ವರದಿ : ಈಶ್ವರ ಎಂ. ಐಲ್
ಮುಂಬಯಿ : ಬಂಟರ ಸಂಘ ಮುಂಬಯಿ, ಇದರ 86ನೇ ವಾರ್ಷಿಕ ಮಹಾಸಭೆಯು ಸೆ. 19 ರಂದು ಕುರ್ಲಾ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ್ದು ಖ್ಯಾತ ಉದ್ಯಮಿ, ಸಮಾಜ ಸೇವಕ ಕರ್ನಿರೆ ವಿಶ್ವನಾಥ ಶೆಟ್ಟಿ ಯವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಂಘದ ಉಪಾಧ್ಯಕ್ಷರಾಗಿದ್ದ ಇವರು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷರಾಗಿ ಸಂಘದ ವಿವಿಧ ಯೋಜನೆಗಳ ಯಶಸ್ವಿಗೆ ಇವರ ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ.
ಮೂಲ್ಕಿ ಸಮೀಪದ ಕರ್ನಿರೆಯವರಾದ ಇವರು ಬೋಳ ನಂದಬೆಟ್ಟು ಸುಂದರ ಶೆಟ್ಟಿ ಹಾಗೂ ಕರ್ನಿರೆ ಗಿರಿಜಾ ಶೆಟ್ಟಿಯವರ ಸುಪುತ್ರ. ಕರ್ನಿರೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸೈಂಟ್ ಪಾಲ್ಸ್ ಹೈಸ್ಕೂನಲ್ಲಿ ಹೈಸ್ಕೂಲು ಶಿಕ್ಷಣ, ಪಲಿಮಾರು ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ. ನಂತರ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಪದವಿಯನ್ನು ಪಡೆದ ಕರ್ನಿರೆ ವಿಶ್ವನಾಥ ಶೆಟ್ಟಿ ಯವರು ಕಾಲೇಜು ದಿನಗಳಲ್ಲಿ ನಾಯಕತ್ವದ ಗುಣವನ್ನು ಹೊಂದಿದ್ದು, ತನ್ನ ಬಹುಮುಖ ಪ್ರತಿಭೆಯಿಂದ ಕ್ರೀಡಾ ಕ್ಷೇತ್ರದಲ್ಲು ಹಲವಾರು ಪ್ರಶಸ್ತಿಗಳನ್ನು ಗಳಿಸಿ ತನ್ನ ಶಾಲಾ, ಕಾಲೇಜಿಗೆ ಕೀರ್ತಿಯನ್ನು ತಂದರು.
ನಂತರ ಮುಂಬಯಿಗಾಗಮಿಸಿ ಹೋಟೇಲು ಉದ್ಯಮವನ್ನು ಪ್ರಾರಂಭಿಸಿದ ಇವರು ಮುಂಬಯಿ ಮಾತ್ರವಲ್ಲದೆ, ಮಂಗಳೂರು, ಬೆಂಗಳೂರು ಮುಂತಾದೆಡೆ ತನ್ನ ಉದ್ಯಮವನ್ನು ವಿಸ್ತರಿಸಿ ಯಶಸ್ವಿ ಹೋಟೇಲು ಉದ್ಯಮಿ ಎಂದೆನಿಸಿಕೊಂಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬಂಟದ ಸಂಘದಲ್ಲಿ ದುಡಿಯುತ್ತಿರುವ ಕರ್ನಿರೆಯವರು ಸಂಘದ ಸದಸ್ಯ ನೋಂದಣಿಯ ಕಾರ್ಯಧ್ಯಕ್ಷರಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ, ಸಂಘದ ಅತ್ಯತ್ತಮ ಕಾರ್ಯಕರ್ತರಾಗಿ ಸಂಘದ ಚಿನ್ನದ ಪದಕ ಪುರಸ್ಕೃತರಾಗಿ ’ಚಿನ್ನದ ಹುಡುಗ’ ಎಂದೆನಿಸಿದರು. ಇವರ ಸೇವೆಯನ್ನು ಗುರುತಿಸಿದ ಸಂಘವು ಇದುವರೆಗೆ 17 ಚಿನ್ನದ ಪದಕವನ್ನು ಪದಕವನ್ನು ಪಡೆದು ಸಂಘದಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಮಂಗಳೂರಿನ ಪಡೀಲ್ ಸಮೀಪದ ಪೆರ್ಲ ಬಾಲಕೃಷ್ಣ ನಾಯ್ಕ್ ಮತ್ತು ನಡುಹಿತ್ಲು ಸುಮತಿ ನಾಯ್ಕ್ ಅವರ ಪುತ್ರಿ ಲತಾ ವಿ. ಶೆಟ್ಟಿ ಇವರ ಧರ್ಮಪತ್ನಿ, ಮಕ್ಕಳಾದ ರಿಶಿಕಾ, ವೈಶ್ಣವಿ ಮತ್ತು ಮಹರ್ಶಿ ಇವರು ಪ್ರತಿಭಾವಂತ ವಿದ್ಯಾರ್ಥಿಗಳು.
ವಸಾಯಿ ಹೋಟೇಲು ಅಶೋಷಿಯೇಶನ್ ನ ಅಧ್ಯಕ್ಷರಾಗಿ, ತುಳುನಾಡ ಬಂಟ್ಸ್ ವಸಾಯಿ ಇದರ ಸ್ಥಾಪಕ ಅಧ್ಯಕ್ಷರಾಗಿ ಮಾತ್ರವಲ್ಲದೆ ಕೆಲವು ಧಾರ್ಮಿಕ ಹಾಗೂ ಶೈಕ್ಷಣಿಕ ಸಂಘಟನೆಗಳ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ಜನಪ್ರಿಯರಾಗಿದ್ದಾರೆ. ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ ದುಡಿಯುತ್ತಿರುವ ಕರ್ನಿಗೆ ಗ್ರಾಮದ ಶಾಲೆಗಳಲ್ಲಿ ಓದುತ್ತಿರುವ 160 ಕ್ಕೂ ಅಧಿಕ ವಿದ್ಯಾರ್ಥಿಗಳಿಗಳನ್ನು ದತ್ತು ಸ್ವೀಕರಿಸಿದ ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರಕಿದೆ.
ಬಂಟರ ಸಂಘ ಮುಂಬಯಿಯ 27ನೆಯ ನೂತನ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಯವರಿಗೆ ಶುಭ ಹಾರೈಕೆ.