ಮಂಗಳೂರು : ನಗರದ ಪತ್ರಕರ್ತ ಮಿತ್ರರು ಹಾಗೂ ಅಹ್ವಾನಿತ ಗಣ್ಯರಿಗಾಗಿ ಬಹುನಿರೀಕ್ಷಿತ ಚಾಲಿಪೋಲಿಲು ತುಳು ಚಲನ ಚಿತ್ರದ ಪ್ರಿಮಿಯಾರ್ ಪ್ರದರ್ಶನ ಬುಧವಾರ ನಗರದ ಸಿಟಿ ಸೆಂಟರ್ನ ಸಿನಿಪೊಲಿಸ್ ಚಿತ್ರ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್, ತುಳುರಂಗ ಭೂಮಿಯ ಖ್ಯಾತ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಸೇರಿದಂತೆ ಚಿತ್ರ ತಂಡದ ಇತರ ಸದಸ್ಯರು ಮತ್ತು ನಗರದ ಪ್ರಸಿದ್ಧ ಗಣ್ಯರು ಪತ್ರಕರ್ತರ ಜೊತೆ ಸಿನಿಮಾ ವೀಕ್ಷಿಸಿದರು.
ತುಳು ಚಿತ್ರೋದ್ಯಮದಲ್ಲಿ ಹೆಚ್ಚು ಪ್ರಚಾರಗೊಂಡ ಚಿತ್ರಗಳಲ್ಲಿ ಚಾಲಿಪೋಲಿಲು ಒಂದು. ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರ. ಉತ್ತಮ ಹಾಸ್ಯ ಹಾಗೂ ಮನರಂಜನೆಯ ಜೊತೆಗೆ ತಪ್ಪು ದಾರಿಯಲ್ಲಿ ನಡೆಯುವ ಯುವ ಜನತೆಗೆ ಉತ್ತಮ ಸಂದೇಶವನ್ನು ಕೂಡ ಚಿತ್ರದಲ್ಲಿ ಕೊಡಲಾಗಿದೆ. ಸಮಾಜದಲ್ಲಿ ನಡೆಯುವ ಸಾಮಾಜಿಕ ಪಿಡುಗುಗಳ ಮೇಲೆ ಕೇಂದ್ರಿಕೃತಗೊಂಡು, ಸಾಗುವ ಚಿತ್ರದಲ್ಲಿ ಸಮಾಜಕ್ಕೆ ಅಮೂಲ್ಯ ಸಂದೇಶವನ್ನು ನೀಡುವುದರ ಜೊತೆಗೆ ಪ್ರೇಕ್ಷಕರಿಗೆ ಸಮಾನ ಪ್ರಮಾಣದ ಮನರಂಜನೆಯನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
ಚಿತ್ರದ ಮೊದಲಾರ್ಧದಲ್ಲಿ ಬರುವ ಮೂರು ಪ್ರಮುಖ ಪಾತ್ರಗಳು (ದೇವದಾಸ್ ಕಾಪಿಕಾಡ್ – ಪಾಂಡು, ನವೀನ್ ಪಡೀಲ್ – ದಾಮು, ಭೋಜರಾಜ್ ವಾಮಾಂಜೂರು – ಮಂಜು ) ಬಾಲ್ಯದಲ್ಲೇ ತಮ್ಮ ಮಕ್ಕಳಾಟಿಕೆ ಹಾಗೂ ನೆರೆಹೊರೆವರಿಗೆ ನೀಡುವ ಕಿರುಕುಳದಿಂದ ಪ್ರಖ್ಯಾತರಾಗಿ ಬಳಿಕ ಬಾಲ್ಯದಿಂದಲೂ ಸ್ನೇಹಿತರಾಗಿಯೇ ಬೆಳೆದು ದೊಡ್ಡವರಾದ ಮೇಲು ತಮ್ಮ ಒಡನಾಟವನ್ನು ಬಿಡದೆ ನಿರುದ್ಯೋಗಿಗಳಾಗಿದ್ದರೂ, ತಮ್ಮ ಮಾತಿನ ವರಸೆ ಹಾಗೂ ಇನ್ನಿತರ ಚಟುವಟಿಕೆಗಳ ಮೂಲಕ ತಪ್ಪು ದಾರಿಯಲ್ಲಿ ಹಣ ಸಂಪಾದಿಸುತ್ತಾ ದಿನ ಕಳೆಯುತ್ತಾರೆ. ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡುತ್ತಾ, ಸುಳ್ಳು, ವಂಚನೆಯಿಂದ ಹಣ ಸಂಪಾದಿಸುತ್ತಾ ದಿನ ಕಳೆಯುವ ಇವರು ಎಲ್ಲರಿಂದಲೂ ಚಾಲಿ ಪೋಲಿಲು ಎಂದು ಕರೆಯಲ್ಪಡುತ್ತಾರೆ. ಅದರೂ ಕಷ್ಟದಲ್ಲಿದ್ದವರಿಗೆ ತಕ್ಷಣ ಸ್ಪಂದಿಸುವ ಮಾನವೀಯ ಗುಣಗಳನ್ನು ಹೊಂದಿರುವ ಇವರು ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಬಹುದೊಡ್ಡ ಸಮಸೈಗೆ ಸಿಲುಕಿ ಸಮಾಜದ ಅಪವಾದಕ್ಕೆ ಬಲಿಯಾಗುತ್ತಾರೆ.
ಈ ಸಮಸೈಯನ್ನು ಬಗೆಹರಿಸಿ, ಅಪವಾದದಿಂದ ಹೊರಗೆ ಬರಲು ಇವರು ಮಾಡುವ ಪ್ರಯತ್ನ, ಅಪವಾದದಿಂದ ಹೇಗೆ ಹೊರ ಬರುತ್ತಾರೆ, ಈ ಸಂದರ್ಭದಲ್ಲಿ ಇವರು ಅನುಭವಿಸುವ ಕಷ್ಟ ನಷ್ಟ ಇದರ ಜೊತೆಗೆ ಪ್ರೀತಿ ಪ್ರೇಮ, ಹಾಡು, ಫೈಟ್,ನಿರಂತರ ಹಾಸ್ಯ, ಇವ್ವೆಲ್ಲವನ್ನು ದ್ವಿತೀಯಾರ್ಧದಲ್ಲಿ ತೋರಿಸಲಾಗಿದೆ.
ಬಹು ನಿರೀಕ್ಷೆಯ ‘ಚಾಲಿಪೋಲಿಲು – ಅಕ್ಟೋಬರ್ 31ಕ್ಕೆ ತೆರೆಗೆ…
ತುಳುಚಿತ್ರರಂಗದಲ್ಲಿ ವ್ಯಾಪಕ ಕುತೂಹಲ ಕೆರಳಿಸಿರುವ, ತುಳು ಅಭಿಮಾನಿಗಳ ಬಹು ನಿರೀಕ್ಷೆಯ ‘ಚಾಲಿಪೋಲಿಲು’ ಸಿನಿಮಾ ಅಕ್ಟೋಬರ್ 31ಕ್ಕೆ ತೆರೆಗೆ ಬರಲಿದೆ. ಮಂಗಳೂರಿನಲ್ಲಿ ಜ್ಯೋತಿ, ಭಾರತ್ ಮಾಲ್ನಲ್ಲಿ ಬಿಗ್ ಸಿನಿಮಾ, ಸಿಟಿಸೆಂಟರ್ನಲ್ಲಿ ಸಿನಿಪೊಲಿಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿ.ರೋಡ್ನಲ್ಲಿ ನಕ್ಷತ್ರಾ ಬೆಳ್ತಂಗಡಿಯಲ್ಲಿ ಭಾರತ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಮಣಿಪಾಲದಲ್ಲಿ ಇನೋಕ್ಸ್, ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ‘ಚಾಲಿಪೋಲಿಲು’ ಸಿನಿಮಾ ಬಿಡುಗಡೆಗೊಳ್ಳಲಿದೆ.
ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ, ಜಯಕಿರಣ ಫಿಲಂಸ್ನ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ ‘ಚಾಲಿಪೋಲಿಲು’ ಸಿನಿಮಾದಲ್ಲಿ ತುಳುರಂಗ ಭೂಮಿಯ ಖ್ಯಾತ ಕಲಾವಿದರು ನಟಿಸಿದ್ದಾರೆ .ತುಳು ರಂಗಭೂಮಿಯ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ತಂದ ‘ಚಾಲಿಪೋಲಿಲು’ ತುಳು ಸಿನಿಮಾ ಸಮಸ್ತ ತುಳು ಬಾಂಧವರಲ್ಲಿ ಕುತೂಹಲ ಕೆರಳಿಸಲು ಕಾರಣ ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್ ಹಾಗೂ ಭೋಜರಾಜ್ ವಾಮಂಜೂರು ನಾಯಕರಾಗಿ ನಟಿಸಿರುವುದು. ಇವರ ಜೊತೆಗೆ ತುಳು ರಂಗಭೂಮಿಯ ಇತರ ಪ್ರತಿಭೆಗಳಾದ ಅರವಿಂದ್ ಬೋಳಾರ್, ಸುಂದರ ರೈ ಮಂದಾರ, ತುಳು ಹಾಗೂ ಕನ್ನಡ ನಟ ರಾಘವೇಂದ್ರ ರೈ ಮೊದಲಾದ ಪ್ರತಿಭೆಗಳು ‘ಚಾಲಿಪೋಲಿಲು’ ಸಿನಿಮಾದಲ್ಲಿ ಜೊತೆಯಾಗಿದ್ದಾರೆ.
ಕನ್ನಡದ ಖ್ಯಾತ ಪೋಷಕ ನಟಿ. ಮುಂಗಾರು ಮಳೆ ಖ್ಯಾತಿಯ ಪದ್ಮಜಾರಾಮ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಿದ ಮೊದಲ ತುಳು ಸಿನಿಮಾವೂ ಇದಾಗಿದೆ. ತುಳು ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಾಯಕ ಅರ್ಜುನ್ ಕಾಪಿಕಾಡ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸ್ಥಳೀಯ ಪ್ರತಿಭೆ ಸುರೇಂದ್ರ ಬಂಟ್ವಾಳ ಅವರ ವಿಭಿನ್ನ ಪಾತ್ರವಿದೆ.
ಒಂದೇ ಸಿನಿಮಾದಲ್ಲಿ ದಕ್ಷಿಣ ಕನ್ನಡ ಮೂಲದ ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಹಾಗೂ ಮಣಿಕಾಂತ್ ಕದ್ರಿ ಕೆಲಸ ಮಾಡಿದ್ದಾರೆ. ತಾಂತ್ರಿಕ ನಿರ್ದೇಶಕರಾಗಿ ಮಾಧವ ಶೆಟ್ಟಿ ಸುರತ್ಕಲ್ ದುಡಿದಿದ್ದಾರೆ. 100ಕ್ಕೆ 100ಶೇಕಡಾ ಮನರಂಜನೆಯ ಅಪ್ಪಟ ತುಳು ಸಿನಿಮಾವಾಗಿದ್ದು, ಸ್ಥಳೀಯ ರಂಗಪ್ರತಿಭೆಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.
ತುಳುಚಿತ್ರರಂಗದಲ್ಲಿ ಮೊದಲ ಬಾರಿಗೆ ಎರಡು ಕ್ಯಾಮರಾ ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರರಂಗದ ಪ್ರತಿಭಾವಂತ ಕ್ಯಾಮರಾಮ್ಯಾನ್ ಉತ್ಪಲ್ ನಾಯನಾರ್ ಅವರ ಛಾಯಾಗ್ರಹಣದ ಮೊದಲ ತುಳು ಸಿನಿಮಾ ಇದಾಗಿದೆ.
ಚೇತನ್ ರೈ ಮಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ದಯಾನಂದ ಕುಲಾಲ್, ಪ್ರದೀಪ್ ಆಳ್ವ, ರವಿ ಸುರತ್ಕಲ್, ಸರೋಜಿನಿ ಶೆಟ್ಟಿ, ಶೋಭಾ ರೈ, ಸುಮಿತ್ರಾ ರೈ, , ತಿಮ್ಮಪ್ಪ ಕುಲಾಲ್, ಮಂಗೇಶ್ ಭಟ್, ಪಾಂಡುರಂಗ ಅಡ್ಯಾರ್, ಕರುಣಾಕರ ಸರಿಪಲ್ಲ, ಸುರೇಶ್ ಕುಲಾಲ್, ಸೋಮು ಜೋಗಟ್ಟೆ., ಸುಜಾತ, ವಿದ್ಯಾಶ್ರೀ, ರಶ್ಮಿಕಾ, ಪಾರ್ವತಿ ಹಾಗೂ ಉಮಾನಾಥ್ ಕೋಟ್ಯಾನ್, ಗಿರೀಶ್ ಶೆಟ್ಟಿ ಪೆರ್ಮುದೆ, ಕರ್ನೂರ್ ಮೋಹನ್ ರೈ ಮತ್ತು ಐಟಂ ಸಾಂಗ್ನಲ್ಲಿ ವಿದೇಶಿ ನೃತ್ಯ ಗಾರ್ತಿಯರು ನಟಿಸಿದ್ದಾರೆ. ಎರಡು ಗಂಟೆ 23 ನಿಮಿಷದ ಸಂಪೂರ್ಣ ಕಾಮಿಡಿ ಚಿತ್ರವಾಗಿದ್ದರೂ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಥೆ ಹೊಂದಿದೆ. ತುಳು ಚಿತ್ರರಂಗ ದಲ್ಲಿ ಚಾಲಿಪೋಲಿಲು ಹೊಸ ಅಧ್ಯಾಯ ಬರೆಯಲಿದೆ ಎಂದು ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.