ಮಂಗಳೂರು,ಅ.29: ಖಾಸಗಿ ಅಸ್ಪತ್ರೆಗಳನ್ನು ನಿಯಂತ್ರಿಸಲು ಒತ್ತಾಯಿಸಿ ಹಾಗೂ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಆಗ್ರಹಿಸಿ ಡಿವೈಎಫ್ಐ ವತಿಯಿಂದ ಬುಧವಾರ ನಗರದ ಪಳ್ನೀರ್ ಯುನಿಟಿ ಆಸ್ಪತ್ರೆಯ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥ ನಡೆಯಿತು.
ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಖಾಸಗಿ ಅಸ್ಪತ್ರೆ ವೈದ್ಯರು ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿದ್ದಾರೆ. ಅನಗತ್ಯ ಪರೀಕ್ಷೆ, ಚಿಕಿತ್ಸೆಗಳನ್ನು ನಡೆಸುತ್ತಾರೆ ಎಂಬ ವ್ಯಾಪಕ ದೂರು ಕೇಳಿ ಬರುತ್ತಿದೆ. ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳು ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ರೋಗಿಗಳಿಗೆ ಕಾಣುವ ಸ್ಥಳದಲ್ಲಿ ಚಿಕಿತ್ಸೆ ದರಪಟ್ಟಿ ಪ್ರಕಟಿಸುವುದು, ರೋಗಿಗಳ ಕಡೆಯವರಿಗೆ ದರಪಟ್ಟಿ ಚಿಕಿತ್ಸೆಗೆ ಮೊದಲೇ ನೀಡುವುದು, ಬಿಲ್ ನ ಸಂಪೂರ್ಣ ಮೊತ್ತ ಪಾವತಿಸಲು ಸಾಧ್ಯವಾಗದ ರೋಗಿಗಳನ್ನು ಅಕ್ರಮವಾಗಿ ಬಂಧನದಲ್ಲಿಡುವುದು, ಶವಗಳನ್ನು ಬಿಟ್ಟು ಕೊಡದಿರುವುದು ಸೇರಿದಂತೆ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಮತ್ತು ಸಮಾನ ಚಿಕಿತ್ಸೆಗೆ ಭಿನ್ನ ಆಸ್ಪತ್ರೆಗಳಲ್ಲಿ ಭಿನ್ನದರಗಳನ್ನು ವಿಧಿಸುವುದು ಕಂಡುಬರುತ್ತಿದೆ. ದರ ನಿಗದಿಗೆ ಸಂಭಧಿಸಿ ಯಾವುದೇ ಮಾನದಂಡವನ್ನು ವೈದ್ಯರಾಗಲಿ, ಆಸ್ಪತ್ರೆಗಳ ಆಡಳಿತವಾಗಲಿ ಪಾಲಿಸುತ್ತಿಲ್ಲ, ಸಾರಿಗೆ ಶಿಕ್ಷಣದಂತೆ ಆರೋಗ್ಯ ಕ್ಷೇತ್ರವೂ ಸೇವಾ ಕ್ಷೇತ್ರ ಅಗಿರುವುದರಿಂದ ಜಿಲ್ಲಾಡಳಿತವು ದರ ನಿಗದಿಗೆ ಸಂಬಂಧಪಟ್ಟಂತೆ ಮಧ್ಯ ಪ್ರವೇಶವನ್ನು ಮಾಡಬೇಕು ಹಾಗೂ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಅಗ್ರಹಿಸಿದರು.
ಇನ್ನು ಸರಕಾರಿ ಆರೋಗ್ಯ ಸೇವೆ ಜಿಲ್ಲೆಯಲ್ಲಿ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ. ಸಮುದಾಯ ಆಸ್ಪತ್ರೆಗಳು ಸರಾಸರಿಗಿಂತ ತೀರಾ ಕೆಳಮಟ್ಟದಲ್ಲಿದೆ. ತಾಲೂಕು, ಜಿಲ್ಲಾ ಅಸ್ಪತ್ರೆಗಳಿಗೆ ಜನ ಚಿಕಿತ್ಸೆಗೆ ತೆರೆಳಲು ಭಯಪಡುವಂತಾಗಿದೆ.
ಐದಾರು ಜಿಲ್ಲೆಗಳ ಜನಸಾಮಾನ್ಯರ ಪಾಲಿಗೆ ಏಕೈಕ ದೊಡ್ಡಾಆಸ್ಪತ್ರೆ ವೆನ್ಲಾಕ್ ತುರ್ತು ಚಿಕಿತ್ಸಾ ಘಟಕ ಸಹಿತ ಮೂಲಭೂತ ಸೌಲಭ್ಯಗಳಿಲ್ಲದೆ ಬಡರೋಗಿಗಳ ಪಾಲಿಗೆ ನರಕದಂತಾಗಿದೆ.
ಕೆಳಹಂತದ ಆಸ್ಪತ್ರೆಗಳಲ್ಲಂತೂ ಔಷಧಿ, ಸಿಬ್ಬಂದಿ ಇಲ್ಲದೆ ಜನ ಪರದಾಡುವಂತಾಗಿದೆ. ಜಿಲ್ಲೆಯ ಸಾರ್ವಜನಿಕ ಆರೋಗ್ಯ ರಂಗದಲ್ಲಿ ಎಲ್ಲಾ ಹಂತಗಳಲ್ಲಿ ಶೇಕಡಾ 45 ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಇಂತಹ ಕೊರತೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು.
ದ.ಕ ಜಿಲ್ಲೆಯ ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳನ್ನು ಬಳಸಿ ಸರಕಾರಿ ಮೆಡಿಕಲ್ ಕಾಲೇಜು ತೆರೆಯಲು ಎಲ್ಲಾ ಅವಕಾಶಗಳಿಗೆ ಆದರೆ ಸರಕಾರ ಖಾಸಗಿ ಮೆಡಿಕಲ್ ಕಾಲೇಜು ತೆರೆಯಲು ಅಸಕ್ತವಾಗಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮುನೀರ್ ಆಗ್ರಹಿಸಿದರು.