ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಎಸ್ಬಿ ಸಮಾಜದ ಮೂವರು ಯತಿಗಳಾದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿಯವರು ಅಪರೂಪವೆಂಬಂತೆ ಜಂಟಿಯಾಗಿ ಮಂಗಳವಾರ ಸಂಜೆ ಗಂಗೊಳ್ಳಿ ಪುರಪ್ರವೇಶ ಮಾಡಿದರು.
ವೇದಘೋಷ, ವಿವಿಧ ವಾದ್ಯ ನಾದಗಳೊಂದಿಗೆ ಉಭಯ ಶ್ರೀಗಳಿಗೆ ಗಂಗೊಳ್ಳಿಯ ಎಸ್.ವಿ.ಪದವಿಪೂರ್ವ ಕಾಲೇಜು ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ಪುರಮೆರವಣಿಗೆ ನಡೆಸಲಾಯಿತು. ನೆರೆದಿದ್ದ ಸಹಸ್ರಾರು ಮಂದಿ ಭಜಕರು ಮೂವರು ಯತಿವರ್ಯರನ್ನು ಒಟ್ಟಿಗೆ ನೋಡಿ ಪುಳಕಿತರಾದರು. ಮೂವರು ಪೀಠಾಧಿಪತಿಗಳು ಸಮಾಗಮದಿಂದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪುರ ಮೆರವಣಿಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಂತೆ ಮಳೆಯ ಸಿಂಚನ ಪುಷ್ಪವೃಷ್ಟಿ ನಡೆಯಿತು.