ಮಂಗಳೂರು : ಅಮೇರಿಕಾದ ಲಾಸ್ ವೇಗಾಸ್ ನಲ್ಲಿ ಅ.17 ರಿಂದ 20 ರವರೆಗೆ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದ ಮೂಲ್ಕಿ ಠಾಣಾ ಪೊಲೀಸ್ ಸಿಬ್ಬಂದಿ ವಿಜಯ ಕಾಂಚನ್ ಮತ್ತು ಕಾರ್ಕಳ ಸಮೀಪದ ಬೋಳ ನಿವಾಸಿ ಅಕ್ಷತಾ ಪೂಜಾರಿ ಅವರಿಗೆ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ವತಿಯಿಂದ ಗುರುವಾರ ಬಜ್ಪೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಲಾಸ್ ವೇಗಸ್ನಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ವಿಜಯ್ ಕಾಂಚನ್ ಹಾಗೂ ಅಕ್ಷತಾ ಅವರು ಬೆಂಚ್ ಪ್ರೆಸ್, ಡೆಡ್ ಲಿಫ್ಟ್, ಪವರ್ ಲಿಫ್ಟಿಂಗ್ ನಲ್ಲಿ ತಲಾ ಎರಡೆರಡು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಅದ್ವಿತೀಯ ಸಾಧನೆಗೈದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸ್ವಾಗತದ ಬಳಿಕ ಇಬ್ಬರನ್ನೂ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಈ ಸಂದರ್ಭ ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳೂರು ಮೇಯರ್ ಮಹಾಬಲ ಮಾರ್ಲ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಈಶ್ವರ್ ಕಟೀಲ್, ಪೊಲೀಸ್ ಅಧಿಕಾರಿ ರವಿಕುಮಾರ್, ಸತ್ಯಜಿತ್ ಸುರತ್ಕಲ್, ಸತೀಶ್ ಕುದ್ರೋಳಿ, ಬಜಪೆ ಠಾಣಾಧಿಕಾರಿ ನರಸಿಂಹ ಮೂರ್ತಿ, ಮುಲ್ಕಿ ಠಾಣಾಧಿಕಾರಿ ರಾಮಚಂದ್ರ ನಾಯಕ್ ಯುಗಪುರುಷದ ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಜನಾರ್ದನ ಕಿಲೆಂಜೂರು, ಭಾಸ್ಕರ ಪೂಜಾರಿ, ಆದರ್ಶ ಶೆಟ್ಟಿ ಎಕ್ಕಾರು, ಕೇಶವ ಕರ್ಕೆರಾ, ಪ್ರತೀಕ್ ಶೆಟ್ಟಿ , ಲೋಕೇಶ್ ಶೆಟ್ಟಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.