ಮಂಗಳೂರು,ಅ.17: ಅಕ್ಟೋಬರ್ 16 ರಂದು ಪ್ರತಿ ವರುಷ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಕೃಷಿ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲು, ಆ ತಂತ್ರಜ್ಞಾನವು ಸಾಮಾನ್ಯ ಜನರಿಗೆ ದೊರಕುವಂತಾಗಬೇಕು ಎಂದು ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ತಿಳಿಸಿದರು. ನಿನ್ನೆ ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಪ್ರೊ. ಹೆಚ್. ಪಿ. ಸಿ. ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಆಹಾರ ದಿನಾಚರಣೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಂಗಳೂರು ಆಕಾಶವಾಣಿಯು, ವಿಸ್ತರಣಾ ನಿರ್ದೇಶನಾಲಯ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು, ಕೃಷಿ ವಿಜಾನ ಕೇಂದ್ರ, ದೂರದರ್ಶನ ಮತ್ತು ಪ್ರೊಫೆಷನಲ್ ಫಿಶರೀಸ್ ಗ್ರ್ಯಾಜುಯೇಟ್ಸ್ ಫೋರಂ, ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ‘ಜವಾಬ್ದಾರಿಯುತ ಮೀನುಗಾರಿಕೆ ಮತ್ತು ಸುಸ್ಥಿರ ಮೀನುಕೃಷಿ’ ಕುರಿತ ಒಂದು ದಿನದ ವಿಜ್ಞಾನಿಗಳು ಮತ್ತು ರೈತರ ರೇಡಿಯೋ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೃಷಿ ಕುಟುಂಬಗಳು ಕಡಿಮೆಯಾಗುತ್ತಿವೆ. ಕೃಷಿ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಆದರೆ ಕೃಷಿ ಇಲ್ಲದೇ ಯಾವ ದೇಶವೂ ಮುನ್ನಡೆಯಲು ಸಾದ್ಯವಾಗುವುದಿಲ್ಲ. ಕೃಷಿಯತ್ತ ಒಲವು ಮೂಡಿಸಲು ಕೃಷಿ ವಿಜ್ಞಾನ ಕೇಂದ್ರಗಳು ಸಹಕರಿಸಬೇಕು. ಮನುಷ್ಯನು ಪರಿಸರ ಸ್ನೇಹಿಯಾಗಬೇಕು. ಆಗ ಪ್ರಧಾನಿ ಅವರ ಆಶಯದಂತೆ ಸ್ವಚ್ಛ ಭಾರತ ನಿರ್ಮಾಣ ಮಾಡಲು ನಾವೆಲ್ಲಾ ಒಂದಾಗೋಣ ಎಂದು ಸಮಾರಂಭದ ಅಧ್ಯಕ್ಷರಾಗಿ ಆಗಮಿಸಿದ್ದ ಮೀನುಗಾರಿಕೆಯ ಮಹಾವಿದ್ಯಾಲಯದ ಡೀನ್ ಡಾ. ಕೆ.ಎಂ. ಶಂಕರ್ ನುಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಆಕಾಶವಾಣಿಯ ನಿಲಯ ನಿರ್ದೇಶಕರಾದ ಬಿ.ವಿ. ಪದ್ಮ ಅವರು ಪ್ರಪಂಚದಲ್ಲಿ ವಿಭಿನ್ನ ರೀತಿಯ ಮೀನುಗಳಿವೆ. ಅಲಂಕಾರಿಕ ಮೀನುಗಳು ಮನುಷ್ಯನಿಗೆ ಸಂತೋಷವನ್ನು ಕೊಡುತ್ತವೆ. ಮೀನಿಗೆ ಪೌರಾಣಿಕ ಹಿನ್ನೆಲೆ ಇದೆ. ಪುರಾಣ ಕಾಲದಲ್ಲೂ ಮೀನಿನ ಪ್ರಸ್ತಾವನೆ ಇತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಿಂದ ಇಂದು ದೇಶದಲ್ಲಿರುವ ಪ್ರತಿಯೊಬ್ಬರಿಗೂ ಆಹಾರ ಸಿಗುತ್ತಿದೆ. ಅಭಿವೃದ್ದಿ ಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶದಲ್ಲಿ ಕೃಷಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಶುಭಸೂಚನೆ ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ಮನೋಹರ ಪ್ರಸಾದ ಅವರು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ತಪ್ಪಬೇಕು. ಕರಾವಳಿಯಲ್ಲಿ ಮೀನು ಪ್ರಮುಖ ಆಹಾರ ಹಾಗೂ ಪೌಷ್ಟಿಕ ಆಹಾರ. ಇದು ಅಗ್ಗ ದರದಲ್ಲಿ ದೊರಕುವುದರಿಂದ ಎಲ್ಲರೂ ಇದನ್ನು ಕೊಳ್ಳುತ್ತಿದ್ದಾರೆ. ನಮ್ಮ ಆಹಾರ ಪದ್ದತಿ ಬದಲಾಗ್ತಾ ಇದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಸಂತಕುಮಾರ ಪೆರ್ಲ ಅವರು ಆಕಾಶವಾಣಿಯು ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ. ಅದರ ಪ್ರಯೋಜನ ರೈತ ಬಾಂಧವರು ಪಡೆದುಕೊಳ್ಳಬೇಕು ಎಂದು ನುಡಿದರು.
50 ಕ್ಕೂ ಮಿಗಿಲಾಗಿ ರೈತರು ಸಕ್ರೀಯವಾಗಿ ಭಾಗವಹಿಸಿದ್ದರು. ಡಾ. ಶಿವಕುಮಾರ ಎಮ್. ಅವರು ಸ್ವಾಗತಿಸಿದರು. ವಂದನಾರ್ಪಣೆ ಡಾ. ಎಚ್. ಹನುಮಂತಪ್ಪ ಅವರು ಮಾಡಿದರು. ಕಾರ್ಯಕ್ರಮವನ್ನು ಟಿ.ಶ್ಯಾಂ ಪ್ರಸಾದ ನಡೆಸಿಕೊಟ್ಟರು.