ಕರಾವಳಿ

2 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ, ಸಂಸ್ಮರಣೆಯ ಉದ್ಘಾಟನಾ ಸಮಾರಂಭ.

Pinterest LinkedIn Tumblr

yashgana_spatha_photo_1

ಮಂಗಳೂರು,ನ.10: ಯಕ್ಷಗಾನ ಮತ್ತು ತಾಳಮದ್ದಳೆಯ ಕಥಾ ಭಾಗವನ್ನು ತುಂಡು ತುಂಡು ಮಾಡಿ ಪ್ರದರ್ಶಿಸುವ ಮೂಲಕ ಅದರ ಅಂದಚಂದವನ್ನು ಕೆಡಿಸುವ ‘ಪ್ರಯೋಗ’ಗಳಾಗದಿರಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ತಿಳಿಸಿದ್ದಾರೆ.

ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಯಕ್ಷಗಾನ ಮಂಗಳೂರು ಇದರ ಎರಡನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ, ಸರಣಿ ಸಂಸ್ಮರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

yashgana_spatha_photo_2

ಯಕ್ಷಗಾನಕ್ಕೆ ಬಹುರೂಪಗಳಿವೆ. ಯಕ್ಷಗಾನ ಅಥವಾ ತಾಳಮದ್ದಳೆಯಲ್ಲಿ ಪ್ರಸಂಗದ ಮುಖ್ಯ ಭಾಗವನ್ನಷ್ಟೇ ಪ್ರದರ್ಶಿಸುವ ಪ್ರಯೋಗಗಳು ಈಗ ಹೆಚ್ಚುತ್ತಿವೆ. ಒಮ್ಮೆಗೆ ಪ್ರೇಕ್ಷಕರಿಗೆ ಅಂಥ ಪ್ರದರ್ಶನಗಳು ಇಂಪೆನಿಸಿದರೂ ಮುಂದಿನ ದಿನಗಳಲ್ಲಿ ಅದು ಆತಂಕಗಳಿಗೆ ಕಾರಣವಾಗಬಹುದು. ಮುಖ್ಯ ಭಾಗವನ್ನಷ್ಟೇ ತಿಳಿದುಕೊಂಡು ಇತರ ಭಾಗವನ್ನು ನಿರ್ಲಕ್ಷಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಯಕ್ಷಗಾನವನ್ನು ಯಕ್ಷಗಾನಕ್ಕಾಗಿಯೇ ಆಯೋಜಿಸುವವರ ಒಂದು ವರ್ಗ ಮತ್ತು ಯಕ್ಷಗಾನದ ಮೂಲಕ ಇತರ ಕೆಲಸಗಳನ್ನು ಮಾಡಿಸಿಕೊಳ್ಳುವ ಇನ್ನೊಂದು ವರ್ಗವಿದೆ ಎನ್ನುವ ಉದ್ಯಾವರ ಮಾಧವ ಆಚಾರ್ಯರ ಕಾಳಜಿಯನ್ನು ಉಲ್ಲೇಖಿಸಿದ ಡಾ.ಚಿನ್ನಪ್ಪ ಗೌಡ, ಯಕ್ಷಗಾನಕ್ಕಾಗಿಯೇ ಆದ್ಯತೆ ನೀಡಬೇಕು ಹೊರತು, ಯಕ್ಷಗಾನದ ಮೂಲಕ ಇತರ ಕೆಲಸಗಳಿಗೆ ಆದ್ಯತೆ ಕೊಡಬಾರದು. ಯಕ್ಷಗಾನವನ್ನು ಅದರ ಮೂಲ ಸ್ವರೂಪದಲ್ಲೇ ಅಚ್ಚುಕಟ್ಟಾಗಿ ಕಟ್ಟಿಕೊಡುವ ಕೆಲಸವಾಗಬೇಕೆಂದು ಸಲಹೆ ನೀಡಿದರು.

ಯಕ್ಷಗಾನ ಉಳಿವಿಗಾಗಿ ಪೋಷಕರು, ದಾನಿಗಳು ಆರ್ಥಿಕ ಸಹಾಯ ಮಾಡುತ್ತಾರೆ. ಆದರೆ ಅಲ್ಲಿಗೆ ಅವರ ಜವಾಬ್ದಾರಿ ಮುಗಿಯುವುದಿಲ್ಲ. ತಾವು ನೀಡುತ್ತಿರುವ ದೇಣಿಗೆಯ ವಿನಿಯೋಗವು ಸಮರ್ಪಕವಾಗಿ ವಿನಿಯೋಗವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಹೊಣೆಗಾರಿಕೆಯೂ ಅವರ ಮೇಲಿದೆ ಎಂದು ಹೇಳಿದರು.

yashgana_spatha_photo_3

ತಾಳಮದ್ದಳೆ ಸಪ್ತಾಹವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಪಾಜೆ ಶೀನಪ್ಪ ರೈ ಉದ್ಘಾಟಿಸಿದರು. ಶೀನಪ್ಪ ರೈ ಅವರನ್ನು ಯಕ್ಷಾಂಗಣದ ವತಿಯಿಂದ ಸನ್ಮಾನಿಸಲಾಯಿತು. ದಿ.ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಸ್ಮರಣಾರ್ಥ ಅಜೆಕಾರು ಕಲಾಭಿಮಾನಿ ಬಳಗ ಪ್ರಕಟಿಸಿರುವ ‘ಯಕ್ಷರ ಚೆನ್ನ ‘ ಕೃತಿ ಬಿಡುಗಡೆ ಮಾಡಿ ಅದರ ಪ್ರತಿಯನ್ನು ಪತ್ನಿ ಹೇಮಲತಾ ಚೆನ್ನಪ್ಪ ಶೆಟ್ಟಿ ಮತ್ತು ಪುತ್ರ ಭೂಷಣ್ ಅವರಿಗೆ ನೀಡಿ ಗೌರವಿಸಲಾಯಿತು.

ಕದ್ರಿ ಶ್ರೀ ಮಂಜುನಾಥ ದೇವಾಲಯದ ಆಡಳಿತ ಮೊಕ್ತೇಸರ ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಜಗನ್ನಾಥ ಚೌಟ,ಅಜೆಕಾರ್ ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ಕಾಲೇಜು ಪ್ರಿನ್ಸಿಪಾಲ್ ಸತ್ಯನಾರಾಯಣ ಮಲ್ಲಿಪಟ್ಣ ಮತ್ತು ಯಕ್ಷಗಾನ ಉಪಾಧ್ಯಕ್ಷ ಎ.ಶಿವಾನಂದ ಕರ್ಕೇರ ಉಪಸ್ಥಿತರಿದ್ದರು. ಯಕ್ಷಗಾನ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರುಕ್ಮಾಂಗದ ತಾಳಮದ್ದಳೆ ಕಾರ್ಯಕ್ರಮ ಜರುಗಿತು. ನ.10ರಂದು ಸಂಜೆ 5 ಗಂಟೆಯಿಂದ ವಳವೂರು ರಾಮಣ್ಣ ರೈ ಸಂಸ್ಮರಣೆ ಅಂಗವಾಗಿ ‘ಬಲಿ’ ತುಳು ತಾಳಮದ್ದಳೆ ಜರುಗಲಿದೆ.

yashgana_spatha_photo_4

ಯಕ್ಷ ಕಲಾವಿದರ ಎಕ್ಸ್‌ಚೇಂಜ್ :

ಶೈಕ್ಷಣಿಕ ವಲಯದಲ್ಲಿ ಕಲಾವಿದರ ವಿನಿಮಯ ಕಾರ್ಯಕ್ರಮ (ಎಕ್ಸ್‌ಚೇಂಜ್ ಪ್ರೋಗ್ರ್ಯಾಮ್) ಇರುವಂತೆ ಯಕ್ಷಗಾನದಲ್ಲೂ ಅವಕಾಶವಿರಬೇಕು. ಇದರಿಂದ ಕಲಾವಿದರಿಗೆ ಒಂದೇ ಮೇಳದಲ್ಲಿ ಕಲಾ ಸೇವೆ ಮಾಡುವ ಬದಲು ನಮ್ಮಲ್ಲಿರುವ ಇತರ 30-40 ಮೇಳಗಳಲ್ಲೂ ಅವಕಾಶ ಸಿಗುತ್ತದೆ. ಅಲ್ಲಿ ಅವರಿಗೆ ಹೆಚ್ಚು ಹೆಸರು ಬರುತ್ತದೆ ಎನ್ನುವ ಸಲಹೆಯನ್ನು ಡಾ.ಚಿನ್ನಪ್ಪ ಗೌಡ ನೀಡಿದರು.

Write A Comment