ಬದಿಯಡ್ಕ, ನ.10: ಬದಿಯಡ್ಕ ಪೊಲೀಸರು ನಡೆಸಿದ ಕಾರ್ಯಾಚರಣೆ ಯೊಂದರಲ್ಲಿ ಕರ್ನಾಟಕದಿಂದ ತರಲಾಗುತ್ತಿದ್ದ ಬೃಹತ್ ಗುಟ್ಕಾ ಮಾರಾಟ ಜಾಲವೊಂದನ್ನು ಸೆರೆ ಹಿಡಿಯಲಾಗಿದೆ.
ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಕರ್ನಾಟಕದ ವಿಟ್ಲ ಕಡೆಯಿಂದ ಬಂದ ಸ್ಯಾಂಟ್ರೋ ಕಾರೊಂದರಲ್ಲಿ ಗುಟ್ಕಾ ಪ್ಯಾಕೆಟ್ಗಳಿವೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಬದಿಯಡ್ಕ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಕಾರನ್ನು ವಶಪಡಿಸಿ ಪರಿಶೀಲನೆ ನಡೆಸಿದಾಗ 9 ಗೋಣಿ ಚೀಲಗಳಲ್ಲಿದ್ದ 27 ಸಾವಿರ ವಿವಿಧ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
40 ಸಾವಿರಕ್ಕಿಂತಲೂ ಅಧಿಕ ಮೌಲ್ಯದ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಸಂಬಂಧ ಉಕ್ಕಿನಡ್ಕ ಚಾನಕ್ಕೂಡಿನ ಅಬ್ದುಲ್ಲಕುಂಞಿ(48) ಹಾಗೂ ಪೆರಡಾಲ ಮೂಕಂಪಾರೆಯ ಸಂಶುದ್ದೀನ್(42)ರನ್ನು ಬದಿಯಡ್ಕ ಎಸ್ಸೈ ಜೋಸ್ ನೇತೃತ್ವದ ತಂಡ ಬಂಧಿಸಿದ್ದಾರೆ.
ಕೇರಳದಲ್ಲಿ ಗುಟ್ಕಾ ಸಹಿತ ತಂಬಾಕು ಉತ್ಪನ್ನಗಳಿಗೆ ನಿಷೇಧವಿದ್ದು, ಗಡಿ ಪ್ರದೇಶಗಳ ಮೂಲಕ ಕರ್ನಾಟಕದಿಂದ ಗುಟ್ಕಾ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಬೃಹತ್ ಜಾಲಗಳು ಜಿಲ್ಲೆಯಾದ್ಯಂತ ಸಕ್ರಿಯವಾಗಿದೆ ಎಂದರು.
ಬಸ್ ಸಹಿತ ವಿವಿಧ ವಾಹನಗಳಲ್ಲಿ ತಂಬಾಕು ಉತ್ಪನ್ನಗಳನ್ನು ಗುಟ್ಟಾಗಿ ಮಾರಾಟ ಕೇಂದ್ರಗಳಿಗೆ ತಲಪಿಸುವ ಹಲವು ವ್ಯಕ್ತಿಗಳ ಬಗ್ಗೆ ಈಗಾಗಲೇ ಪೊಲೀಸರು ನಿಗಾ ಇರಿಸಿದ್ದು, ಬಂಧಿಸಲ್ಪಟ್ಟಾಗ ದಂಡ ವಸೂಲಿಯ ಮೂಲಕ ಕೈತೊಳೆಯುವ ಕಾನೂನು ಮಾತ್ರ ಜಾರಿಯಲ್ಲಿರುವುದರಿಂದ ಅಕ್ರಮ ಮಾರಾಟಕ್ಕೆ ಕೊನೆ ಹಾಡಲು ಪೊಲೀಸರಿಗೂ ಕಷ್ಟವಾಗುತ್ತಿದೆ ಎಂದು ಎಸ್ಸೈ ಜೋಸ್ ಪತ್ರಿಕೆಗೆ ತಿಳಿಸಿದರು.