ಕುಂದಾಪುರ: ಗಂಗೊಳ್ಳಿಯ ವೆಂಕಟೇಶ್ವರ ಸ್ಟೋರ್ಸ್ ಎನ್ನುವ ಅಂಗಡಿ ಹಾಗೂ ಅಂಗಡಿಗೆ ತಾಗಿಕೊಂಡೇ ಇರುವ ಗೋದಾಮು ಹಾಗೂ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಹಾಗೂ ಇತರೇ ವಾಹನಗಳಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಗಂಗೊಳ್ಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಬೆಂಕಿ ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟವಾಗಿದೆ.
ಘಟನೆ ವಿವರ: ಮಂಗಳವಾರ ತಡರಾತ್ರಿ ಅಂದರೆ ಬುಧವಾರ ಮುಂಜಾನೆ ಸುಮಾರು 2 ಗಂಟೆಯ ಹೊತ್ತಿಗೆ ಗಂಗೊಳ್ಳಿ ಮುಖ್ಯರಸ್ತೆಯ ಸಮೀಪವೇ ಇರುವ ವೆಂಕಟೇಶ ಶೆಣೈ ಮಾಲೀಕತ್ವದ ವೆಂಕಟೇಶ್ವರ ಸ್ಟೋರ್ಸ್ ಅಂಗಡಿ, ಅಂಗಡಿಗೆ ಸಂಬಂಧಿಸಿದ ಗೋದಾಮು ಹಾಗೂ ಮನೆಯ ಮುಂಭಾಗ ಪಾರ್ಕ್ ಮಾಡಿದ್ದ ಚವರ್ಲೆಟ್ ಎಂಜಾಯ್ ಕಾರು, ರಿಟ್ಜ್ ಹಾಗೂ 407 ವಾಹನಕ್ಕೆ ದುಷ್ಕರ್ಮಿಗಳು ಇಂಧನ ಸುರಿದು ಬೆಂಕಿ ಹಚ್ಚಿದ್ದಾರೆ. ಅಂಗಡಿ ಮಾಲೀಕರು ಮನೆಯಲ್ಲಿ ಮಲಗಿದ್ದ ಈ ಸಂದರ್ಭ ಅಂಗಡಿಯ ಮುಂಭಾಗದಲ್ಲಿ ಶಬ್ಧವಾಗುತ್ತಿರುವುದನ್ನು ಕೇಳಿಸಿಕೊಂಡ ಅಂಗಡಿ ಮಾಲೀಕ ವೆಂಕಟೇಶ್ ಶೆಣೈ ಎಂಬುವರು ಹೊರಗಡೆ ಬರುತ್ತಿದ್ದಂತೆ, ದುಷ್ಕರ್ಮಿಗಳು ಬೆಂಕಿ ಹಚ್ಚಲು ಮುಂದಾಗಿದ್ದು ವೆಂಕಟೇಶ ಶೆಣೈ ಬೆಂಕಿ ಹಚ್ಚದಂತೆ ಕೂಗಾಡಿದರೂ ಕೂಡ ಲೆಕ್ಕಿಸದೇ ಬೆಂಕಿಯಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಕೆಲದೂರ ವೆಂಕಟೇಶ ದುಷ್ಕರ್ಮಿಗಳನ್ನು ಅಟ್ಟಿಸಿದರಾದರೂ ಕಾರಿಗೆ ಹತ್ತಿದ ಬೆಂಕಿಯ ಕೆನ್ನಾಲಗೆಯಿಂದ ಹಿಂದೆ ಸರಿದಿದ್ದಾರೆ. ಕೂಡಲೇ ಮನೆಯವರು ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತಾದರೂ ಬೆಂಕಿಯ ತೀವೃತೆ ಜಾಸ್ಥಿಯಿದ್ದ ಕಾರಣ ಅಂಗಡಿಯ ಮುಂಭಾಗ, ಗೋದಾಮಿನ ಮುಖಧ್ವಾರದ ಸಮೀಪದ ಕೆಲವು ವಸ್ತುಗಳು ಹಾಗೂ ಚವರ್ಲೆಟ್ ಕಾರು ಬೆಂಕಿಗೆ ಆಹುತಿಯಾಗಿದೆ.
ಸಿಸಿ ಟಿವಿಯಲ್ಲಿ ಕೃತ್ಯ ಸೆರೆ: ಬೆಂಕಿ ಪ್ರಕರಣವು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬುಧವಾರ ಮುಂಜಾನೆ 2.15ಕ್ಕೆ ಅಪರಿಚಿತ ಎರಡು ಮೂರು ಜನರ ತಂಡ ಕೃತ್ಯವೆಸಗಿ ಪರಾರಿಯಾಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರಲ್ಲಿ ಓರ್ವ ಮುಸುಕುಧಾರಿಯಾಗಿದ್ದು, ಪೆಟ್ರೋಲನ್ನು ಎಲ್ಲೆಡೆ ಸುರಿಯುವ ದೃಶ್ಯ ಸೆರೆಯಾಗಿದೆ. ಬಳೀಕ ಆತ ಎಲ್ಲೆಡೆ ಬೆಂಕಿ ಹಚ್ಚಿ ಮುಖ್ಯ ಗೇಟಿನಿಂದ ಪರಾರಿಯಾಗಿದ್ದಾನೆ. ಪೆಟ್ರೋಲ್ ವಾಸನೆಯಿಂದ ಎಚ್ಚೆತ್ತ ಅಂಗಡಿ ಮಾಲೀಕರಿಗೆ ಘಟನೆ ಬಗ್ಗೆ ತಿಳಿದುದರಿಂದ ಸಂಭವನೀಯ ಹೆಚ್ಚಿನ ಅನಾಹುತ ತಪ್ಪಿದೆಯೆನ್ನಲಾಗಿದೆ.
ಹಿಂದೂಪರ ಸಂಘಟನೆ ಆಕ್ರೋಷ, ರಸ್ತೆ ತಡೆ: ಘಟನೆಗೆ ಆಕ್ರೋಷಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಸ್ಥಳೀಯರು ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಘಟನಾ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ, ರಸ್ತೆ ತಡೆದರು ಬಳಿಕ ಅಲ್ಲಿನಿಂದ ಕಾಲ್ನಡಿಗೆಯಲ್ಲಿ ಸಾಗಿದ ಅವರು ಗಂಗೊಳ್ಳಿ ರಾಮಮಂದಿರದ ಬಳಿ ಜಮಾಯಿಸಿ ರಸ್ತೆಗೆ ಕಲ್ಲು ಅಡ್ಡವಿಟ್ಟು ವಾಹನಗಳನ್ನು ತಡೆದರು. ಬೆಳಿಗ್ಗೆ 9 ಗಂಟೆ ಬಳಿಕ ಯಾವುದೇ ಬಸ್ಸು ಸಂಚಾರವಿರಲಿಲ್ಲ, ತರುವಾಯ ಎಲ್ಲಾ ವಾಹನಗಳ ಸಂಚಾರಕ್ಕೂ ತಡೆಹೇರಲಾಗಿತ್ತು. ಇನ್ನು ಬುಧವಾರ ಬೆಳಿಗ್ಗೆನಿಂದ ಗಂಗೊಳ್ಳಿಯಲ್ಲಿ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಗಿದ್ದು ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಉಡುಪಿ ಎಸ್ಪಿ ಭೇಟಿ: ಗಂಗೊಳ್ಳಿಯಲ್ಲಿ ಈ ಘಟನೆಯಿಂದಾಗಿ ಮತ್ತೊಮ್ಮೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಂಗಡಿ ಮಾಲೀಕರು ಹಾಗೂ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅವರು ಬುಧವಾರ ಸಂಜೆಯೊಳಗಾಗಿ ತಪ್ಪಿತಸ್ಥರನ್ನು ಬಂಧಿಸಲಾಗುತ್ತದೆ, ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದ ನೀಡಬಾರದು, ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದರು. ಎಎಸ್ಪಿ ಸಂತೋಷಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ, ಬೈಂದೂರು ವೃತ್ತನಿರೀಕ್ಷಕ ಸುದರ್ಶನ್, ಗಂಗೊಳ್ಳಿ ಠಾಣೆ ಉಪನಿರೀಕ್ಷಕ ಸುಬ್ಬಣ್ಣ, ಬೈಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಮೊದಲಾದರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳೂ ಸಂಬವಿಸದಂತೆ ಮುಂಜಾಗೃತಾ ಕ್ರಮವಾಗಿ ಗಂಗೊಳ್ಳಿ ಪರಿಸರದಲ್ಲಿ ಒಂದು ಕೆ.ಎಸ್.ಆರ್.ಪಿ. ತುಕಡಿ, ಮೂರು ಡಿ.ಎ.ಆರ್. ಪೊಲೀಸರನ್ನು ನಿಯೋಜಜಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್, ತಹಶಿಲ್ದಾರ್ ಗಾಯತ್ರಿ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಗುರುರಾಜ್ ಉಪ್ಪುಂದ, ಹಿಂಜಾವೇ ಜಿಲ್ಲಾ ಸಂಚಾಲಕ ಧನಂಜಯ ಕುಂದಾಪುರ, ಅರವಿಂದ ಕೋಟೇಶಶ್ವರ ಮೊದಲಾದವರು ಭೇಟಿ ನೀಡಿದ್ದರು.
ಸುಮಾರು 2 ದಶಕಗಳಿಂದ ದಿನಸಿ ಅಂಗಡಿಯಿಟ್ಟುಕೊಂಡಿರುವ ವೆಂಕಟೇಶ್ ಶೆಣೈಯವರದ್ದು ಗಂಗೊಳ್ಳಿಗೆ ನಹಳ ಹಳೆಯ ಅಂಗಡಿಯಾಗಿದೆ. ತಾನೂ ಧಾರ್ಮಿಕವಾಗಿ ಬಹಳಷ್ಟು ಗುರುತಿಸಿಕೊಂಡಿದ್ದು ಮತ್ತು ಅನ್ಯ ಕೋಮಿನವರೊಂದಿಗೆ ಯಾವತ್ತೂ ಘರ್ಷಣೆ ನಡೆಸಿಲ್ಲ, ತನಗೆ ವ್ಯವಹಾರದಲ್ಲೂ ಯಾವುದೇ ವೈರತ್ವವಿಲಲ್ಲ ಎಂದು ಸುದ್ದಿಗಾರರಿಗೆ ಅಂಗಡಿ ಮಾಲೀಕ ವೆಂಕಟೇಶ ಶೆಣೈ ಹೇಳಿದ್ದಾರೆ.