ಮಂಗಳೂರು,ನ.25 : ಶಿಕ್ಷಣದಲ್ಲಿ ಮಹತ್ತರ ಬದಲಾವಣೆಯಾಗಬೇಕು, ಶೈಕ್ಷಣಿಕ ಒತ್ತಡ, ದುಗುಡಗಳಿಂದ, ಮಕ್ಕಳು ಹೊರಬರಬೇಕು ಎಂದು ವಾದಿಸುತಾ, ಮತ್ತು ಅದಕ್ಕೆ ಸ್ವರೂಪದ ಮೂಲಕ ಪರ್ಯಾಯ ವ್ಯವಸ್ಥೆಯನ್ನು ಸಾಧಿಸುತ್ತಲೇ ಬಂದಿರುವ ಗೋಪಾಡ್ಕರ್ ನೇತೃತ್ವದ ಸ್ವರೂಪ ಅಧ್ಯಯನ ಕೇಂದ್ರದ 2014ರ ಸ್ವರೂಪ ಶಿಕ್ಷಣ ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭವು 22-11-2014ರ ಸಂಜೆ ನಗರದ ಡಾನ್ಬಾಸ್ಕೊ ಹಾಲ್ನಲ್ಲಿ ಜರಗಿತು.
ಮಕ್ಕಳ ಅತೀವ ಚಟುವಟಿಕೆಗಳನ್ನು ಅದ್ಯಾವುದೋ ತಮ್ಮ ಜಂಜಡಗಳಿಗಾಗಿ ನಿಯಂತ್ರಣದಲ್ಲಿಡುವ ಪೋಷಕರು ಮಕ್ಕಳ ಸೃಜನಶೀಲ ಪ್ರತಿಭೆಗಳಿಗೆ ತಡೆಯಾಗುವುದು ತೀರಾ ದುರಂತ. ಪ್ರತಿಯೊಬ್ಬರೂ ತಮ್ಮಲ್ಲಿರುವ ಸ್ವರೂಪಗಳನ್ನು ತಾವೇ ಕಂಡುಕೊಳ್ಳಲು ಶಕ್ತರಾದಾಗ ಮಾತ್ರ ಭವಿಷ್ಯದ ಉನ್ನತ ಸಮಾಜವನ್ನು ನಿರೀಕ್ಷಿಸಬಹುದು ಎಂದು ಜಾನಪದ ವಿದ್ವಾಂಸರಾದ ಡಾ| ಬಿ.ಎ. ವಿವೇಕ ರೈ ಹೇಳಿದರು. ಈ ಸಂದರ್ಭದಲ್ಲಿ ಸುಮಾಡ್ಕರ್ರವರ ಭಾವಪಕ್ಷಿಗೆ ನೇವರಿಕೆ ಕೃತಿಯನ್ನು ಬೆಸೆಂಟ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ| ಮೀನಾಕ್ಷಿ ರಾಮಚಂದ್ರ ಬಿಡುಗಡೆ ಮಾಡಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೈಕಾಡಿ ಜನಾರ್ಧನ ಆಚಾರ್, ಡಾ| ಕವಿತಾ ಪಿ.ಎನ್., ಈಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಗಣೇಶ್ ನಾಯಕ್ ಮತ್ತು ಮನಸ್ವಿ ಸ್ವರೂಪ ಕಾರ್ಯಕ್ರಮವನ್ನು ನಿರ್ವಹಿಸಿದರು. ಆನಂತರ ವಿದ್ಯಾರ್ಥಿಗಳಿಂದ ಪಠ್ಯ ಪೂರಕ ಯಕ್ಷಗಾನ ನೃತ್ಯ ಹಾಡುಗಳ ಸಂಯೋಜನೆಯ ವಿಶಿಷ್ಠ ಕಾರ್ಯಕ್ರಮವು ಪ್ರದರ್ಶನಗೊಂಡಿತು. ಪಾಠವನ್ನು ಬಿಂಬಿಸುವ, ಅದರಾಚೆದ್ದನ್ನೂ ತೋರಿಸುವ ವಿದ್ಯಾರ್ಥಿಗಳೇ ಮಾಡಿದ ಕ್ವಿಲ್ಲಿಂಗ್ ಚಿತ್ರಗಳು ಗಮನ ಸೆಳೆದರು.