ಕರಾವಳಿ

ಮಾಜಿ ಪ್ರಧಾನಿ ದೇವೇಗೌಡ ಅವರಿಂದ ‘ಸಾಂಸ್ಕೃತಿಕ ಚಿಂತಕ ಕೆ.ಎಸ್.ಎನ್. ಅಡಿಗ’ ಕೃತಿ ಲೋಕಾರ್ಪಣೆ.

Pinterest LinkedIn Tumblr

krithi_bidugade_prog_1

ಮಂಗಳೂರು,ನ.೦6 : ದೇಶಾದ್ಯಂತ ಗ್ರಾಹಕರ ಮಿತ್ರನಾಗಿ, ಬಂಧುವಾಗಿ ಕರ್ಣಾಟಕ ಬ್ಯಾಂಕ್ ಬೆಳೆಯಲು ಅಂದು ಶ್ರಮವಹಿಸಿದ ಬ್ಯಾಂಕ್‌ನ ದಿಗ್ಗಜ ಕೆ.ಎಸ್.ಎನ್.ಅಡಿಗ ಹಾಗೂ ಇಂದು ಸಿಬ್ಬಂದಿ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಪಂಪ್‌ವೆಲ್ ಬಳಿಯಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಕರ್ಣಾಟಕ ಬ್ಯಾಂಕ್ ದಿಗ್ಗಜ ಕೆ.ಎಸ್.ಎನ್.ಅಡಿಗರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

krithi_bidugade_prog_2

ಹೊಳೆನರಸಿಪುರ ಶಾಖೆಯಲ್ಲಿ ನೂರು ರೂ. ಠೇವಣಿ ಇರಿಸಿ ತಾನು ಗ್ರಾಹಕನಾಗಿದ್ದು, ಪ್ರತಿ ವರ್ಷ 25 ಸಾವಿರ ರೂ.ವನ್ನು ಬ್ಯಾಂಕ್ ಕೃಷಿಗಾಗಿ ಮುಂಗಡ ಕೊಡುತ್ತಿತ್ತು ಎಂದು ಅವರು ನೆನಪಿಸಿದರು. ಕಾಂತಾವರ ಕನ್ನಡ ಸಂಘ ಹೊರ ತಂದ ಬ್ಯಾಂಕ್‌ನ ನಿರ್ದೇಶಕ ಶ್ರೀನಿವಾಸ ದೇಶಪಾಂಡೆ ಸಂಪಾದಕತ್ವದ ‘ಸಾಂಸ್ಕೃತಿಕ ಚಿಂತಕ ಕೆ.ಎಸ್.ಎನ್. ಅಡಿಗ’ ಕೃತಿಯನ್ನು ಮಾಜಿ ಪ್ರಧಾನಿ ದೇವೇಗೌಡ ಲೋಕಾರ್ಪಣೆ ಮಾಡಿದರು.

krithi_bidugade_prog_3

ಕೆ.ಎಸ್.ಎನ್.ಅಡಿಗರ ಸಂಸ್ಮರಣೆ ಕೃತಿಯನ್ನು ಬ್ಯಾಂಕ್‌ನ ಮಾಜಿ ನಿರ್ದೇಶಕ ಧರ್ಮಸ್ಥಳ ಸುರೇಂದ್ರ ಕುಮಾರ್ ಬಿಡುಗಡೆಗೊಳಿಸಿ ಮಾತನಾಡಿ, ಅಡಿಗರು ವಕೀಲರಾಗಿದ್ದ ಕಾರಣ ರಿಸರ್ವ್ ಬ್ಯಾಂಕ್‌ನ ನಿಯಮ ತಿಳಿದ ಹಿನ್ನೆಲೆಯಲ್ಲಿ ಸಾಲ ನೀಡುವಾಗ ಜಾಗರೂಕರಾಗಿದ್ದರು ಎಂದರು.

krithi_bidugade_prog_4

ಮುಖ್ಯ ಅತಿಥಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಮಾತನಾಡಿ, ಯಾವುದೇ ಒತ್ತಡಕ್ಕೆ ಮಣಿಯದೆ ಖಾಸಗಿ ವಲಯದಲ್ಲಿ ಅತ್ಯುತ್ತಮ ಬ್ಯಾಂಕ್ ಆಗಿ ಬೆಳೆಸಲು ಅಡಿಗರು ಬಹಳಷ್ಟು ಶ್ರಮವಹಿಸಿದ್ದರು ಎಂದರು. ವಕೀಲಿ ವೃತ್ತಿಯನ್ನು ತ್ಯಜಿಸಿ ಬ್ಯಾಂಕ್‌ನ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಡಿಗರು, ಅನೇಕ ಪ್ರಮುಖ ವ್ಯಕ್ತಿಗಳ ಸಂಪರ್ಕವಿದ್ದರೂ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿಲ್ಲ ಎಂದು ಅವರು ತಿಳಿಸಿದರು.

krithi_bidugade_prog_5

ಅಡಿಗರ ಸ್ಮರಣಾರ್ಥ ಹೊರ ತರಲಾದ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಚೀಟಿಯನ್ನು ಕರ್ನಾಟಕ ವೃತ್ತ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಂ.ಎಸ್.ರಾಮಾನುಜನ್ ಬಿಡುಗಡೆಗೊಳಿಸಿ ಮಾತನಾಡಿ, ಅಂಚೆ ಲಕೋಟೆ ಮತ್ತು ಅಂಚೆ ಚೀಟಿಯಿಂದ ದೇಶಾದ್ಯಂತ ಅಡಿಗರ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ ಎಂದರು.

krithi_bidugade_prog_7

ಬ್ಯಾಂಕ್‌ನ ಅಧ್ಯಕ್ಷ ಅನಂತಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಯು.ವಿ.ಭಟ್, ಎಂ.ಎಸ್.ಕೃಷ್ಣ ಭಟ್ ಉಪಸ್ಥಿತರಿದ್ದರು. ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಜಯರಾಮ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಮಂಗಳೂರು ಆಕಾಶವಾಣಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು.

Write A Comment