ಮಂಗಳೂರು, ನ.16 : ದೇಶದ ಯಾವೂದೇ ಮೂಲೆಯಲ್ಲಿ ಇನ್ನು ಮುಂದೆ ಅತ್ಯಾಚಾರ ನಡೆದರೆ ಅತ್ಯಾಚಾರ ಮಾಡಿದವರ ಕೈ ಕತ್ತರಿಸುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಮಾತ್ರವಲ್ಲದೇ ಕೈ ಕತ್ತರಿಸಿದವರ ಎಲ್ಲಾ ಖರ್ಚನ್ನು ( ನ್ಯಾಯಾಲಯ ಸೇರಿದಂತೆ) ಶ್ರೀರಾಮ ಸೇನೆ ವತಿಯಿಂದ ನೀಡುವುದಾಗಿ ಅವರು ಹೇಳಿದ್ದಾರೆ.
ಬಾನುವಾರ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಒಂದು ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ. ಅತ್ಯಾಚಾರಿಗಳ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಮೀನಾಮೇಷ ಎನಿಸುತ್ತಿದೆ. ಮಾತ್ರವಲ್ಲದೇ ಕಾನೂನು ಮೂಲಕವೂ ಸೂಕ್ತ ಕಾನೂನು ಕ್ರಮ ಜರುಗಿಸದಿರುವುದರಿಂದ ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಪಾಲಕರು ಅಥವಾ ಸಾರ್ವಜನಿಕರು ಆರೋಪಿಯನ್ನು ಕೋರ್ಟ್ ಗೆ ಕೊಂಡೊಯ್ಯುವ ಮೊದಲು ಕೈ ಕತ್ತರಿಸ ಬೇಕು. ಇದರಿಂದ ಎಲ್ಲಾ ಅತ್ಯಾಚಾರಿಗಳು ಪಾಠ ಕಲಿಯಬೇಕು ಎಂದು ಮುತಾಲಿಕ್ ಹೇಳಿದರು.
ಹಿಂದೂ ಯುವಕರು ಮಸೀದಿ ಒಳಗೆ ಹೋಗಿ ದಾಂಧಲೆ ಮಾಡಿದ್ದರೆ….
ನ.14ರಂದು ಮಧುಷ್ ಎಂಬ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದುದನ್ನು ವಿರೋಧಿಸಿ ಯುವತಿಯ ಮನೆಯವರು ಊರ್ವ ಮಾರ್ಕೆಟ್ ಬಳಿ ಇರುವ ಕೊರಗಜ್ಜನ ದೇವಸ್ಥಾನಕ್ಕೆ ತೆರಳಿದ್ದ ನವದಂಪತಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಶ್ರೀರಾಮ ಸೇನೆ ಖಂಡಿಸುವುದಾಗಿ ತಿಳಿಸಿದ ಮುತಾಲಿಕ್ ಹಿಂದೂ ದೇವಸ್ಥಾನದ ಒಳಗೆ ಶೂ ಚಪ್ಪಲಿ ಧರಿಸಿಕೊಂಡು ಬಂದಿರುವುದು ಹಿಂದೂಗಳನ್ನು ಕೆರಳಿಸಿದೆ. ಈ ಬಗ್ಗೆ ಪೋಲೀಸರು ಸೂಕ್ತ ಜರಗಿಸಬೇಕು. ಒಂದು ವೇಳೆ ಹಿಂದೂ ಯುವಕರು ಮಸೀದಿ ಒಳಗೆ ಹೋಗಿ ದಾಂಧಲೆ ಮಾಡಿದ್ದರೆ ಪೊಲೀಸರು ಅಥವಾ ರಾಜಕೀಯ ವ್ಯಕ್ತಿಗಳು ಏನು ಮಾಡುತ್ತಿದ್ದರು. ತಪ್ಪು ಮಾಡದ ಹಿಂದೂ ಯುವಕರನ್ನು ಬಂಧಿಸಿ 307 ಕೇಸ್ ದಾಖಲಿಸುತ್ತಿದ್ದ ಪೊಲೀಸರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಂದಿತಾ ನಿಗೂಡ ಸಾವು ಪ್ರಕರಣ : ಕಾಂಗ್ರೆಸ್ – ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ…
ತೀರ್ಥಹಳ್ಳಿ ನಂದಿತಾ ಪೂಜಾರಿ ಸಾವಿನ ಪ್ರಕರಣದ ಸಾಕ್ಷಿ ನಾಶ ಮಾಡುವ ಹಾಗೂ ತಪ್ಪಿತಸ್ಥರನ್ನು ಬಚಾವ್ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಿಲ್ಲ. ಬಿಜೆಪಿಯಾಗಲಿ ಕಾಂಗ್ರೆಸ್ ಆಗಲಿ ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ತನಿಖೆ ನಡೆಸಬೇಕು ಎಂದು ಹೇಳಿದರು.
ಮಹಿಳಾ ಘಟಕ : ಶೀಘ್ರದಲ್ಲೇ ದ.ಕನ್ನಡದಲ್ಲಿ ದುರ್ಗಾ ಸೇನೆ ತರಬೇತಿ ಆರಂಭ..
ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀರಾಮ ಸೇನೆಯ ಮಹಿಳಾ ಘಟಕವಾದ ದುರ್ಗಾ ಸೇನೆಯ ವತಿಯಿಂದ ಸ್ವ ಸುರಕ್ಷಾ ತರಬೇತಿ ನೀಡಲಾಗುವುದು. ಡಿಸೆಂಬರ್ 2 ನೇ ವಾರದಲ್ಲಿ ದಕ್ಷಿಣ ಕನ್ನಡದಲ್ಲೂ ಈ ತರಬೇತಿ ನೀಡಲಾಗುವುದು. ಈಗಾಗಲೇ ಹುಬ್ಬಳ್ಳಿಯಲ್ಲಿ 2 ದಿನದ ತರಬೇತಿಯನ್ನು ನೀಡಲಾಗಿದೆ ಎಂದು ಹೇಳಿದರು.
ಮದನಿ ಜಾಮೀನು ವಿಸ್ತರಣೆ ರದ್ಧಿಗೆ ಆಗ್ರಹ…
ಪರಪ್ಪನ ಅಗ್ರಹಾರದಲ್ಲಿದ್ದ ಭಯೋತ್ಪಾದಕ ಮದನಿಗೆ ಮೇಲಿಂದ ಮೇಲೆ ಜಾಮೀನು ದೊರೆಯುತ್ತಿರುವುದನ್ನು ನಾವು ಖಂಡಿಸುತ್ತಿದ್ದೇವೆ. ಯಾವುದೇ ಖಾಯಿಲೆಯಿಲ್ಲದೆ ಸುಮ್ಮನೆ ಜಾಮೀನು ಪಡೆದು ಸಾಕ್ಷಿ ನಾಶ ಮಾಡುವ ಕಾರ್ಯದಲ್ಲಿ ತೊಡಗಿದ್ಧಾನೆ. ಸುಪ್ರೀಂ ಕೋರ್ಟ್ ಮದನಿ ಜಾಮೀನು ವಿಸ್ತರಣೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀರಾಮ ಸೇನೆಯ ದಕ್ಷಿಣ ಪ್ರಾಂತ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೇಮಾರ್, ಜಿಲ್ಲಾಧ್ಯಕ್ಷ ಜೀವನ್ ನೀರು ಮಾರ್ಗ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಅತ್ತಾವರ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾ ವಕ್ತಾರ ಸುದತ್ತ್ ಜೈನ್. ಪ್ರಮುಖರಾದ ಕೀರ್ತನಾ ರಾಜ್ ಶೆಟ್ಟಿ ಅಡ್ಯಾರ್ ಪದವು, ಮೋಹನ್ ಪದವಿನಂಗಡಿ, ಗುರು ಪ್ರಸಾದ್ ಪಾಂಡೇಶ್ವರ , ಚಂದ್ರಶೇಖರ್ , ಗಣೇಶ್ ಪದವಿನಂಗಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.