ಕಾಪು, ಆ. 22 : ಕಾಪು ಅಲ್-ರಿಹಾ ವಿವಿದೋದ್ದೇಶ ಸಹಕಾರಿ ಸಂಘ (ನಿ.) ಇದರ ನಾಲ್ಕನೇ ಶಾಖೆಯಾಗಿರುವ ನೂತನ ಶಿರ್ವ ಶಾಖೆಯನ್ನು ರಾಜ್ಯದ ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಆ. 22ರಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಉಡುಪಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತವರೂರಾಗಿದ್ದು, ಜಿಲ್ಲೆಯಲ್ಲಿ ಶಿರ್ವ ಪರಿಸರವು ಬ್ಯಾಂಕಿಂಗ್ಗೆ ಪೂರಕವಾದ ಪ್ರದೇಶವಾಗಿದೆ. ಇಲ್ಲಿನ ಎನ್ಆರ್ಐ ನಿವಾಸಿಗಳಿಗಾಗಿ ಎಷ್ಟು ಆರ್ಥಿಕ ಸಂಸ್ಥೆಗಳಿದ್ದರೂ ಸಾಲದು ಎಂಬಂತಿದ್ದು, ಕಾಪು ಅಲ್ ರಿಹಾ ವಿವಿದೋದ್ದೇಶ ಸಹಕಾರಿ ಸಂಘವು ಶಿರ್ವದಲ್ಲಿ ತನ್ನ ನಾಲ್ಕನೇ ಶಾಖೆಯನ್ನು ತೆರೆಯುವ ಮೂಲಕ ಮತ್ತಷ್ಟು ಆರ್ಥಿಕ ಬ್ಯಾಂಕ್ ಬೇಕೆಂಬ ಗ್ರಾಹಕರ ಹಂಬಲವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದೆ ಎಂದರು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಉಡುಪಿ ಸಹಕಾರಿ ಯೂನಿಯನ್ನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮತ್ತು ಬೆಳಪು ಸಿ.ಎ. ಬ್ಯಾಂಕ್ನ ಅಧ್ಯಕ್ಷ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ ಶುಭಾಶಂಸನೆಗೈದರು.
ಕಾಪು ಅಲ್ ರಿಹಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎ. ಕೆ. ಸುಲೈಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್, ತಾ. ಪಂ. ಸದಸ್ಯ ಕೃಷ್ಣ ಪೂಜಾರಿ, ಶಿರ್ವ ಗ್ರಾ. ಪಂ. ಅಧ್ಯಕ್ಷೆ ವಾರಿಜಾ ಪೂಜಾರಿ, ಉದ್ಯಮಿ ಹಸನ್ ಇಬ್ರಾಹಿಂ ಅತಿಥಿಗಳಾಗಿದ್ದರು.
ಸಂಘದ ನಿರ್ದೇಶಕರಾದ ಎಚ್. ಅಬ್ದುಲ್ಲಾ, ಇಬ್ರಾಹಿಂ ಮನ್ಹರ್, ಅಮೀರ್ ಆದಂ, ಎಂ. ಇಸ್ಮಾಯಿಲ್, ನಾಸಿರ್ ಶೇಕ್, ಮಯ್ಯದ್ದಿ ಹೆಜಮಾಡಿ, ಸಬಿಯಾ ಖಾತೂನ್, ಮಹಮ್ಮದ್ ಕೀರ್ ಮೂಳೂರು ಉಪಸ್ಥಿತರಿದ್ದರು.
ಕಾಪು ಅಲ್ ರಿಹಾ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಶರೀಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಗೀತಾ ಎ. ಪಿ. ವಂದಿಸಿದರು.