ಮಂಗಳೂರು, ಅ.26: ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ಉರ್ವದಲ್ಲಿ ಡಿಸೆಂಬರ್ 12ರಿಂದ 14ರವರೆಗೆ ನಡೆಯಲಿರುವ ವಿಶ್ವ ತುಳುವೆರೆ ಪರ್ಬದ ‘ಪುಂಡಿ ಪಣವು’ ಕೂಪನ್ಗಳ ಬಿಡುಗಡೆಯನ್ನು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಶನಿವಾರ ಬಿಡುಗಡೆಗೊಳಿಸಿದರು.
ಉರ್ವದ ವಿಶ್ವ ತುಳುವೆರೆ ಪರ್ಬದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಲಾ 100 ರೂ.ಗಳ ಕೂಪನ್ಗಳನ್ನು 50 ಹಾಗೂ 100ರ ಪುಸ್ತಕವನ್ನು ಬಿಡುಗಡೆಗೊಳಿಸಿ 1,000 ಕೂಪನ್ಗಳನ್ನು (ಒಂದು ಲಕ್ಷ ರೂ. ವೌಲ್ಯ) ಪ್ರಥಮವಾಗಿ ಖರೀದಿಸಿದರು. ಈ ಸಂದರ್ಭ ಮಾತನಾಡಿದ ಅವರು, ತುಳುನಾಡು ರಾಜ್ಯದಲ್ಲೇ ಅತ್ಯಂತ ಮಹತ್ವವನ್ನು ಪಡೆದಿರುವ ಜಿಲ್ಲೆಯಾಗಿದ್ದು, ಅತೀ ಹೆಚ್ಚು ತೆರಿಗೆ ಪಾವತಿಸುವ ಜಿಲ್ಲೆಯೂ ಆಗಿದೆ. ನಮ್ಮ ತೆರಿಗೆ ಹಣ ನಮ್ಮ ರಸ್ತೆಗಳಿಗೆ ಹೆಚ್ಚಿನ ರೀತಿಯಲ್ಲಿ ವಿನಿಯೋಗವಾದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಅವರು ಹೇಳಿದರು.
ತುಳುವಿನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸುವಲ್ಲಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕು ಎಂದು ಕರೆ ನೀಡಿದ ಅವರು, ತುಳುವಿನ ಬಗ್ಗೆ ಮಹತ್ವವನ್ನು ಸಾರುವ ತುಳುವೆರೆ ಪರ್ಬ ಅರ್ಥಪೂರ್ಣ ಎಂದವರು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಪಾಲ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಾರ್ಪೊರೇಟರ್ ರಾಧಾಕೃಷ್ಣ, ಎಂ.ಬಿ.ಪುರಾಣಿಕ್ ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಶಿಧರ ಶೆಟ್ಟಿ ವಂದಿಸಿದರು.