ಕುಂದಾಪುರ: ಮೊಗವೀರ ಯುವಸಂಘಟನೆಯ ದಶಮಾನೋತ್ಸವದ ಅಂಗವಾಗಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸಿನ ವತಿಯಿಂದ ಟ್ರಸ್ಟಿನ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ಅವರು ತಾಲೂಕಿನ ಬಳ್ಖೂರು ಗ್ರಾಮದ ಬಡಾಬೈಲು ನಿವಾಸಿಗಳಾದ ಭಾಸ್ಕರ ಹಾಗೂ ಬಾಬಿ ದಂಪತಿಗಳಿಗೆ ಕೊಡಮಾಡಿದ ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ಮನೆಯಾದ ‘ಬೆಳಕು’ ಇದರ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.
ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ನಾಡೋಜಾ ಡಾ. ಜಿ. ಶಂಕರ್ ಅವರು ಸಾಂಕೇತಿಕ ಕಿಲೀಕೈ ಹಸ್ತಾಂತರಿಸುವ ಮೂಲಕ ಭಾಸ್ಕರ ದಂಪತಿ ಹಾಗೂ ಮಕ್ಕಳಿಗೆ ಮನೆಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಕಳೆದ ಮೂರು ತಿಂಗಳ ಹಿಂದೆ ಅನಿರೀಕ್ಷಿತವಾಗಿ ಈಪ್ರದೇಶಕ್ಕೆ ಬಂದಿದ್ದ ಡಾ. ಜಿ. ಶಂಕರ್ ಅವರು ಈ ಕುಟುಂಬದ ಗುಡಿಸಲು ಕಂದು ಸ್ವತಃ ತಾನೂ ಮನೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದರು. ಅದರಂತೆಯೇ ಮೊದಲಿದ್ದ ಗುಡಿಸಲೀಗ ಸುಂದರ ಮನೆಯಾಗಿ ಮಾರ್ಪಾಡಾಗಿದೆ.
ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆ ಹಾಗೂ ಕುಂದಾಪುರ ಘಟಕದ ಪದಾಧಿಕಾರಿಗಳು ಇವರೊಂದಿಗೆ ಕೈ ಜೋಡಿಸಿದ್ದರು. ಭಾಸ್ಕರ್ ಮೊಗವೀರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಪತ್ನಿ ಬಾಬಿ ಮಾನಸಿಕವಾಗಿ ಬಳಲಿದ್ದಾರೆ. ಇಬ್ಬರು ಕೆಲಸಕ್ಕೆ ಹೋಗದ ಕಾರಣ ಮನೆಯ ಜವಬ್ದಾರಿ ನಿರ್ವಹಿಸಿಸಲು ಶಿಕ್ಷಣ ತೊರೆದ ಮಗಳು ಜ್ಯೋತಿ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ತಂದೆ ತಾಯಿ, ಸಹೋದರ ಗುರು ಚಕ್ರವರ್ತಿ, ಸಹೋದರಿ ಪಂಚಮಿಯನು ಸಲಹುತ್ತಿದ್ದಾರೆ. ಹತ್ತನೆ ತರಗತಿ ಓದುತ್ತಿರುವ ಪಂಚಮಿ ಹಾಗೂ 7 ನೇ ತರಗತಿ ಓದುತ್ತಿರುವ ಗುರು ಚಕ್ರವರ್ತಿಯ ವಿದ್ಯಾಭ್ಯಾಸದ ಹೊಣೆಯೂ ಸದ್ಯ ಜ್ಯೋತಿ ಮೇಲಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆ(ರಿ.) ಇದರ ಅಧ್ಯಕ್ಷ ಸದಾನಂದ ಬಳ್ಕೂರು, ಕುಂದಾಪುರ ಘಟಕಾಧ್ಯಕ್ಷ ದಿವಾಕರ ಮೆಂಡನ್, ಕೋಟೇಶ್ವರ ಘಟಕಾಧ್ಯಕ್ಷ ಅಶೋಕ ತೆಕ್ಕಟ್ಟೆ, ಜಿ.ಪಂ. ಉಪಾಧ್ಯಕ್ಷ ಪ್ರಕಾಶ ಮೆಂಡನ್, ಪುರಸಭಾ ಸದಸ್ಯ ಉದಯ ಮೆಂಡನ್, ಸುಧಾಕರ ಕಾಂಚನ್ ಮೊದಲಾದವರಿದ್ದರು.
ಮೊಗವೀರ ಯುವಸಂಘಟನೆಯ ದಶಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ ಬೆಳಕು ಯೋಜನೆಯಡಿಯಲ್ಲಿ ತೀರಾ ಬಡತನದಲ್ಲಿದ್ದ ಕುಟುಂಬಕ್ಕಾಗಿ ಈ ಮನೆಯನ್ನು ನಿರ್ಮಿಸಿದ್ದೇವೆ. ಈ ಮನೆಯಿಂದಲೇ ಬೆಳಕು ಯೋಜನೆಗೆ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಇತರೇ ಘಟಕಗಳಲ್ಲಿಯೂ ಇರುವ ತೀರಾ ಬಡ ಕುಟುಂಬಗಳ ವಸತಿಗೆ ಕಾಯಕಲ್ಪ ನೀಡಲಾಗುತ್ತದೆ. ಎಪ್ರಿಲ್ ಕೊನೆ ವಾರದಲ್ಲಿ ನಡೆಯುವ ಸಾಮೂಹಿಕ ವಿವಾಹದೊಳಗೆ ಈ ಮನೆಮಗಳು ಜ್ಯೋತಿಯ ಮದುವೆಯ ನಿಶ್ಚಯ ಕಾರ್ಯವಾಗಬೇಕು.
– ನಾಡೋಜಾ ಡಾ. ಜಿ. ಶಂಕರ್