ಬಂಟ್ವಾಳ,ನ.13 : ಬಿಕ್ಷುಕಿಯೋರ್ವಳು ಬೆಳಿಗ್ಗೆಯಿಂದ ರಾತ್ರಿಯ ತನಕ ಜೀವನ್ಮರಣ ಹೋರಾಟದಲ್ಲಿ ಬೊಬ್ಬೆ ಹಾಕಿ ಹೊರಲಾಡುತ್ತಿದ್ದ ದೃಶ್ಯ ಪುರಸಭಾ ವ್ಯಾಪ್ತಿಯ ದೇವರಕಟ್ಟೆ ಕೊಟ್ರಮಣ ಗುಂಡಿ ಬಸ್ ನಿಲ್ದಾಣದಲ್ಲಿ ತಂಡು ಬಂತು.
ಕೊಟ್ರಮಣ ಗುಂಡಿ ಅನಾಥ ಬಸ್ ನಿಲ್ದಾಣ ಅದು ಕೆಲ ವರ್ಷಗಳಿಂದ ಬಿಕ್ಷುಕರ ಪಾಲಾಗಿರುವುದು ಮಾತ್ರ ವಿಷಾಧಕರ ವಿಷಯವಾದರೆ, ಈ ಬಸ್ ನಿಲ್ದಾಣದಲ್ಲಿ ಬಿಕ್ಷುಕಿಯೋರ್ವಳು ಆರೋಗ್ಯ ಕೆಟ್ಟು ಎದ್ದೇಳಲಾಗದ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದನ್ನು ಕಂಡು ಇಲ್ಲಿನ ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಸುಮಾರು 10 ಗಂಟೆಯ ವೇಳೆಗೆ ಬಂಟ್ವಾಳ ಪುರಸಭೆಯ ಅಧಿಕಾರಿಗಳಿಗೆ ಪೋನ್ ಮೂಲಕ ತಿಳಿಸಿದ್ದರು.
ಇಲ್ಲಿನ ಅಧಿಕಾರಿಗಳು ಸಮುದಾಯ ಆರೋಗ್ಯ ಇಲಾಖೆಗೆ ತಿಳಿಸಿದಲ್ಲದೇ ಕೂಡಲೇ ಅವರನ್ನು ಆಸ್ಪತ್ರೆಗೆ ವರ್ಗಾಯಿಸುವಂತೆಯೂ ತಿಳಿಸಿದ್ದರು. ಆದರೆ ಸಂಜೆ 4 ಗಂಟೆಯವರಗೆ ಆರೋಗ್ಯ ಇಲಾಖೆ ಮಾತ್ರ ಇತ್ತ ಕಡೆ ಕಣ್ಣತ್ತಿ ನೋಡಿಲ್ಲ. ಪರಿಸ್ಥಿತಿಯನ್ನು ಗಮನಿಸಿದ ಪುರಸಭಾ ಸದಸ್ಯ ಮಂಗಳೂರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪೋನ್ ಮೂಲಕ ಸಂಪರ್ಕಿಸಿ ಅಂಬ್ಯುಲೆನ್ಸ್ ಕಳುಹಿಸುವಂತೆಯೂ ಮನವಿ ಮಾಡಿಕೊಂಡಿದ್ದರು. ಅದಾಗಿಯೂ ರಾತ್ರಿ 7 ಗಂಟೆಯವರಗೂ ಆರೋಗ್ಯ ಇಲಾಖೆ ಬಂಟ್ವಾಳಕ್ಕೆ ಕನಿಷ್ಟ ಅಂಬ್ಯುಲೆನ್ಸ್ ಕಳುಹಿಸುವ ಗೋಜಿಗೂ ಹೋಗಿಲ್ಲ. ಬಿಕ್ಷುಕಿಯ ನರಲಾಟವನ್ನು ನೋಡಲಾಗದೆ ಪುರಸಭಾ ಸದಸ್ಯರು ಮತ್ತು ಇಲ್ಲಿನ ಸ್ಥಳಿಯರು ಸೇರಿ ಬಂಟ್ವಾಳ ಸಮುದಾಯ ಆರೋಗ್ಯ ಇಲಾಖೆಗೆ ದಾಖಲು ಮಾಡಿದರು.