ಮಂಗಳೂರು : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಿವಾಹಿತ ಜೋಡಿಗಳ ಮೇಲೆ ವಧುವಿನ ಸಂಬಧಿಕರು ದಾಳಿ ನಡೆಸಿ ಹಲ್ಲೆ ಮಾಡಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ಮದುವೆ ಇಂದು ಬೆಳಿಗ್ಗೆ ಆರ್ಯ ಸಮಾಜದಲ್ಲಿ ನಡೆದಿದ್ದು, ಸಂಜೆ ದೈವಸ್ಥಾನಕ್ಕೆ ಭೇಟಿ ನೀಡಿದ ದಂಪತಿಗಳ ಮೇಲೆ ಹುಡುಗಿ ಸಮ್ಮಂಧಿಕರು ಹಲ್ಲೆಗೆ ಪ್ರಯತ್ನಿಸಿ, ಹುಡುಗಿಯನ್ನು ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸಿ, ತಾತ್ಕಲಿಕವಾಗಿ ಪೊಲೀಸರ ಅಥಿತಿಯಾದ ಘಟನೆ ನಡೆದಿದೆ.
ಘಟನೆ ವಿವರ : ವಧು ಮತ್ತು ವರ ಇಬ್ಬರೂ ವಾಮಂಜೂರು ಪರಿಸರದವರು. ಆತನ ಹೆಸರು ಮಧುಶ್. ಹಿಂದೂ ಸಮುದಾಯಕ್ಕೆ ಸೇರಿದ ಈತ ವಾಮಂಜೂರು ಅಂಬೇಡ್ಕರ್ ನಗರದ ನಿವಾಸಿ. ಆಕೆಯ ಹೆಸರು ಜೂಹಿದಾ. ಮುಸ್ಲಿಂ ಸಮುದಾಯಕ್ಕೆ ಸೇರಿದ ಆಕೆ ವಾಮಂಜೂರಿನ ಮೂಡುಶೆಡ್ಡೆ ನಿವಾಸಿ. ಇಬ್ಬರೂ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಮನೆ ಮಂದಿಯ ವಿರೋಧದ ನಡುವೆ ನ. 14 ರಂದು ಶುಕ್ರವಾರ ಬೆಳಿಗ್ಗೆ ನಗರದ ಆರ್ಯ ಸಮಾಜದಲ್ಲಿ ಹಿಂದೂ ಪದ್ಧತಿಯ ಪ್ರಕಾರ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಆಕೆ ತನ್ನ ಹೆಸರನ್ನು ವಿಜಯಲಕ್ಷ್ಮೀ ಎಂಬುದಾಗಿ ಬದಲಾಯಿಸಿಕೊಂಡಿದ್ದಳು.
ಮದುವೆಯಾದ ಬಳಿಕ ಸಂಜೆ ಯುವಕನ ಅಣತಿಯಂತೆ ಉರ್ವಾ ಮೈದಾನದ ಸಮೀಪವಿರುವ ಕೊರಗ್ಗಜ್ಜನ ಗುಡಿಗೆ ಭೇಟಿ ನೀಡಿದ ನವ ದಂಪತಿಗಳು ಪ್ರಾರ್ಥನೆಯಲ್ಲಿ ತೊಡಗಿರುವಾಗ ಏಕಾಏಕಿ ದೈವಸ್ಥಾನದೊಳಗ್ಗೆ ನುಗ್ಗಿದ್ದ ಮದುಮಗಳ ಸಂಬಧಿಕರು ಯುವಕನನ್ನು ತಳ್ಳಿ ಯುವತಿಯನ್ನು ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲದೇ ದಾಳಿ ಮಾಡಿದ ಪುರುಷರೊಂದಿಗೆ ಬುರ್ಖ ತೊಟ್ಟಿರುವ ಇಬ್ಬರು ಮಹಿಳೆಯರು ಕೂಡ ಚಪ್ಪಲಿ ಧರಿಸಿಕೊಂಡು ಗುಡಿಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಬರ್ಕೆ ಪೊಲೀಸರು ಎಲ್ಲರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರ ತ್ವರಿತ ಆಗಮನದಿಂದಾಗಿ ಸಂಭವಿಸ ಬಹುದಾಗಿದ್ದ ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಘಟನಾ ಸ್ಥಳದಿಂದ ಎಲ್ಲರನ್ನು ಠಾಣೆಗೆ ಕರೆದೊಯ್ದ ಬರ್ಕೆ ಪೊಲೀಸರು ದಂಪತಿಗಳ ಹಾಗೂ ಸಮ್ಮಂಧಿಕರ ವಿಚಾರಣೆಯಲ್ಲಿ ತೊಡಗಿದ್ದು, ಮಾಧ್ಯಮದವರಿಗೆ ಪ್ರವೇಶ ನಿರಕರಿಸಿದ್ದು, ಮಾತ್ರವಲ್ಲದೇ ಯಾವೂದೇ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಹಿಂದೂ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಪ್ರಕರಣವನ್ನು ಸೌಹಾರ್ಧಯುತವಾಗಿ ಬಗೆಹರಿಸುವಲ್ಲಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.