ಕುಂದಾಪುರ: ಎಂಟು ವರ್ಷದ ಬಾಲಕಿಯರಿಬ್ಬರ ಮೇಲೆ ಮೂವತ್ತೆಂಟು ವರ್ಷದ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾದ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಕೆಂಚನೂರು ಗ್ರಾಮದ ಕದ್ರಿಗುಡ್ಡೆ ನಿವಾಸಿ ತಿಮ್ಮ(38) ಎಂಬಾತನೇ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಬಂಧನಕ್ಕೊಳಗಾದ ಆರೋಪಿ.
ಘಟನೆಯ ವಿವರ: ಕೆಂಚನೂರು ಗ್ರಾಮದ ಪಡೂರು ಪರಿಶಿಷ್ಟ ಪಂಗಡಕ್ಕೆ ಸೇರಿದ ಎಂಟು ವರ್ಷ ಪ್ರಾಯದ ಬಾಲಕಿ ಕೊಲ್ಲೂರಿನ ಶಾಲೆಯೊಂದರಲ್ಲಿ ಮೂರನೇ ತರಗತಿ ಪಾಸಾಗಿ ನಾಲ್ಕನೇ ತರಗತಿಗೆ ಹೋಗುವವಳು ರಜೆಯ ಕಾರಣಕ್ಕೆ ಮನೆಯಲ್ಲಿದ್ದಳು. ಆಕೆಯ ತಂದೆ ಆಲೂರಿನಲ್ಲಿ ಸಂಬಂಧಿಕರೊಬ್ಬರು ತೀರಿಕೊಂಡಿದ್ದು ಅಲ್ಲಿಗೆ ಹೋಗಿದ್ದರು. ತಾಯಿ ಪಕ್ಕದ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಇದೇ ಸಂದರ್ಭ ಈ ಬಾಲಕಿಯ ಪಕ್ಕದ ಮನೆಯಲ್ಲಿಯೂ ಎಂಟು ವರ್ಷ ಪ್ರಾಯದ ಬಾಲಕಿ ಸ್ಥಳೀಯ ಗುಡ್ರಿ ಎಂಬಲ್ಲಿಯ ಶಾಲೆಯಲ್ಲಿ ನಾಲ್ಕನೇ ತರಗತಿಗೆ ಪಾಸಾಗಿದ್ದು ರಜೆಯ ಕಾರಣಕ್ಕೆ ಆಕೆಯ ಮನೆಯವರು ಈ ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಗುರುವಾರ ಸಂಜೆ ಸುಮಾರು ಮೂರೂವರೆಯಿಂದ ನಾಲ್ಕು ಗಂಟೆಯ ಸುಮಾರಿಗೆ ಮನೆಯೆದುರು ಮಕ್ಕಳು ಆಟವಾಡುತ್ತಿದ್ದ ಸಮಯ ಕದ್ರಿಗುಡ್ಡೆ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತಿಮ್ಮ ಎಂಬಾತ ಬಂದಿದ್ದು, ಸಿನೆಮಾ ತೋರಿಸುತ್ತೇನೆ ಬನ್ನಿ ಎಂದು ನಂಬಿಸಿ ಮಕ್ಕಳನ್ನು ಮನೆಯ ಒಳಗೆ ಕರೆದಿದ್ದಾನೆ. ನಂತರ ಮೊಬೈಲ್ನಲ್ಲಿ ಅಶ್ಲೀಲ ಸಿನೆಮಾ ತೋರಿಸಿ ಇದೇ ರೀತಿ ಮಾಡುವ ಎಂದು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ಮಕ್ಕಳಿಗೆ ಅತೀವ ನೋವುಂಟಾಗಿದ್ದು, ತಾಯಿ ಕೆಲಸ ಬಿಟ್ಟು ಮನೆಗೆ ಬಂದಾಗ ಮಕ್ಕಳು ನಡೆದ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣ ತಾಯಿ ಸ್ಥಳೀಯರಿಗೆ ಸುದ್ಧಿ ಮುಟ್ಟಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರೂ ಮಕ್ಕಳನ್ನೂ ಕುಂದಾಪುರದ ಸರ್ಕಾರೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಆರೋಪಿ ತಿಮ್ಮನನ್ನು ಕುಂದಾಪುರ ಪೊಲೀಸರು ಆತನ ಮನೆಯಲ್ಲಿಯೇ ಬಂಧಿಸಿದ್ದು, ಆತ ಬಳಸಿದ್ದ ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.