ಮಂಗಳೂರು: ಹತ್ತನೇ ವರ್ಷದ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಸಮಾರಂಭ ಇದೇ ಬರುವ ನವೆಂಬರ್ 11ರಂದು ಸಂಜೆ ಐದು ಗಂಟಗೆ ನಗರದ ಡಾನ್ ಬಾಸ್ಕೋ ಹಾಲ್ನಲ್ಲಿ ಜರಗಲಿದ್ದು, ಈ ಬಾರಿಯ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ `ಉಡುಪಿ ಜಿಲ್ಲೆಯ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ತಿಳಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಸಂಸ್ಥೆ ಸ್ಥಾಪನೆಯಾದ 17 ವರ್ಷಗಳಲ್ಲಿ ಸಾವಿರಾರು ಬುದ್ಧಿಮಾಂದ್ಯ ಮಕ್ಕಳನ್ನು ತರಬೇತುಗೊಳಿಸಿ, ಅವರ ಜೀವನಕ್ಕೆ ಬೆಳಕು ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇಂಥ ಸಂಸ್ಥೆಗೆ ಪ್ರಶಸ್ತಿ ನೀಡಲು ಹೆಮ್ಮೆಯಾಗುತ್ತಿದೆ ಎಂದರು.
`2007 ಮತ್ತು 2013ರಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಬುದ್ಧಿ ಮಾಂದ್ಯ ಮಕ್ಕಳು ಸಾಧನೆ ಮಾಡಿದ್ದಾರೆ. ಮಾಂದ್ಯ ಮಕ್ಕಳನ್ನು ತರಬೇತುಗೊಳಿಸಿ ಎಷ್ಟು ಎತ್ತರಕ್ಕೆ ಕೊಂಡೊಯ್ಯ ಬಹುದು ಎಂಬುವುದರ ಮೂಲಕ ಸಂಸ್ಥೆ ತಮ್ಮ ಸಾಮಾರ್ಥ್ಯವನ್ನು ಸಾಬೀತುಪಡಿಸಿದೆ. ಪ್ರಸ್ತುತ ಸಂಸ್ಥೆಯಲ್ಲಿ 160 ಮಕ್ಕಳು ತರಬೇತಿ ಪಡೆಯುತ್ತಿದ್ದು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಂಡಿದ್ದಾರೆ’ ಆಟೋಟ, ನೃತ್ಯಗಳಲ್ಲೂ ತೊಡಗಿಸಿಕೊಂಡಿರುವ ಈ ಸಂಸ್ಥೆಯನ್ನು ಕೆಥೋಲಿಕ್ ಸಭಾ ಉಡುಪಿ ಹಾಗೂ ಮಂಗಳೂರು ಜಂಟಿಯಾಗಿ ನಡೆಸುತ್ತಿದೆ ಎಂದು ಕ್ಯಾಸ್ಟಲಿನೋ ವಿವರಿಸಿದರು.
ಮಂಗಳೂರು ಧರ್ಮಾಧ್ಯಕ್ಷರಾದ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ರಾಜ್ಯ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕ ಜೆ.ಆರ್.ಲೋಬೊ, ಐವನ್ ಡಿಸೋಜ, ಡಾ.ಎಂ.ಮೋಹನ್ ಆಳ್ವ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ವೆಲೆನ್ಸಿಯಾ ಚರ್ಚ್ನ ಫಾ.ಜೇಮ್ಸ್ ಡಿಸೋಜ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಲಿಯಂ ಮಿನೇಜಸ್, ರೋಹನ್ ಮೊಂತೇರೋ, ಡಾ.ಬಿ.ಜೆ.ಸುವರ್ಣ, ಎಲಿಯಾಸ್ ಫೆರ್ನಾಂಡೀಸ್, ಸಿ.ಜಿ.ಪಿಂಟೋ, ಶ್ರೀಕರ ಪ್ರಭು, ರಾಮಕೃಷ್ಣ ಆರ್. ಭಾಗವಹಿಸಿದ್ದರು ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ.ಬಿ.ಜೆ.ಸುವರ್ಣ, ಎಲಿಯಾಸ್ ಫೆರ್ನಾಂಡೀಸ್, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿ’ಕುನ್ಹ, ಸುನೀಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.