ಮಂಗಳೂರು : ಉದ್ಯಮದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಮೂಲದ ಪನಾಮ ಕಾರ್ಪೊರೇಶನ್ ಭಾರತ ಅರ್ಥಿಕ ಸಮಾವೇಶ-2014ರ (ಇಂಡಿಯನ್ ಎಕಾನಮಿಕ್ ಸಮ್ಮಿಟ್) ಸಹ ಆತಿಥ್ಯ ವಹಿಸುವ ಗೌರವಕ್ಕೆ ಪಾತ್ರವಾಗಿದೆ ಎಂದು ಸಂಸ್ಥೆಯ ಚೆಯರ್ಮೆನ್ ವಿವೇಕ್ರಾಜ್ ತಿಳಿಸಿದ್ದಾರೆ.
ನಗರದ ಗೇಟ್ವೇ ಹೊಟೇಲ್ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ವಿಶ್ವ ಅರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಂ ) ಹಾಗೂ ಭಾರತೀಯ ಉದ್ಯಮಗಳ ಒಕ್ಕೂಟ ( ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ) ಆಯೋಜಿಸುತ್ತಿದ್ದು ನ. 5ರಿಂದ 7ರ ವರೆಗೆ ಹೊಸದಿಲ್ಲಿಯ ತಾಜ್ಮಹಲ್ ಹೊಟೇಲ್ನಲ್ಲಿ ಜರಗಲಿದೆ. ಅಲ್ಗ್ರೋ ಲಾಜಿಸ್ಟಿಕ್ಸ್ , ರಿಲಾಯನ್ಸ್ ಇಂಡಸ್ಟ್ರಿ, ಬಜಾಜ್, ಮಹೀಂದ್ರ ಆ್ಯಂಡ್ ಮಹೀಂದ್ರ ಸೇರಿದಂತೆ ದೇಶದ ಪ್ರತಿಷ್ಠಿತ ಉದ್ಯಮಗಳು ಈ ಸಮಾವೇಶದ ಸಹ ಅತಿಥ್ಯ ಸಮಿತಿಯಲ್ಲಿವೆ . ಪನಾಮ ಕಾರ್ಪೊರೇಶನ್ಗೆ ಆತಿಥ್ಯವನ್ನು ವಹಿಸಿಕೊಳ್ಳುವ ಅವಕಾಶ ದೊರೆತಿರುವುದು ಸಂಸ್ಥೆಗೆ ಹಾಗೂ ಮಂಗಳೂರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಹೇಳಿದರು.
ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರು. ಕೇಂದ್ರ ಅರ್ಥ ಸಚಿವರು, ದೇಶ ವಿದೇಶಗಳ ಪ್ರತಿಷ್ಠಿತ ಗಣ್ಯರು ಭಾಗವಹಿಸುವರು. ಸಮಾವೇಶ ಪನಾಮ ಕಾರ್ಪೊರೇಶನ್ಗೆ ವ್ಯವಹಾರ ವಿಸ್ತರಣೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿಡಲಿದೆ. ಇದರಿಂದಾಗುವ ಆಗುವ ಧನಾತ್ಮಕ ಫಲಿತಾಂಶಗಳು ಕಂಪೆನಿಯ ಪ್ರಗತಿ ಮೇಲೆ ಮಾತ್ರ ಪ್ರತಿಫಲಿತವಾಗುವುದಿಲ್ಲ . ಇದರ ಪ್ರಯೋಜನ ಕರ್ನಾಟಕ ಮತ್ತು ಮಂಗಳೂರಿಗೂ ಲಭ್ಯವಾಗಲಿದೆ.
ಜಾಗತಿಕ ಮಟ್ಟದಲ್ಲಿ ಅದಿರು ಹಾಗೂ ಖನಿಜ ವ್ಯವಹಾರಕ್ಕೆ ಇರುವ ವಿಪುಲ ಅವಕಾಶಗಳನ್ನು ಮನಗಂಡು 2006ರಲ್ಲಿ ಮಂಗಳೂರಿನಲ್ಲಿ ಪನಾಮ ಕಾರ್ಪೊರೇಶನ್ ಸಂಸ್ಥೆಯನ್ನು ಸ್ಥಾಪಿಸಿದೆ. ಮಂಗಳೂರು ಹಾಗೂ ಕರ್ನಾಟಕ ರಾಜ್ಯವನ್ನು ಅದಿರು ಹಾಗೂ ಖನಿಜಗಳ ವ್ಯವಹಾರದಲ್ಲಿ ಜಾಗತಿಕ ನಕಾಶೆಯಲ್ಲಿ ಗುರುತಿಸುವಂತೆ ಮಾಡುವುದು ನನ್ನ ಕನಸು ಆಗಿತ್ತು ಮತ್ತು ಪನಾಮ ಕಾರ್ಪೊರೇಶನ್ ಇದರಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಕೃಷಿ ಕ್ಷೇತ್ರಕ್ಕೂ ವ್ಯವಹಾರ ವಿಸ್ತರಣೆ – 013ರಲ್ಲಿ ಪನಾಮ ನೇಚರ್ಫ್ರೆಶ್ ಪ್ರೈ.ಲಿ. ಸ್ಥಾಪನೆ :
ಕೃಷಿ ಕ್ಷೇತ್ರದಲ್ಲೂ ತನ್ನ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ 2013ರಲ್ಲಿ ಪನಾಮ ಕಾರ್ಪೊರೇಶನ್ನ ಸಹಸಂಸ್ಥೆಯಾಗಿ ಪನಾಮ ನೇಚರ್ಫ್ರೆಶ್ ಪ್ರೈ.ಲಿ. ಸಂಸ್ಥೆ ಸ್ಥಾಪನೆ ಮಾಡಲಾಯಿತು. ಸಂಸ್ಥೆ ಚಿಕ್ಕಮಗಳೂರಿನಲ್ಲಿ ಗುತ್ತಿಗೆ ಆಧಾರದಲ್ಲಿ 2800 ಹೆ. ಭೂಮಿಯನ್ನು ರೈತರಿಂದ ಪಡೆದುಕೊಂಡು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಕೃಷಿ ವ್ಯವಹಾರವನ್ನು ಆರಂಭಿಸಿತು. ಪ್ರಸ್ತುತ ರಫ್ತುಗುಣಮಟ್ಟದ ಶುಂಠಿ ಹಾಗೂ ಬಟಾಟೆ ಕೃಷಿಯನ್ನು ಕೈಗೊಂಡಿದೆ. ಮುಂದಿನ 5 ವರ್ಷಗಳಲ್ಲಿ ಕೃಷಿಯನ್ನು 12,000 ಹೆಕ್ಟೇರ್ಗೆ ವಿಸ್ತರಿಸುವ ಹಾಗೂ 14 ವಿಧದ ಬೆಳೆಗಳನ್ನು ಬೆಳೆಸುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಏಶ್ಯಾದ ಅತೀ ದೊಡ್ಡ ಕೃಷಿ ಸಂಸ್ಥೆಯಾಗಿ ಮೂಡಿಬರುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ ಎಂದು ವಿವೇಕ್ರಾಜ್ ವಿವರಿಸಿದರು.
ನಟ ಶಾರುಖ್ ಖಾನ್ ಹಾಗೂ ಕ್ರೀಡಾಪಟು ಪ್ರಕಾಶ್ ಪಡುಕೋಣೆ ನನ್ನ ರೋಲ್ ಮಾಡೆಲ್ :
ಬಾಲಿವುಡ್ನ ಸೂಪಸ್ಸ್ಟಾರ್ ಶಾರುಖ್ಖಾನ್ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯ ಮೇರು ಆಟಗಾರನಾಗಿದ್ದ ಪ್ರಕಾಶ್ ಪಡುಕೋಣೆ ಅವರ ಸಾಧನೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಇಬ್ಬರು ಕೂಡ ಸಾಮಾನ್ಯ ಕುಟುಂಬದಿಂದ ಬಂದು ಸ್ವಪ್ರಯತ್ನದ ಮೂಲಕ ಸಾಧನೆಯಿಂದ ಎತ್ತರಕ್ಕೇರಿದವರು. ನನ್ನ ಪತ್ನಿ ಅಮೃತಾರಾಜ್ ಪ್ರೋತ್ಸಾಹ ಸಾಧನೆಗೆ ಶಕ್ತಿಯನ್ನು ಒದಗಿಸಿದೆ ಎಂದು ವಿವೇಕ್ರಾಜ್ ಹೇಳಿದರು.
ಗ್ಲೋಬಲ್ ಯಂಗ್ ಲೀಡರ್ ಜೊತೆಗೆ ಜಾಗತಿಕ ಮನ್ನಣೆ :
ಯಾವುದೇ ಅರ್ಥಿಕ ಅಥವಾ ಉದ್ಯಮ ಕುಟುಂಬದ ಹಿನ್ನೆಲೆ ಇಲ್ಲದ ನಾನು ಸ್ವಪ್ರಯತ್ನದಿಂದ ಕಟ್ಟಿರುವ ಪನಾಮ ಕಾರ್ಪೊರೇಶನ್ ಲಿಮಿಟೆಡ್ ಇಂದು ಉದ್ಯಮ ರಂಗದಲ್ಲಿ ಪ್ರತಿಷ್ಠಿತ ಹೆಸರು ಆಗಿ ಗುರುತಿಸಿಕೊಂಡಿದೆ. 2010ರಲ್ಲಿ ವರ್ಲ್ಡ್ ಎಕಾನಾಮಿಕ್ ಫೋರಂ ನನ್ನನ್ನು ಗ್ಲೋಬಲ್ ಯಂಗ್ ಲೀಡರ್ ಹಾಗೂ ಪನಾಮ ಕಾರ್ಪೊರೇಶನ್ನ್ನು ವಿಶ್ವದ 200 ಅಭಿವೃದ್ದಿ ಉದ್ಯಮಗಳಲ್ಲೊಂದಾಗಿ ಮನ್ನಣೆ ನೀಡಿದೆ. ಈ ಸ್ಥಾನವನ್ನು ಇಂದಿನವರೆಗೂ ಸಂಸ್ಥೆ ಕಾಯ್ದುಗೊಂಡಿದೆ ಎಂದು ವಿವೇಕ್ ರಾಜ್ ಮಾಹಿತಿಯಿತ್ತರು.