ಮಂಗಳೂರು,ಅ.30: ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೂರು ದಿನಗಳ ಸಾಧನೆಗಳ ಬಗ್ಗೆ ಮಾಹಿತಿ ಇರುವ “100 ಹೆಜ್ಜೆ” ಎಂಬ ಕಿರು ಪುಸ್ತಕವನ್ನು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅವರು ಗುರುವಾರ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಪ್ರತಾಪ್ಸಿಂಹ ನಾಯಕ್ ಅವರು, ಕಳೆದ ಅವಧಿಯಲ್ಲಿ ಸಂಸದ ನಳಿನ್ ಕುಮಾರ್ ಮಾಡಿದ್ದ ಸಾಧನೆಯನ್ನು ದಾಖಲಿಸಿ ಜನತೆಯ ಮುಂದೆ ಇಡದ ಕಾರಣ, ಪ್ರತಿಪಕ್ಷಗಳಿಗೆ ಅಪಪ್ರಚಾರ ಮಾಡಲು ಅವಕಾಶ ಕೊಟ್ಟಂತಾಗಿತ್ತು. ಈ ನಿಟ್ಟಿನಲ್ಲಿ ಈ ಬಾರಿ ಎಲ್ಲ ಮಾಹಿತಿ ಜನರ ಮುಂದಿಟ್ಟಿದ್ದು, ಮುಂದೆ ಪ್ರತಿ 100 ದಿನಕ್ಕೊಮ್ಮೆ ಇಂಥ ಪುಸ್ತಕ ಪ್ರಕಟಿಸಿ ನೀಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ಜನಧನ ಯೋಜನೆಯಲ್ಲಿ ಜಿಲ್ಲೆಯು ಶೇ.98ರಷ್ಟು ಸಾಧನೆ ಮಾಡಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸ್ವಚ್ಛ ಭಾರತ ಅಭಿಯಾನದಲ್ಲೂ ಮಹತ್ವದ ಸಾಧನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರವಾಸೋದ್ಯಮ ಮತ್ತು ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಸಂಸದರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡರಾದ ಸಂಸದ ನಳಿನ್ ಕುಮಾರ್ ಕಟೀಲ್, ಮೋನಪ್ಪ ಭಂಡಾರಿ, ರವಿಶಂಕರ ಮಿಜಾರ್, ಜಗದೀಶ ಅಧಿಕಾರಿ, ಸಂಜಯ ಪ್ರಭು, ಸಂಜೀವ ಮಠಂದೂರು, ಸತೀಶ್ ಪ್ರಭು, ಕಿಶೋರ್ ರೈ , ಸಂಜಯ್ ಪ್ರಭು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.