ಮಂಗಳೂರು,ಅ.17: ವಿಟ್ಲದಲ್ಲಿ ಡಿಸಿಐಬಿ ಪೊಲೀಸರಿಂದ ಬಂಧನಕ್ಕೊಳಗಾದ ದರೋಡೆಕೋರರು ತಿಂಗಳ ಹಿಂದೆ ಡಾನ್ ಹಮೀದ್ ಕೊಲೆ ಆರೋಪಿ ಬಿಪಿನ್ ರೈ ಮನೆಯನ್ನು ಲೂಟಿಗೈದು ಆತನನ್ನು ಹತ್ಯೆ ನಡೆಸುವ ಹುನ್ನಾರ ನಡೆಸಿದ್ದು, ವಿಚಿತ್ರವೆಂದರೆ ಕೃತ್ಯ ನಡೆಸಲು ಹಮೀದ್ ಕೊಲೆಯ ಇನ್ನೋರ್ವ ಆರೋಪಿ ಹರೀಶ್ ನೇತೃತ್ವ ವಹಿಸಿ ಕೊಂಡಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.
ವಿಟ್ಲ ಮನೆಯೊಂ ದನ್ನು ಲೂಟಿ ಮಾಡಲು ತಯಾರಿ ನಡೆಸುತ್ತಿದ್ದ ಮಡಿಕೇರಿ ಕುಶಾಲನಗರದ ಆಸಿಫ್ ರೆಹಮಾನ್, ಶರೀಫ್, ಅಝೀಝ್, ಪುತ್ತೂರು ನಿವಾಸಿಗಳಾದ ಅಬ್ದುಲ್ ರಹಿಮಾನ್, ಪುರಂದರ ನಾಯ್ಕ ಎಂಬವರನ್ನು ಡಿಸಿಐಬಿ ಪೊಲೀಸರು ಮೊನ್ನೆ ತಡರಾತ್ರಿ ಬಂಧಿಸಿದ್ದರು. ವಿಚಾರಣೆ ಸಂದರ್ಭ ಆರೋಪಿಗಳಲ್ಲಿ ಓರ್ವ ತಿಂಗಳ ಹಿಂದೆ ಬಿಪಿನ್ ರೈ ಮನೆಗೆ ಕನ್ನ ಹಾಕಿ ವಿಫಲಗೊಂಡಿರುವುದರ ಬಗ್ಗೆ ತಿಳಿಸಿದ್ದ.
ಬಿಪಿನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಹರೀಶ್ :
ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿ ಶಕ್ತಿನಗರದ ಜೋಕುಲಸಾನ ಎಂಬಲ್ಲಿ ಕೊಲೆಗೀಡಾದ ಡಾನ್ ಹಮೀದ್ ಕೊಲೆ ಆರೋಪಿಗಳಲ್ಲಿ ನಾಪತ್ತೆಯಾಗಿರುವ ಬಂಟ್ವಾಳ ಸಿದ್ದಕಟ್ಟೆ ನಿವಾಸಿ ಹರೀಶ್, ಬಿಪಿನ್ ಮನೆಗೆ ಕನ್ನ ಹಾಕಲು ತಯಾರಿ ನಡೆಸಿದ್ದ. ಫೈನಾನ್ಸ್ ಗಾಗಿ ಬಿಪಿನ್ ಕೈಯಿಂದ ಹಣ ಪಡೆಯುತ್ತಿದ್ದ ಡಾನ್ ಹಮೀದ್ ಆತನ ಮನೆಯಲ್ಲಿ ರೂ.1.5 ಹಣ ಇರುವ ವಿಚಾರ ಹರೀಶ್ಗೆ ತಿಳಿಸಿದ್ದನು. ಅದರಂತೆ ಹರೀಶ್ ದರೋಡೆಕೋರರ ತಂಡಕ್ಕೆ ಬಿಪಿನ್ ಮನೆಗೆ ದಾಳಿ ನಡೆಸಲು ಸೂಚಿಸಿದ್ದು, ಡಾನ್ ಹಮೀದ್ ದಾರಿ ತೋರಿಸುವ ವಿಚಾರವನ್ನು ತಿಳಿಸಿದ್ದನು. ಆದರೆ ಕೊನೆ ಘಳಿಗೆಯಲ್ಲಿ ತಂಡ ಮಾಡಿದ್ದ ಶ್ರಮ ವ್ಯರ್ಥವಾಗಿತ್ತು.
ಆನಂತರ ಹರೀಶ್ ಬಿಪಿನ್ ಜತೆಗೆ ಸೇರಿಕೊಂಡಿರುವುದು ನಿಗೂಢವಾಗಿದೆ. ಬಿಪಿನ್ ಹೇಳಿದಂತೆ ಆತನಿಂದ ಹಫ್ತಾ ಪಡೆದುಕೊಂಡು ಹರೀಶ್ ಮತ್ತು ಇನ್ನಿಬ್ಬರು ಸೇರಿಕೊಂಡು ಉಪಾಯ ವಾಗಿ ಡಾನ್ ಹಮೀದ್ ನನ್ನು ಶಕ್ತಿನಗರದತ್ತ ಬರುವಂತೆ ಮಾಡಿ ಹತ್ಯೆ ನಡೆಸಿದ್ದಾರೆ. ಪೊಲೀಸರು ಹರೀಶನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆತ ಬಂಧನಕ್ಕೊಳಗಾದ ಬಳಿಕವೇ ಇನ್ನಷ್ಟು ರಹಸ್ಯಗಳು ಪೊಲೀಸ್ ಫೈಲ್ ಸೇರಲಿದೆ.