ಸೌದಿ ಅರೇಬಿಯಾ: ಇಂಡಿಯನ್ ಸೋಶಿಯಲ್ ಫಾರಂ ಬುರೈದ ಕರ್ನಾಟಕ, ಇದರ ವತಿಯಿಂದ ಕಾರ್ಯಕರ್ತರ ಸಭೆ ಮತ್ತು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ತಾರೀಕು 8/10/2015 ರಂದು ಐ.ಎಸ್.ಎಫ್ ಬುರೈದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಬ್ಬಾಸ್ ಅಲಿ ಪುತ್ತೂರು ರವರ ಅಧ್ಯಕ್ಷತೆಯಲ್ಲಿ ಬುರೈದಾದ ಹೊರವಲಯದ ಅಲ್- ಅದಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಐ.ಎಸ್.ಎಫ್ ರಿಯಾದ್ ಜಿಲ್ಲಾ ಸಮಿತಿ ಸದಸ್ಯರಾದ ಕಬೀರ್ ಗೂಡಿನಬಳಿ, ಪ್ರಸಕ್ತ ಭಾರತದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ, ಭಾರತ ದೇಶದಲ್ಲಿ ರಾಜಕೀಯ ಎನ್ನುವುದು ವ್ಯವಹಾರವಾಗಿದ್ದು, ರಾಜಕಾರಣಿಗಳು ತಮ್ಮ ರಾಜವಂಶವನ್ನು ಸ್ಥಾಪಿಸಲು ಅಧಿಕಾರ ನಡೆಸುತ್ತಾರೆಯೇ ಹೊರತು, ಜನಸೇವೆಯ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದರು. ಅಭಿವೃದ್ಧಿಯ ಮಂತ್ರ ಪಠಿಸುತ್ತ ಅಧಿಕಾರಕ್ಕೇರಿದ ಮೋದಿ ಸರ್ಕಾರವು ನಿರಂತರವಾಗಿ ಫ್ಯಾಶಿಸ್ಟ್ ಸಿದ್ಧಾಂತದ ಕಡೆಗೆ ವಾಲುತ್ತಿದ್ದು ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆಯೆಂದರು.
ಅಲ್ಲದೆ ದೇಶಾದ್ಯಂತ ದಿನೇ ದಿನೇ ದಲಿತರ ಹಾಗೂ ಅಲ್ಪಸಂಖ್ಯಾತರ ಹತ್ಯೆ, ಹಲ್ಲೆಗಳು ಅಧಿಕವಾಗುತ್ತಿದ್ದು ಜನ ಸಾಮಾನ್ಯರಿಗೆ ರಕ್ಷಣೆಯನ್ನು ಒದಗಿಸಲು ಕೂಡಾ ಮೋದಿ ಸರ್ಕಾರ ವಿಫಲವಾಗಿದೆ. ಜನ ಸಾಮಾನ್ಯರಿಂದ ಆಯ್ಕೆಗೊಂಡ ಜನ ಪ್ರತಿನಿಧಿಗಳು ಕೂಡ ಕೋಮು ವೈಷಮ್ಯಪೂರಿತ ಹೇಳಿಕೆಯನ್ನು ನೀಡುತ್ತಿದ್ದು, ಜನತೆ ಭಯದ ವಾತಾವರಣದಲ್ಲಿ ಜೀವಿಸುವಂತಹ ಪರಿಸ್ಥಿತಿ ಎದುರಾಗಿದೆ. ದೇಶವು ಅರಾಜಕತೆಯತ್ತ ಸಾಗುತ್ತಿದ್ದು, ಭ್ರಷ್ಟಾಚಾರ, ಶಿಕ್ಷಣದ ಕೇಸರೀಕರಣ, ರೈತರ ಆತ್ಮಹತ್ಯೆ, ಬೆಲೆಯೇರಿಕೆ ಮುಂತಾದವುಗಳು ವ್ಯಾಪಕವಾಗಿದೆ. ದೇಶದ ಪ್ರಧಾನಿ ಮೋದಿಯ ತಂಡವು ದೇಶವನ್ನು ಹಿಂದುತ್ವ ಅಜೆಂಡಾದಂತೆ ಕೇಸರೀಕರಣಗೊಳಿಸಲು ಕಾರ್ಯತಂತ್ರವನ್ನು ರೂಪಿಸುತ್ತಿದೆ.
ಇವೆಲ್ಲದಕ್ಕೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಎಸ್.ಡಿ.ಪಿ.ಐ ದೇಶದಲ್ಲಿ ಬೆಳವಣಿಗೆಯಾಗುತಿದ್ದು, ದೇಶದಲ್ಲಿ ನ್ಯಾಯವನ್ನು ನೆಲೆಗೊಳಿಸಲು, ದೇಶದ ನೈಜ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುವಂತಹ ಜನ ಸಮೂಹವನ್ನು ಎಸ್.ಡಿ.ಪಿ.ಐ ದೇಶದ ಮೂಲೆ ಮೂಲೆಗಳಲ್ಲಿ ಹುಟ್ಟು ಹಾಕಿದೆ. ಎಸ್.ಡಿ.ಪಿ.ಐ ಯು ಸಮುದ್ರದ ಅಲೆಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಪಕ್ಷವಾಗಿದ್ದು, ಕಲುಷಿತ ರಾಜಕೀಯದ ಸಂಪೂರ್ಣ ಬದಲಾವಣೆಗಾಗಿ ಪಣತೊಟ್ಟಿದೆ ಎಂದು ಜನರ ಮನ ತಲುಪುವ ರೀತಿಯಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಐ.ಎಸ್.ಎಫ್ ಬುರೈದ ಜಿಲ್ಲಾ ಸಮಿತಿ ಸದಸ್ಯರಾದ ಶರೀಫ್ ಕುಕ್ಕುವಳ್ಳಿಯವರು ಅಯಾಝ್ ರವರಿಗೆ ಐ.ಎಸ್.ಎಫ್ ನ ಗುರುತಿನ ಚೀಟಿ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಐ.ಎಸ್ ಎಫ್ ರಿಯಾದ್ ಉಡುಪಿ ಜಿಲ್ಲಾಧ್ಯಕ್ಷ ಯಾಕೂಬ್ ಫೈರೋಝ್ ಹಾಗೂ ಮಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜಿಪ ಹಾಗೂ ಐ.ಎಸ್.ಎಫ್ ಬುರೈದ ಜಿಲ್ಲಾ ಸಮಿತಿ ಸದಸ್ಯರಾದ ಅಯಾಝ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಕಾರ್ಯಕರ್ತರಿಗೆ ವಾಲಿಬಾಲ್ ಪಂದ್ಯಾವಳಿ ನಡೆಸಲಾಯಿತು. ಮಜ್ಮಾ ಫ್ರೆಂಡ್ಸ್ ಪ್ರಥಮ ಬಹುಮಾನ ಹಾಗು ಜೈ ಕರ್ನಾಟಕ ಕಲಾಯಿ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಬಹುಮಾನಗಳನ್ನು ಅಶ್ರಫ್ ಬದ್ರಿಯಾ ನಗರ ಹಾಗೂ ಆರೀಫ್ ಉದ್ದಬೆಟ್ಟುರವರು ನೀಡಿ ಗೌರವಿಸಿದರು.
ಐ.ಎಸ್.ಎಫ್ ಬುರೈದ ಜಿಲ್ಲಾ ಸಮಿತಿ ಸದಸ್ಯರಾದ ಜಮಾಲ್ ಅಡ್ಡೂರು ಕಾರ್ಯಕ್ರಮವನ್ನು ಸ್ವಾಗತಿಸಿ, ಆವೇಶ್ ಬೆಂಗಳೂರು ಧನ್ಯವಾದಗೈದು, ಝಕರಿಯ ಕೊರಿಂಗಿಲ ಈ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ಮೊಹಿದ್ದೀನ್ ಪಡುಬಿದ್ರಿ ಶರೀಫ್ ಚಿಕ್ಕಮಗಳೂರು ಉಪಸ್ಥಿತರಿದ್ದರು. ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.