ಕುಂದಾಪುರ: ಆತ ತೊಡಲು ಸರಿಯಾದ ಬಟ್ಟೆಗಳಿರಲಿಲ್ಲ, ತಿನ್ನಲು ಆಹಾರವಿರಲಿಲ್ಲ, ಈ ಸಮಾಜದ ಪರಿವೇ ಇಲ್ಲದೇ ತನ್ನ ಪಾಡಿಗೆ ತಾನೂ ಅಲೆಮಾರಿಯಾಗಿ ತ್ರಾಸಿ ಸಮೀಪದಲ್ಲಿ ಅಲೆದಾಡುತ್ತಿದ್ದ ಈ ಮಾನಸಿಕ ಅಸ್ವಸ್ಥನ ಬದುಕು ಈಗ ಬದಲಾಗಿದೆ.
ತಲೆಗೂದಲು, ಗಡ್ಡ ಬೆಳೆದು ಮೈಕೈ ಸಂಪೂರ್ಣ ಕೊಳೆಯಿಂದ ತುಂಬಿ ಹೋಗಿರುವ ಈತ ಬೆಂಗಳೂರು ಮೂಲದ ಸುನೀಲ್ ಕುಮಾರ್.
ಈತ ಇಲ್ಲಿ ಸೇರಿದ ಸ್ಟೋರಿ ಇಂಟರೆಸ್ಟಿಂಗ್: ಗಂಗೊಳ್ಳಿ 24*7 ಹೆಲ್ಪ್ಲೈನ್ ಕಾರ್ಯಕರ್ತ ದಿವಂಗತ ಸುಹೈಲ್ ಗಂಗೊಳ್ಳೀ ಸ್ಮರಣಾರ್ಥ ಅಕ್ಟೋಬರ್ 4. ಮಂಗಳವಾರ ಮೊಹರಂ ಹಾಗೂ ಉಥ್ಥಾನ ದ್ವಾದಶಿ ಪ್ರಯುಕ್ತ ಗಂಗೊಳ್ಳಿ 24*7 ಹೆಲ್ಪ್ಲೈನ್ ಕಾರ್ಯಕರ್ತರು ಕುಂದಾಪುರದಿಂದ ಶಿರೂರುವರೆಗಿನ ರಸ್ತೆ ಬದಿಯಲ್ಲಿರುವ ಅನಾಥ, ನಿರ್ಗತಿಕ, ಮಾನಸಿಕ ಅಸ್ವಸ್ಥರಿಗೆ ಒಂದು ದಿನದ ಊಟ, ಹಣ್ಣುಹಂಪಲು, ದಿನೋಪಯೋಗಿ ವಸ್ತು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಹೆಲ್ಪ್ ಲೈನ್ ಕಾರ್ಯಕರ್ತರಿಗೆ ತ್ರಾಸಿಯಲ್ಲಿ ಸಿಕ್ಕಿದ್ದಾನೆ. ಈ ವೇಲೆ ಕಾರ್ಯಕರ್ತರು ಆತನನ್ನು ಮಾತನಾಡಿಸಿದಾಗ ಆತ ಹಿಂದಿ, ಇಂಗ್ಲೀಷ್, ಕನ್ನಡ ಹಾಗೂ ತಮಿಳಿನಲ್ಲಿ ಚೆನ್ನಾಗಿಯೇ ಮಾತನಾಡಿದ್ದಾನೆ. ಈ ವೇಳೆ ಗಂಗೊಳ್ಳಿ 24*7 ಹೆಲ್ಪ್ಲೈನ್ ಅಧ್ಯಕ್ಷ ಇಬ್ರಾಹಿಂ ಗಂಗೊಳ್ಳಿ, ಸಾಮಾಜಿಕ ಕಾರ್ಯಕರ್ತ ಮಾರ್ಕ್ ಡಿಸೋಜಾ ಹಾಗೂ ಮೊಹಮ್ಮದ್ ಸುಬಾನ್ ಈತನ ಜಾಣ್ಮೆಗೆ ತಲೆದೂಗಿದ್ದಾರೆ.
ಧವಾರ ಸ್ಥಳಕ್ಕೆ ತೆರಳಿದ ಅವರು ಈತನಿಗೊಂದು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬೇಳೂರಿನ ಸ್ಪೂರ್ತಿಧಾಮ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಇಲ್ಲಿನ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಕೇಶವ ಕೋಟೇಶ್ವರ ಸುನೀಲ್ ಅವರನ್ನು ಸಂಸ್ಥೆಗೆ ಕರೆತರುವಂತೆ ಒಪ್ಪಿಗೆ ನೀಡಿದ್ದಾರೆ. ಈ ವೇಳೆ ಗಂಗೊಳ್ಳಿ ಪೊಲೀಸ್ ಸಿಬ್ಬಂದಿಗಳಾದ ಚಂದ್ರಶೇಖರ ಅರೆಶಿರೂರು ಹಾಗೂ ಮೋಹನ್ಮ ಪೂಜಾರಿ ಶಿರೂರು ಸುನೀಲ್ ಕುಮಾರ್ ಮನವೊಲಿಸಿ ಸ್ಪೂರ್ತಿಧಾಮಕ್ಕೆ ತೆರಳುವಂತೆ ತಿಳಿಸಿದ್ದಾರೆ. ಬಳಿಕ ಹೆಲ್ಪ್ಲೈನ್ ವಾಹನದಲ್ಲಿ ಇಬ್ರಾಹಿಂ ಅವರು ಈತನನ್ನು ಸಂಸ್ಥೆಗೆ ಕರೆತಂದು ದಾಖಲಿಸಿದ್ದಾರೆ.
ಚೆನ್ನಾಗಿಯೇ ಇಂಗ್ಲೀಷ್ ಮಾತನಾಡುವ ಈತ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದು ಸೂಕ್ತ ಚಿಕಿತ್ಸೆ ನೀಡಿದರೇ ಆತ ಗುಣಮುಖನಾಗಿ ಎಲ್ಲರಂತೇ ಇರುತ್ತಾನೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸ್ಪೂರ್ತಿಧಾಮದ ವ್ಯವಸ್ಥಾಪಕ ಡಾ. ಕೇಶವ ಕೋಟೆಶ್ವರ.
ಬುಧವಾರ ಸಂಜೆ ಆತನ ತಲೆ ಕೂದಲುಗಳನ್ನು ಕತ್ತರಿಸಿ, ಹೊಸ ಪ್ಯಾಂಟ್- ಶರ್ಟ್ ನೀಡಿ ಆತನಿಗೊಂದು ಹೊಸ ರೂಪದೊಂದಿಗೆ ಹೊಸ ಬದುಕು ನೀಡಿದೆ ಬೇಳೂರು ಸ್ಪೂರ್ತಿಧಾಮ.
ಸದ್ಯ ಬೇಳೂರಿನ ಸ್ಪೂರ್ತಿಧಾಮದಲ್ಲಿ ಖುಷಿ ಹಾಗೂ ಲವಲವಿಕೆಯಿಂದ ಇರುವ ಸುನೀಲ್ ಆದಷ್ಟು ಶೀಘ್ರ ಗುಣಮುಖನಾಗಲಿ ಎನ್ನುವ ಹಾರೈಕೆ ನಮ್ಮದು.