ಮಂಗಳೂರು, ಡಿ.4 : ಮಂಗಳೂರು ಬಜ್ಪೆ ಕೆಂಜಾರು ವಿಮಾನ ನಿಲ್ದಾಣದ ಬಳಿ 2010ರಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತಪಟ್ಟವರ ನೆನಪಿಗಾಗಿ ಕೂಳೂರು ಸೇತುವೆ ಮತ್ತು ತಣ್ಣೀರುಬಾವಿ ನಡುವಿನ ಜಮೀನಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತ್ತಿದ್ದರು.
ರಾಜ್ಯ ಸರಕಾರದ ನೆರವಿನೊಂದಿಗೆ 43 ಸೆಂಟ್ಸ್ ಜಾಗದಲ್ಲಿ ಏರ್ ಇಂಡಿಯಾ, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಎನ್ಎಂ ಪಿಟಿ ಸಹಯೋಗದಲ್ಲಿ ಸ್ಮಾರಕ ನಿರ್ಮಿಸಿ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ವಹಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ವಿವರಿಸಿದರು.
ಸ್ಮಾರಕದೊಂದಿಗೆ ಪಾರ್ಕ್ ನಿರ್ಮಿಸಲಾಗುವುದು. ಪಾರ್ಕ್ನ ನಡುವೆ ಬೋಯಿಂಗ್ 737-800 ವಿಮಾನದ ಮಾದರಿಯನ್ನು ಸ್ಥಾಪಿಸಲಾಗುವುದು. ವಿಮಾನ ನಿಲ್ದಾಣದ ನಿರ್ಗಮನ ದಾರಿಯ ಬಳಿ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಮೃತ ಕುಟುಂಬಸ್ಥರ ಮನವಿ ಮೇರೆಗೆ ಅಲ್ಲಿ ಸ್ಮಾರಕ ನಿರ್ಮಿಸುವ ಉದ್ದೇಶವನ್ನು ಕೈ ಬಿಡಲಾಯಿತು ಎಂದು ಅವರು ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ, ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ, ಸಹಾಯಕ ಪೊಲೀಸ್ ಕಮಿಷನರ್ ಉದಯ್ ನಾಯಕ್ ಸಭೆಯಲ್ಲಿ ಉಪಸ್ಥಿತರಿದ್ದರು.