ಉಡುಪಿ: ಜನಪರ ಆಡಳಿತಕ್ಕೆ ಪೂರಕವಾಗಿ ಸಮಯ ಪ್ರಜ್ಞೆ ಹಾಗೂ ಕೆಲಸಗಳ ಆದ್ಯತೆಗಳನ್ನು ಗುರುತಿಸಿ ಕಾರ್ಯೋನ್ಮುಖರಾಗಿ ಎಂದು ನೂತನ ಜಿಲ್ಲಾಧಿಕಾರಿ ಡಾ ಆರ್, ವಿಶಾಲ್ ಅವರು ಹೇಳಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಥಮ ಸಭೆ ನಡೆಸಿ, ಪ್ರತಿಯೊಂದು ಇಲಾಖೆಯ ಪ್ರಗತಿಯನ್ನು ಕ್ಷಿಪ್ರವಾಗಿ ಪರಿಶೀಲಿಸಿದರು. ಆರೋಗ್ಯ ಇಲಾಖೆಯ ಪ್ರಗತಿಯನ್ನು ಸವಿವರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಪರಿಶೀಲಿಸಿದ ಅವರು, ಸಮಗ್ರ ಮಾಹಿತಿಯನ್ನು ಡಾಕ್ಟರ್ ಬಾಯರಿ ಅವರಿಂದ ಬಯಸಿದರು.
ಮೀನುಗಾರಿಕೆ, ಪ್ರವಾಸೋದ್ಯಮ, ಕೃಷಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರವನ್ನು ಯಾಚಿಸಿದರು. ಎಲ್ಲ ಇಲಾಖೆಗಳ ಬಗ್ಗೆ ಪೂರ್ವಭಾವಿ ಮಾಹಿತಿ ಪಡೆದು ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಅತ್ಯಂತ ಹಿಂದುಳಿದ ಕೊರಗರ ಅಭಿವೃದ್ಧಿಗೆ ಮುಖ್ಯವಾಗಿ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದರು. ಇದಲ್ಲದೇ ಸಮಾಜ ಕಲ್ಯಾಣ ಇಲಾಖೆಗಳು ಜಿಲ್ಲೆಯ ಹಿಂದುಳಿದವರ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹಾಗೂ ಸಿಂಧುತ್ವ ಪ್ರಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ತಮ್ಮ ಸಹಿಯಿಂದಾಗಿ ಬಾಕಿ ಉಳಿಯಬಾರದೆಂದು ಹೇಳಿದ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಸಭೆಯನ್ನು ಪ್ರತ್ಯೇಕವಾಗಿ ಹಾಗೂ ಸಮಗ್ರವಾಗಿ ನಡೆಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ರೇಷ್ಮೆ, ನಗರೋತ್ಥಾನ ಕಾರ್ಯಕ್ರಮ ಅನುಷ್ಠಾನದ ಮಾಹಿತಿಯನ್ನು ಪಡೆದರು. ಅದೇ ರೀತಿ ಅರಣ್ಯ ಇಲಾಖೆ ಬಗ್ಗೆ ಪ್ರತ್ಯೇಕ ಸಭೆ ನಡೆಸುವುದಾಗಿ ನುಡಿದರು.
ಪಶುಸಂಗೋಪನೆ ಇಲಾಖೆ, ಅಂಗವಿಕಲ ಕಲ್ಯಾಣ ಇಲಾಖೆಯ ಅಭಿವೃದ್ಧಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕನಗವಲ್ಲಿ ಅವರು ಉಪಸ್ಥಿತರಿದ್ದರು.
