವಾಣಿಜ್ಯ ಕೇಂದ್ರ. ಇನ್ನೂರು ವಿವಿಧ ದೇಶಿಯರ ನಡುವೆ ಅರಬ್ ದೇಶದ ಅಭಿವೃದ್ಧಿಯಲ್ಲಿ ಭಾರತೀಯರ ಕೊಡುಗೆ ಅಪಾರವಾಗಿದೆ. ಭಾರತದ ಉದ್ಯಮಿಗಳ ಸಾಲಿನಲ್ಲಿ ಎತ್ತರದ ಸ್ಥಾನದಲ್ಲಿ ಆಕರ್ಷಕ ವ್ಯಕ್ತಿತ್ವದ ಕನ್ನಡಿಗ ಉದ್ಯಮಿ ಶ್ರೀ ಸತೀಶ್ ವೆಂಕಟರಮಣ ಗಾಣಿಗ. ಪ್ರಸಿದ್ದ ಉತ್ಪನ್ನಗಳ ತಯಾರಿಕಾ ಸಂಸ್ಥೆ ಚಿಲ್ಲಿ ವಿಲ್ಲಿ ಟ್ರೇಡಿಂಗ್ ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸಾಮಾಜಿಕ ರಂಗದಲ್ಲಿ ಸಮಾಜ ಸೇವಕರಾಗಿ ಕರ್ನಾಟಕ ಸಂಘ ಶಾರ್ಜಾ ದ ಅಧ್ಯಕ್ಷರಾಗಿರುವ ಅಪ್ಪಟ ಕನ್ನಡ ಪ್ರೇಮಿ, ದೇಶ ಭಕ್ತ ಭಾರತೀಯನಾಗಿರುವ ಶ್ರೀ ಸತೀಶ್ ವೆಂಕಟರಮಣರವರ ತಮ್ಮ ಮೂರು ದಶಕಗಳ ಪಯಣದ ಯಶಸ್ವಿ ಹೆಜ್ಜೆಗುರುತನ್ನು ದಾಖಲಿಸುವ ಒಂದು ವಿಶೇಷ ಲೇಖನ…..
ಸತೀಶ್ ವೆಂಕಟರಮಣ ಮೂಲತ ಕರ್ನಾಟಕ ಕಡಲ ತೀರದ ನಾಡು ಉಡುಪಿಯ ಕೆಮ್ಮಣ್ಣು ತೋನ್ಸೆಯವರು. ಶ್ರೀಮತಿ ವನಮಾಲ ಮತ್ತು ದಿ| ಸಿರಿಯಾರ ವೆಂಕಟರಮಣ ರವರ ಪುತ್ರರಾಗಿದ್ದು ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣ ಹೊಟ್ಟೂರಿನಲ್ಲಿ ಮುಗಿಸಿ ನಂತರ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದು, ಬೆಂಗಳೂರಿನ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ ನಲ್ಲಿ ಹೋಟೆಲ್ ಮ್ಯಾನೆಜ್ ಮೆಂಟ್ ಡಿಪ್ಲೋಮಾ ಪಡೆದಿದ್ದಾರೆ.
1980 ರಿಂದ ಬೆಂಗಳೂರಿನಲ್ಲಿ ವಿಂಡ್ಸರ್ ಮ್ಯಾನೆರ್, ವೆಸ್ಟ್ ಎಂಡ್ ತಾಜ್ ರೆಸಿಡೆನ್ಸಿ ಮತ್ತು ಇನ್ನಿತರ ಪ್ರಖ್ಯಾತ ಹೋಟೆಲಿನಲ್ಲಿ ಸ್ವಾಗತಕಾರರಾಗಿ ಸೇವೆ ಸಲ್ಲಿಸಿರುವ ಸುರದ್ರೂಪ ತರುಣ 1984 ರಲ್ಲಿ ಕೊಲ್ಲಿ ರಾಷ್ಟ್ರದತ್ತ ಪಯಣದ ಅವಕಾಶ ದೊರೆಯಿತು. ಬಹೆರಿನ್ ನಲ್ಲಿ ಸೇಲ್ಸ್ ಅಸಿಸ್ಟೆಂಟ್ ಅನುಭದೊಂದಿಗೆ, 1992 ರಲ್ಲಿ ಯು.ಎ.ಇ. ಗೆ ಬಂದು ಐ.ಬಿ.ಎಫ್.ಐ. ಸ್ಟಾರ್ ಕೋಲಾ – ಶಾರ್ಜಾದಲ್ಲಿ ಅನುಭವ ಹೆಚ್ಚಿಸಿಕೊಂಡರು. ಅಬುಧಾಬಿ ಮುನಿಸಿಪಾಲಿಟಿಯ ಪ್ರತಿಷ್ಠಿತ ಅಲ್ ಮಾರ್ಫಾ ಡೇಟ್ಸ್ (ಖರ್ಜೂರ) ಫ್ಯಾಕ್ಟರಿಯಲ್ಲಿ ಎಕ್ಸ್ ಪೋರ್ಟ್ ಸೇಲ್ಸ್ ಮ್ಯಾನೇಜರ್ ಆಗಿ 1994 ರಿಂದ 2008 ರವರೆಗೆ ಸೇವೆ ಸಲ್ಲಿಸಿದ್ದಾರೆ.
ಯು.ಎ.ಇ. ಯಲ್ಲಿ 2008 ರಿಂದ ನೂತನ ಸಂಸ್ಥೆ “ಚಿಲ್ಲಿ ವಿಲ್ಲಿ ಟ್ರೇಡಿಂಗ್” ಪ್ರಾರಂಭ
ಯು.ಎ.ಇ. ಯಲ್ಲಿ 2008 ರಲ್ಲಿ ಪ್ರಥಮ ಬಾರಿಗೆ ಟೊಮೆಟೋ ಪೇಸ್ಟ್ ಉತ್ಪಾಧನೆ ಘಟಕ ಜೆಬೆಲ್ ಆಲಿ ಫ್ರೀ ಜೋನ್ ನಲ್ಲಿ ಬ್ರಿಟೀಷ್ ಪಾರ್ಟ್ನರ್ ನೊಂದಿಗೆ ಸೇರಿ ಪ್ರಾರಂಬಿಸಿದರು.
ದುಬಾಯಿಯಲ್ಲಿ ಸ್ವಂತ ಚಿಲ್ಲಿ ವಿಲ್ಲಿ ಟ್ರೇಡಿಂಗ್ ಸ್ವಂತವಾಗಿ ಸ್ಥಾಪನೆ, ನಂತರ 2010 ರಲ್ಲಿ ಶಾರ್ಜಾ ಹಮ್ರಿಯ ಫ್ರೀಜೋನ್ ನಲ್ಲಿ ಟೊಮೆಟೊ ಪೇಸ್ಟ್, ತೋಮೆಟೊ ಕೆಚಪ್, ಹಾಟ್ ಸಾಸ್, ಚಿಲ್ಲಿ ಸಾಸ್, ಚಿಲ್ಲಿ ಗಾರ್ಲಿಕ್ ಸಾಸ್, ಗ್ರೀನ್ ಚಿಲ್ಲಿ ಸಾಸ್, ವೈಟ್ ವಿನಿಗರ್, ರೋಸ್ ವಾಟರ್, ಸಾಲ್ಟ್, ಒಲಿವ್ ಅಯಿಲ್, ಮಯೋನಿಸ್ ವಹಿವಾಟು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದಿದೆ.
ಭಾರತದಿಂದ ಮಾವಿನ ಮಿಡಿ, ನಿಂಬೆ ಮತ್ತು ಮಿಶ್ರ ಉಪ್ಪಿನಕಾಯಿ ಆಮದು ಮಾಡಿಕೊಂಡು, ಥೈಲ್ಯಾಂಡ್ ನಿಂದ ಎಳನೀರು ಪಲ್ಪಿನೊಂದಿಗೆ, ತೆಂಗಿನ ಹಾಲು, ಮಿಲ್ಕ್ ಪೌಡರ್, ಟೇಮ್ರಿಂಡ್ ಪೇಸ್ತ್, ಯು.ಎ.ಇ. , ಟುನಿಸಿಯನ್, ಸೌದಿ ಮತ್ತು ಒಮಾನಿನಿಂದ ಖರ್ಜೂರ ಇತ್ಯಾದಿ ಫುಡ್ ಪ್ರಾಡೆಕ್ಟ್ಸ್ ಭಾರತ, ದೋಹ, ಕತ್ತರ್, ಓಮಾನ್, ಯಮೇನ್, ಇರಾಕ್, ಕೆನ್ಯಾ, ಸೋಮಾಲಿಲ್ಯಾಂಡ್, ಆಸ್ಮರ, ಡ್ಜಿಬೌಟಿ, ಮಾಲೆ, ಕಾಂಗೊ, ನೈಜಿರಿಯಾ, ಮೆಡ್ಗಾಸರ್, ಮಾಲ್ಡಿವ್ಸ್ ಮತ್ತು ಶ್ರೀಲಂಕ ದೇಶಗಳ ಜೊತೆಗೆ ವ್ಯವಹಾರ ಹೊಂದಿದ್ದಾರೆ. ಪ್ರಸ್ತುತ ಚಿಲ್ಲಿ ವಿಲ್ಲಿ ಸಂಸ್ಥೆಯಲ್ಲಿ 147 ವಿವಿಧ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ.
ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಸೇವೆಯಲ್ಲಿ…
ದುಬಾಯಿ ಕರ್ನಾಟಕ ಸಂಘದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಯು.ಎ.ಇ. ತುಳು ಕೂಟ, ಎಂ.ಎನ್.ಸಿ. ಬಿಸ್ನೆಸ್ಸ್ ಕ್ಲಬ್ ದುಬಾಯಿ, ಇಂಡಿಯಾ ಕ್ಲಬ್, ದುಬಾಯಿ, ನಮ ತುಳುವೆರ್, ಯು.ಎ.ಇ. ಗಾಣಿಗ ಸಮಾಜ ಮುಂಬೈ, ಸೋಮಕ್ಷತ್ರೀಯ ಸಂಘ ಬಾರಕೂರು, ಬಾರಕೂರು ಶ್ರೀ ವೇಣು ಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಮುಂತಾದ ಸಂಘಟನೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಗಾಣಿಗ ಸಮಾಜ ಯು.ಎ.ಇ. ಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ಪೋಷಕರಾಗಿ ಸೇವೆ ಸಲ್ಲಿಸುತಿದ್ದಾರೆ.
2015-16ನೇ ಸಾಲಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆ
ಯು.ಎ.ಇ. ಯ ಪ್ರತಿಷ್ಠಿತ ಕರ್ನಾಟಕ ಸಂಘಗಳಲ್ಲಿ ಒಂದಾಗಿರುವ ಕರ್ನಾಟಕ ಸಂಘ ಶಾರ್ಜಾ ದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಜವಬ್ಧಾರಿಯನ್ನು ವಹಿಸಿಕೊಂಡಿರುವ ಶ್ರೀ ಸತೀಶ್ ವೆಂಕಟರಮಣರವರು ತಮ್ಮ ಸಾರಥ್ಯದಲ್ಲಿ 2015 ಜುಲೈ ತಿಂಗಳಿನಲ್ಲಿ ದುಬಾಯಿಯಲ್ಲಿ ರಕ್ತದಾನ ಶಿಬಿರವನ್ನು ಅಯೋಜಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.
2015 ನವೆಂಬರ್ ನಲ್ಲಿ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಶಾರ್ಜದಲ್ಲಿ ಆಯೋಜನೆ
ಸತೀಶ್ ವೆಂಕಟರಮಣ ತಮ್ಮ ಕನಸಿನ ಕಲ್ಪನೆಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ತಮ್ಮ ಕಾರ್ಯಾಕಾರಿ ಸಮಿತಿಯ ಪೂರ್ಣ ಬೆಂಬಲದೊಂದಿಗೆ ಹೃದಯವಾಹಿನಿ ಮಂಗಳೂರು ಶ್ರೀ ಕೆ. ಪಿ, ಮಂಜುನಾಥ್ ಸಾಗರ್ ರವರ ಸಹಯೋಗದೊಂದಿಗೆ ಅದ್ದೂರಿಯಾಗಿ ನಡೆಸಲು ಪಣ ತೊಟ್ಟಿದ್ದಾರೆ. ಸಮ್ಮೇಳನ ಪೂರ್ಣ ಯಶಸ್ವಿಯಾಗಲು ಹಲವಾರು ಕಾರ್ಯಯೋಜನೆಗಳನ್ನು ಹಾಕಿಕೊಂಡು ಮಾರ್ಗದರ್ಶನ ನೀಡುವುದರ ಮೂಲಕ ಅರಬ್ ನಾಡಿನಲ್ಲಿ ಕನ್ನಡದ ಬಾವುಟವನ್ನು ಬಾನೆತ್ತರದಲ್ಲಿ ರಾರಾಜಿಸುವಂತೆ ಮಾಡುವ ಸಂಕಲ್ಪ ಉತ್ಸಾಹಿ ನಾಯಕನದ್ದಾಗಿದೆ.
ದುಬಾಯಿ ಗೌ| ದೊರೆ ಶೇಖ್ ಮಹ್ಮದ್ ರವರಿಂದ 500 ವಿಶ್ವ ಮಟ್ಟದ ಮುಖ್ಯಸ್ಥರ ವಿಶೇಷ ಸಭೆಗೆ ಆಮಂತ್ರಣ ಪಡೆದ ಸತೀಶ್ ವೆಂಕಟರಮಣ
ಪವಿತ್ರ ರಂಜಾನ್ ಮಾಸಾಚರಣೆಯ ಶುಭ ಸಂದರ್ಭದಲ್ಲಿ ಅರಬ್ ಸಮ್ಯುಕ್ತ ಸಂಸ್ಥಾನದಲ್ಲಿರುವ ವಿಶ್ವಮಟ್ಟದ 500 ವಾಣಿಜ್ಯೊದ್ಯಮಿಗಳನ್ನು ಆತ್ಮೀಯವಾಗಿ ಅಹ್ವಾನಿಸಿ, ಯು.ಎ.ಇ. ಉಪಾಧ್ಯಕ್ಷರು, ಪ್ರಧಾನಮಂತ್ರಿಗಳು, ದುಬಾಯಿ ಆಡಳಿತ ದೊರೆ ಗೌ| ಶೇಖ್ ಮಹ್ಮದ್ ಬಿನ್ ರಾಶೀದ್ ಅಲ್ ಮಕ್ತೂಮ್ ವಿಶೇಷ ಸಭೆ ಮತ್ತು ಇಪ್ತಾರ್ ಕೂಟವನ್ನು 2015 ಜುಲೈ 15ರಂದು ಆಯೋಜಿಸಿದ್ದರು. ಈ ವಿಶೇಷ ಸಭೆಗೆ ಸತೀಶ್ ವೆಂಕಟರಮಣರವರಿಗೆ ಅಹ್ವಾನ ನೀಡಿ ಬರಮಾಡಿಕೊಂಡಿದ್ದು, ಕನ್ನಡ ಉಧ್ಯಮಿಗೆ ಸಂದ
ಅತ್ಯಂತ ಗೌರವದ ಅಹ್ವಾನವಾಗಿತ್ತು.
ಸತೀಶ್ ವೆಂಕಟರಮಣರವರ ಸಾಧನೆಗೆ ಸಂಘ ಸಂಸ್ಥೆಗಳಲ್ಲಿ ಪಡೆದ ಸನ್ಮಾನ ಗೌರವ…
ಸೋಮಕ್ಷತ್ರೀಯ ಸಂಘ ಬಾರಕೂರು ಸನ್ಮಾನ – 2006, ಮುಂಬೈ ಗಾಣಿಗ ಸಂಘ ಸನ್ಮಾನ- 2007, ಕರ್ನಾಟಕ ಸಂಘ ಅಬುಧಾಬಿ, ಬಿಲ್ಲವ ಬಳಗ ದುಬಾಯಿ, ಬಿಲ್ಲವಾಸ್ ದುಬಾಯಿ ಮತ್ತು ನಾರ್ಥ್ರನ್ ಎಮಿರೇಟ್ಸ್, ಬಿಲ್ಲವಾಸ್ ಅಬುಧಾಬಿ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿ ಗೌರವಿಸಲ್ಪಟ್ಟಿದ್ದಾರೆ.
ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ- 2011
2011ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಯನ್ನು ಏಪ್ರಿಲ್ 2 ನೆ ತಾರಿಕಿನಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ವಿ.ಎಸ್. ಆಚಾರ್ಯ ರವರು ಪ್ರಧಾನಿಸಿದರು. ಅನಿವಾಸಿ ಕನ್ನಡಿಗನಿಗೆ ಸಂದ ವಿಶೇಷ ಗೌರವವಾಗಿತ್ತು.
ಧ್ವನಿ ಪ್ರತಿಷ್ಠಾನ ಯು.ಎ.ಇ. ಆಶ್ರಯದಲ್ಲಿ 2011 ರಲ್ಲಿ ನಡೆದ ಅಂತರಾಷ್ಟ್ರೀಯ ಕನ್ನಡ ಚುಟುಕು ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಿರಿಯ ಚುಟುಕುಕವಿ ದುಂಡಿರಾಜ್ ಮತ್ತು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಉದ್ಯಮ ಕ್ಷೇತ್ರದ ಸಾಧನೆಗಾಗಿ ಸತೀಶ್ ವೆಂಕಟರಮಣರವರನ್ನು ಸನ್ಮಾನಿಸಿ ಗೌರವಿಸಲಾಯಿತು.
“ಕುವೆಂಪು ಅಂತರಾಷ್ಟ್ರೀಯ ಮಾನವ ಪ್ರಶಸ್ತಿ ಪುರಸ್ಕಾರ-2012”
2012 ರಲ್ಲಿ ಅಬುದಾಭಿ ಕರ್ನಾಟಕ ಸಂಘ ಮತ್ತು ಕುವೆಂಪು ಕಲಾನಿಕೇತನ (ರಿ) ಬೆಂಗಳೂರು, ಸಂಯುಕ್ತ ಆಶ್ರಯದಲ್ಲಿ ನಡೆದ ಕುವೆಂಪು ಕಲಾ ಉತ್ಸವ ಮತ್ತು ೨ನೇ ವಿಶ್ವ ಕನ್ನಡ ಸಮ್ಮೇಳನ ಅಬುಧಾಬಿ, ಶೇಖ್ ಜಾಯಿದ್ ಸಭಾಂಗಣದಲ್ಲಿ ಪದ್ಮಶ್ರೀ ಪುರಸ್ಕೃತ ಡಾ| ಬಿ. ಆರ್. ಶೆಟ್ಟಿಯವರು ಮತ್ತು ಹಲವಾರು ಗಣ್ಯರ ಸಮ್ಮುಖದಲ್ಲಿ ” ಕುವೆಂಪು ಅಂತರಾಷ್ಟ್ರೀಯ ಮಾನವ ಪ್ರಶಸ್ತಿ” ಯನ್ನು ಸತೀಶ್ ವೆಂಕಟರಮಣರವರ ಸಾಧನೆಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
“ಕುವೆಂಪು ವಿಶ್ವ ಮಾನವ ಸಮಾಜ ಸೇವಾ ರತ್ನ ಪ್ರಶಸ್ತಿ – 2014”
2014 ರಲ್ಲಿ ಏಪ್ರಿಲ್ 14ನೇ ತಾರೀಕಿನಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಡಿ. ಸದಾನಂದ ಗೌಡ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸತೀಶ್ ವೆಂಕಟರಮಣರವರಿಗೆ “ಕುವೆಂಪು ವಿಶ್ವ ಮಾನವ ಸಮಾಜ ಸೇವಾ ರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವಿಶ್ವ ಮಾನವ ಪ್ರಶಸ್ತಿ – 2015
ಕೆನಡಾ ಟೊರೊಂಟೊದಲ್ಲಿ ಪಾರ್ಕ್ ಇನ್ ರಾಡಿಸ್ಸನ್ ಗ್ರಾಂಡ್ ವಿಕ್ಟೋರಿಯನ್ ಸಭಾಂಗಣದಲ್ಲಿ ನಡೆದ 11ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜೂನ್ 27, 2015 ರಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಆಂಜನೆಯ ಮತ್ತು ಹೃದಯವಾಹಿನಿ ಮಂಗಳೂರು ಶ್ರೀ ಕೆ. ಪಿ. ಮಂಜುನಾಥ್ ಸಾಗರ್ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಅರಬ್ ದೇಶವನ್ನು ಪ್ರತಿನಿಧಿಸಿದ್ದ ಶ್ರೀ ಸತೀಶ್ ವೆಂಕಟರಮಣರವರಿಗೆ “ವಿಶ್ವ ಮಾನವ ಪ್ರಶಸ್ತಿ -2015” ನೀಡಿ ಗೌರವಿಸಲಾಯಿತು.
ಅಬುಧಾಬಿ ಲಕ್ಕಿ ಕಾರ್ ಡ್ರಾ ದಲ್ಲಿ ಎರಡು ಬಾರಿ ದುಬಾರಿ ಕಾರ್ ಬಹುಮಾನ ಪಡೆದು, ಅಬುಧಾಬಿ ಡ್ಯೂಟಿ ಫ್ರೀ ಯಲ್ಲಿ ಒಂದು ಲಕ್ಷ ದಿರಾಂಸ್ ಬುಮಾನ ಪಡೆದಿರುವ ಅದೃಷ್ಠಶಾಲಿ ಕನ್ನಡಿಗ ಉದ್ಯಮಿ ಶ್ರೀ ಸತೀಶ್ ವೆಂಕಟರಮಣ ಯು.ಎ.ಇ.ಯಲ್ಲಿ ಮತ್ತು ಭಾರತದಲ್ಲಿ ನಡೆಯುವ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಮುಖ ಪ್ರಾಯೋಜಕರಾಗಿ ಬೆಂಬಲ ಪ್ರೋತ್ಸಾಹ ನೀಡುವುದರ ಮೂಲಕ ತಾಯಿನಾಡಿನ ಭಾಷೆ, ಕಲೆ, ಸಂಸ್ಕೃತಿಯನ್ನು ಹಸಿರಾಗಿ ಉಳಿಸುವಲ್ಲಿ ಕೈಜೋಡಿಸಿದ್ದಾರೆ.
ತಮ್ಮ ಬಾಳಾ ಸಂಗಾತಿ ಉತ್ಸಾಹದ ಚಿಲುಮೆ ಶ್ರೀಮತಿ ಮಮ್ತಾ ಸತೀಶ್ ರವರು ಬಿ.ಎಸ್ಸಿ, ಮತ್ತು ಮನಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆದಿದ್ದು ಸತೀಶ್ ರವರ ಉದ್ಯಮದ ಯಶಸ್ಸಿನಲ್ಲಿ ಮಾರ್ಗದರ್ಶಕಿಯಾಗಿ ಸ್ಪೂರ್ತಿಯಾಗಿದ್ದಾರೆ. ಪುತ್ರಿಯರಾದ ಸಾನ್ಯ, ತಾನ್ಯ, ಮಾನ್ಯ ಸುಖಿ ಸಂಸಾರದ ಭಾಗ್ಯಲಕ್ಷ್ಮೀಯರು.
ಸದಾ ನಗುಮೊಗದ ಅಕರ್ಷಕ ವ್ಯಕ್ತಿತ್ವದ ಸಾಹಸಿ ಉದ್ಯಮಿ, ಸಮಾಜಮುಖಿ ನಾಯಕತ್ವದ ಶ್ರೀಯುತ ಸತೀಶ್ ವೆಂಕಟರಮಣರವರಿಗೆ ಸಮಸ್ಥ ಕನ್ನಡಿಗರು ಭಾರತೀಯರ ಪರವಾಗಿ ಹಾರ್ದಿಕ ಅಭಿನಂದನೆಗಳು.
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ