ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ದೀಪಾವಳಿ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ 5000 ವಿಧವೆಯರಿಗೆ ಪೂಜೆಯಲ್ಲಿ ಪಾಲ್ಗೊಳಲು ಅವಕಾಶ ನೀಡಲಾಗಿದ್ದು, ಅ.23 ರಂದು ಬೆಳಗ್ಗೆ 10 ಗಂಟೆಗೆ ಬೆಳ್ಳಿ ರಥದಲ್ಲಿ ಲಕ್ಷ್ಮೀ ಮತ್ತು ವಿಷ್ಣು ದೇವರ ಮೂರ್ತಿಗಳನ್ನಿರಿಸಿ ಅದರಲ್ಲಿ ಪತಿ ಕಳಕೊಂಡ ಮಹಿಳಾ ಅರ್ಚಕಿಯರು ಪೂಜೆಯನ್ನು ಮಾಡುತ್ತಾರೆ. ಈ ರಥವನ್ನು ವಿಧವೆಯರು ಎಳೆದು ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶಮಾಡಿಕೊಡಲಾಗಿದೆ ಎಂದು ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಶನಿವಾರ ಶ್ರೀಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಭಾಗದಿಂದ ಆಗಮಿಸುವ ಪತಿ ಕಳೆದುಕೊಂಡ ಪತ್ನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಬೆಳಗ್ಗೆ 9 ಗಂಟೆಗೆ ಮಹಿಳೆಯರು ತಮ್ಮ ಹೆಸರನ್ನು ನೊಂದಾಯಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪತಿ ಕಳಕೊಂಡ ಮಹಿಳೆರಿಗೆ ಸೀರೆ, ರವಿಕೆ ಕಣ, ಕುಂಕುಮದ ಕರಡಿಗೆ ಮತ್ತು ಒಂದು ರೂ. ನಾಣ್ಯವನ್ನು ನೀಡಲಾಗುವುದು. ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ವಿಧವೆಯರ ಮೇಲಿರುವ ಪೂರ್ವಾಗ್ರಹ ಪೀಡಿತ ಧೋರಣೆ ಬಿಟ್ಟು ಬಿಡುವಂತೆ ಮಾಡುವುದೇ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಇತರ ಮಹಿಳೆಯರೂ ಭಾಗವಹಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಜನಾರ್ದನ ಪೂಜಾರಿ ತಿಳಿಸಿದರು.
ಇತ್ತೀಚೆಗಷ್ಟೇ ಜನಾರ್ದನ ಪೂಜಾರಿಯವರು ಕುದ್ರೋಳಿ ಕ್ಷೇತ್ರದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಇಬ್ಬರು ವಿಧವೆಯರನ್ನು ಅರ್ಚಕಿಯರಾಗಿ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಕ್ರಾಂತಿಗಳ ಮುಖೇನ ಈಗಾಗಲೇ ಜಗತ್ಪ್ರಸಿದ್ಧವಾಗಿರುವ ಕ್ಷೇತ್ರದಲ್ಲಿ ದಲಿತ ಸಮುದಾಯದ ವಿಧವಾ ಅರ್ಚಕಿಯರಿಬ್ಬರನ್ನು ನೇಮಕ ಮಾಡುವುದರೊಂದಿಗೆ ಕ್ರಾಂತಿಗೆ ನಾಂದಿ ಹಾಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ನವೀಕರಣ ಸಮಿತಿಯ ಸದಸ್ಯರಾದ ಡಾ.ಬಿ.ಜಿ.ಸುವರ್ಣ, , ರವಿಶಂಕರ್ ಮಿಜಾರ್, ಹರಿಕೃಷ್ಣ ಬಂಟ್ವಾಳ, ಶೇಖರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.