ಕುಂದಾಪುರ: ಗಂಗೊಳ್ಳಿಯಲ್ಲಿ ಇತ್ತೀಚಿಗೆ ನಡೆದ ಘಟನೆಗಳಿಂದ ಸರಕಾರ ಮತ್ತು ಪೊಲೀಸ್ ಇಲಾಖೆ ಜಾಗೃತಗೊಂಡು, ಯೋಜನಾಬದ್ಧವಾಗಿ ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಕ್ರಮಕೈಗೊಂಡಿದ್ದರೆ ಜ.21ರಂದು ನಡೆದ ಘಟನೆ ಪುನರಾವರ್ತನೆಯಾಗುತ್ತಿರಲಿಲ್ಲ. ಸರಕಾರ ಮತ್ತು ಪೊಲೀಸ್ ಇಲಾಖೆಯ ಬೇಜವಾಬ್ದಾರಿಯಿಂದ ಗಂಗೊಳ್ಳಿಯಲ್ಲಿ ಅಹಿತಕರ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಗಂಗೊಳ್ಳಿಯಲ್ಲಿ ದುಷ್ಕರ್ಮಿಗಳಿಂದ ಹಾನಿಗೊಳಗಾದ ಅಂಗಡಿಯನ್ನು ಹಾಗೂ ದುಷ್ಕರ್ಮಿಗಳ ಕೃತ್ಯದ ಸಿಸಿಟಿವಿ ಚಿತ್ರವನ್ನು ವೀಕ್ಷಿಸಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ಭಯೋತ್ಪಾದನೆಯನ್ನು ನಾಚಿಸುವಂತೆ ದುಷ್ಕರ್ಮಿಗಳು ಗಂಗೊಳ್ಳಿಯ ಮುಖ್ಯ ಬೀದಿಯಲ್ಲಿರುವ ಅಂಗಡಿ ಹಾಗೂ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಘಟನೆ ನಡೆದಿರುವುದು ಖಂಡನೀಯ. ಈ ಘಟನೆಗೆ ಕಾರಣರಾದ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಅವರನ್ನು ಬಂಧಿಸುವ ಕಾರ್ಯವನ್ನು ಪೊಲೀಸರು ನಡೆಸಬೇಕು. ಶಾಂತಿ ಸುವ್ಯವಸ್ಥೆ ಧಕ್ಕೆಯಾದಾಗ, ತೊಂದರೆಯಾದಾಗ, ಅನಾಹುತಗಳು ಸಂಭವಿಸಿದಾಗ ಸರಕಾರ ಮತ್ತು ಇಲಾಖೆಗೆ ನಾವು ಬೆಂಬಲ ಸಹಕಾರ ನೀಡಿದ್ದು, ಗಂಗೊಳ್ಳಿಯ ಬೆಂಕಿ ಪ್ರಕರಣದಲ್ಲೂ ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗಂಗೊಳ್ಳಿಯಲ್ಲಿ ಇಂತಹ ಅಹಿತಕರ ಘಟನೆಗಳು ಪುನರಾವರ್ತನೆಯಾಗದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಪೊಲೀಸರು ಅಮಾಯಕರನ್ನು ಬಂಧಿಸಿ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸುವ ಮಾಡುತ್ತಿರುವುದು ಸರಿಯಲ್ಲ. ನಿರಪರಾಧಿಗಳನ್ನು ಮೇಲೆ ಕೇಸು ದಾಖಲಿಸಿ ಅವರನ್ನು ಬಂಧಿಸುವ ಮೊದಲು ಗಂಗೊಳ್ಳಿಯ ಬೆಂಕಿ ಪ್ರಕರಣದ ಮೂಲ ಶೋಧಿಸಿ ಆರೋಪಿಗಳನ್ನು ಪತ್ತೆ ಹೆಚ್ಚುವ ಕಾರ್ಯವನ್ನು ಪೊಲೀಸರು ಮಾಡಬೇಕು. ಪೊಲೀಸರ ತನಿಖೆಗೆ ಸರಕಾರ ಸಂಪೂರ್ಣ ಸಹಕಾರ ನೀಡಬೇಕಿದ್ದು, ರಾಜಕೀಯ ಪ್ರೇರಿತವಾಗಿ ಆರೋಪಿಗಳಿಗೆ ರಕ್ಷಣೆ ನೀಡಬಾರದು. ಸರಕಾರ ಇಂತಹ ಚಟುವಟಿಕೆಗಳಿಗೆ ಆಸ್ಪದ ನೀಡಿದರೆ ಸದನ ಒಳಗೆ ಈ ವಿಷಯ ಪ್ರಸ್ತಾಪಿಸಿ ಸರಕಾರದ ವಿರುದ್ಧ ಹೋರಾಟ ರೂಪಿಸಲಾಗುತ್ತದೆ ಮತ್ತು ಸದನದ ಹೊರಗೂ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರವೀಂದ್ರ ಪಟೇಲ್, ಯುವಮೋರ್ಚಾ ಅಧ್ಯಕ್ಷ ದಿಲೀಪ ಖಾರ್ವಿ, ಮಂತಿ ಸುರೇಶ ಖಾರ್ವಿ, ಗ್ರಾಪಂ ಮಾಜಿ ಸದಸ್ಯ ರಾಘವೇಂದ್ರ ದೇವಾಡಿಗ, ಅಂಗಡಿಯ ಮಾಲೀಕ ಭಾಸ್ಕರ ವಿಠಲ ಶೆಣೈ, ಜಿ.ವಿಠಲ ಬಿ.ಶೆಣೈ ಮೊದಲಾದವರು ಉಪಸ್ಥಿತರಿದ್ದರು.